ದ್ವಿತೀಯ ಪಿಯುಸಿಯಲ್ಲಿ ಮಗಳ ಸಾಧನೆಗೆ ಮಾಜಿ ಸಚಿವ ಸುನಿಲ್ ಕುಮಾರ್ ಫುಲ್ ಖುಷ್
ಉಡುಪಿ, ಏಪ್ರಿಲ್ 08: ಇಂದು (ಏಪ್ರಿಲ್ 08) ಬುಧವಾರ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಈಗಾಗಲೇ ವಿದ್ಯಾರ್ಥಿಗಳು ತಮ್ಮ ತಮ್ಮ ಫಲಿತಾಂಶ ನೋಡಿ ಫುಲ್ ಖುಷಿಯಾಗಿದ್ದಾರೆ. ಈ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಶೇಕಡಾ 93.90ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎರಡನೇ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ ಪಡೆದಿದೆ.
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಗಣ್ಯರು ಶುಭಾಶಯ ಕೋರುತ್ತಿದ್ದು, ಮಾಜಿ ಸಚಿವ ವಿ.ಸುನಿಲ್ ಕುಮಾರ್ ಶುಭಾಶಯ ಕೋರುವುದರ ಜೊತೆಗೆ ತಮ್ಮ ಮಗಳ ಸಾಧನೆಯನ್ನು ಕೂಡ ಹಂಚಿಕೊಂಡಿದ್ದಾರೆ. ವಿ ಸುನಿಲ್ ಕುಮಾರ್ ಅವರ ಮಗಳು ಪ್ರೇರಣಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 97ರಷ್ಟು ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿರುವ ಮಾಜಿ ಸಚಿವರು, 'ಅಭಿನಂದನೆಗಳು ಮಗಳೇ.. ಮಗಳೇ ಓದಿಯಾಯ್ತಾ ಎಂದು ಪ್ರಶ್ನಿಸಿದಾಗಲೆಲ್ಲಾ, ಒಳ್ಳೆ ಅಂಕ ತೆಗೆದರೆ ಆಯ್ತಲ್ವಾ ಈಗ ಕಿರಿಕಿರಿ ಮಾಡಬೇಡಿ ಎಂದು ಹುಸಿಕೋಪ ಪ್ರದರ್ಶಿಸುತ್ತಿದ್ದ ಮುದ್ದಿನ ಮಗಳು ಪ್ರೇರಣಾ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.97 ರಷ್ಟು ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ.
ಪರೀಕ್ಷೆಯೆಂದರೆ ಮಕ್ಕಳಿಗಿಂತ ಹೆತ್ತವರಿಗೆ ಕಾಳಜಿ ಹೆಚ್ಚು. ಆದರೆ ನಾವೆಂದೂ ಅಂಕ ಗಳಿಕೆಯ ಒತ್ತಡವನ್ನು ಅವಳ ಮೇಲೆ ಹೇರಿರಲಿಲ್ಲ. ಆದರೆ ತನ್ನ ಜವಾಬ್ದಾರಿಯನ್ನು ಅರಿತು ಪರಿಶ್ರಮದಿಂದ ಓದಿದಳು. ಜ್ಞಾನಸುಧಾದ ಉಪನ್ಯಾಸಕರ ತಂಡ ಸೂಕ್ತ ಮಾರ್ಗದರ್ಶನ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲೇಬೇಕು.
ಒಬ್ಬ ವಿಧೇಯ ವಿದ್ಯಾರ್ಥಿನಿಯಾಗಿ ಓದು ಹಾಗೂ ಮುಂದಿನ ಗುರಿಯೆಡೆಗಿನ ನಿನ್ನ ಸ್ಪಷ್ಟತೆಯ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ವಿದ್ಯಾರ್ಥಿ ಜೀವನದಲ್ಲಿ ಸುಖಕ್ಕಿಂತ ಪರಿಶ್ರಮದ ಹಾದಿ ಮುಖ್ಯ ಎಂಬ ನಮ್ಮ ಕಿವಿ ಮಾತನ್ನು ಸದಾ ಮನಸಿನಲ್ಲಿಟ್ಟುಕೊಂಡಿದ್ದ ಮಗಳು ಆರು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ ಬರೆದು ನಿರಂತರ ಶ್ರಮ ವಹಿಸಿದ್ದಳು. ತನ್ನ ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎಂಬ ಬೇಸರ ಅವಳಿಗಿದ್ದರೂ ತಂದೆಯಾಗಿ ಅವಳ ಈ ಸಾಧನೆ ಸಂತೋಷ ನೀಡಿದೆ. ಮತ್ತೊಮ್ಮೆ ಅಭಿನಂದನೆಗಳು ಮಗನೇ, ಪುಸ್ತಕದ ಪಾಠದಷ್ಟೆ ಜೀವನದ ಪಾಠವೂ ಮುಖ್ಯ. ಆ ಸವಾಲನ್ನು ಅರ್ಥ ಮಾಡಿಕೊಳ್ಳುವುದೇ ನಿಜವಾದ ಭವಿಷ್ಯ' ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications