ಮಾಧ್ಯಮದಲ್ಲಿ ಅಸಾಧ್ಯವಾದುದು ಚರ್ಚೆಯಾಗುತ್ತಿದೆ:ಸಿಎಂ ಕುಮಾರಸ್ವಾಮಿ
ಉಡುಪಿ, ಸೆಪ್ಟೆಂಬರ್.07: ಕರಾವಳಿ ಪ್ರವಾಸದಲ್ಲಿರುವ ಸಿಎಂ ಇಂದು ಶುಕ್ರವಾರ ಮುಂಜಾನೆ ಮಂಗಳೂರು ಏರ್ ಪೋರ್ಟ್ ನಲ್ಲಿ ಇಳಿದು ಬಳಿಕ ರಸ್ತೆ ಮೂಲಕ ಉಡುಪಿಗೆ ಬಂದರು. ಸಭೆಗೂ ಮುನ್ನ ಕೃಷ್ಣನ ದರ್ಶನ ಪಡೆದ ಸಿಎಂ, ತನ್ನ ಕೆಲಸ ಕಾರ್ಯಗಳಿಗೆ ಯಾವುದೇ ವಿಘ್ನಗಳಾಗದಂತೆ, ಸರ್ಕಾರ ಸುಗಮವಾಗಿ ಸಾಗಲೆಂದು ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಉಡುಪಿಯ ಮಣಿಪಾಲದ ರಜತಾದ್ರಿಯಲ್ಲಿರುವ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ನಾಯಕರು ಹಾಗೂ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿಎಂ, ಜಿಲ್ಲೆಯ ನಾಯಕರು ನೀಡಿದ ಸಲಹೆಯಂತೆ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣ ಭಾಗಗಳ ಅಭಿವೃದ್ಧಿಗಾಗಿ 100 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕರಾವಳಿ ಭಾಗದಲ್ಲಿ ಕಾಲುಸಂಕದ ಸಮಸ್ಯೆಗಳಿದ್ದು, ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಅವುಗಳ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ಇಲ್ಲಿನ ಜನರಿಗೆ ನೀರಿನ ಸಮಸ್ಯೆಯಿದ್ದು, ವಾರಾಹಿ ನೀರನ್ನು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ.
ಮರಳಿನ ಮೇಲಿರುವ ಕಾನೂನನ್ನು ಕೂಡ ಸರಳಗೊಳಿಸಲಿದ್ದೇವೆ. ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಶಾಸಕರು ಭಾಗಿಯಾದರು.
ಕಳೆದೆರೆಡು ದಿನಗಳಿಂದ ಬೆಳಗಾವಿ ಪಿ.ಎಲ್.ಡಿ ಬ್ಯಾಂಕ್ ಚುನಾವಣೆ ವಿಚಾರ ಹಲವು ಚರ್ಚೆಗಳಿಗೆ ಕಾರಣವಾಗಿದ್ದು, ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಪಿ.ಎಲ್.ಡಿ ಬ್ಯಾಂಕ್ ವಿವಾದ ಚರ್ಚೆಯಾಗಿದ್ದು ಮಾಧ್ಯಮಗಳಲ್ಲಿ ಮಾತ್ರ ಎಂದು ತಿಳಿಸಿದ್ದಾರೆ.
ಎಲ್ಲವೂ ಸಾಮರಸ್ಯದಿಂದ ನಡೆಯುತ್ತಿದ್ದು, ನನ್ನ ಸರ್ಕಾರ ಸುಭದ್ರವಾಗಿದೆ. ಚುನಾವಣೆಯಲ್ಲಿ ಜಯವಾಗಿರುವುದು ಯಾವುದೇ ಬಣಕ್ಕೆ ಅಲ್ಲ. ಕಾಂಗ್ರೆಸ್ ಪಕ್ಷಕ್ಕೆ. ನನ್ನ ಜೊತೆ ಎಲ್ಲರೂ ಸುಮಧುರ ಬಾಂಧವ್ಯದಿಂದ ಇದ್ದಾರೆ. ಮಾಧ್ಯಮದಲ್ಲಿ ಅಸಾಧ್ಯವಾದುದು ಚರ್ಚೆಯಾಗ್ತಿದೆ. ನಿಮ್ಮ ಖುಷಿಯಂತೆ ಚರ್ಚೆಯಾಗಲಿ.
ನಾನು ಯಾರನ್ನು ತಡೆಯೋದಿಲ್ಲ. ಸಿದ್ದರಾಮಯ್ಯ ವಿದೇಶಕ್ಕೆ ಹೋಗೋದು ತಪ್ಪಾ. ಅವರೇನು ಒಬ್ಬರೇ ಹೊಗಿದ್ದಾರಾ ಎಂದು ಪ್ರಶ್ನಿಸಿದರು.
ಜೆಡಿಎಸ್ ಉಪಾಧ್ಯಕ್ಷ ಅನ್ವರ್ ಷರೀಫ್ ನಿಧನಕ್ಕೆ ಸಂತಾಪ
ಜನತಾದಳ (ಎಸ್) ಉಪಾಧ್ಯಕ್ಷ ಅನ್ವರ್ ಷರೀಫ್ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಶೋಕವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಜೆಡಿ (ಎಸ್) ಪಕ್ಷವನ್ನು ಬೆಳೆಸುವಲ್ಲಿ ಷರೀಫ್ ಅವರ ನಿಸ್ಪೃಹ ಸೇವೆ ಅನನ್ಯ ಎಂದು ಮುಖ್ಯಮಂತ್ರಿಗಳು ಸ್ಮರಿಸಿಕೊಂಡಿದ್ದಾರೆ. ಇವರ ನಿಧನದಿಂದ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಂತಾಗಿದೆ.
ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಈ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.












Click it and Unblock the Notifications