ಕೋಟ ಶ್ರೀನಿವಾಸ್ ಪೂಜಾರಿಗೆ ಜಿಲ್ಲೆಯ ಶಾಸಕರೇ ಅಡ್ಡಗಾಲು: ಬಿಲ್ಲವ ಮುಖಂಡರ ಆಕ್ರೋಶ
ಉಡುಪಿ, ಸೆಪ್ಟೆಂಬರ್ 17: ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವರನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡದೇ ಇರುವುದಕ್ಕೆ ಬಿಲ್ಲವ ಸಮುದಾಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರನ್ನು ಉಡುಪಿ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಮಾಡುವಂತೆ ಬಿಲ್ಲವ ಮುಖಂಡರು ಇಂದು ಮನವಿ ಮಾಡಿದ್ದಾರೆ.
ಉಡುಪಿ ಸಮೀಪದ ಕಟಪಾಡಿಯ ಬಿಲ್ಲವರ ಶಕ್ತಿ ಕೇಂದ್ರ ವಿಶ್ವನಾಥ ಕ್ಷೇತ್ರದಲ್ಲಿ ಸಭೆ ನಡೆಸಿದ ಬಿಲ್ಲವ ಮುಖಂಡರು, ಮುಖ್ಯಮಂತ್ರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಿನ್ನೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿಯಾಗಿ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ನಿಯೋಜಿಸಲಾಗಿತ್ತು, ಮಾತ್ರವಲ್ಲ ದೂರದ ಬಸವರಾಜ್ ಬೊಮ್ಮಾಯಿ ಅವರನ್ನು ಉಡುಪಿಯ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಇಂದು ಸಭೆ ಸೇರಿದ ಬಿಲ್ಲವ ಸಂಘಗಳ ಮುಖಂಡರು ಬಿಜೆಪಿ ಹೈಕಮಾಂಡ್ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡರು.

ಉಡುಪಿ ಜಿಲ್ಲೆಯ ಐವರು ಶಾಸಕರೂ ಬಿಜೆಪಿಯವರೇ ಆಗಿದ್ದಾರೆ. ಹೀಗಿದ್ದರೂ ಈ ಶಾಸಕರೇ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಉಡುಪಿ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡದಂತೆ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ. ಇವರಿಗೆಲ್ಲ ಚುನಾವಣೆ ಬಂದಾಗ ಬಿಲ್ಲವರ ಮತಗಳು ಬೇಕು. ಆದರೆ ಒಬ್ಬ ನಿಷ್ಟಾವಂತ ಬಿಲ್ಲವ ಮುಖಂಡ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಅಡ್ಡಗಾಲು ಹಾಕುತ್ತಾರೆ. ಕೋಟ ಉಡುಪಿ ಜಿಲ್ಲೆಯವರು. ಹೀಗಾಗಿ ಅವರನ್ನು ಉಸ್ತುವಾರಿ ಮಾಡಿದರೆ ಜಿಲ್ಲೆಯೂ ಅಭಿವೃದ್ಧಿಯಾಗುತ್ತದೆ. ಇನ್ನೂ ಕಾಲ ಮಿಂಚಿಲ್ಲ, ಬಿಜೆಪಿ ಹೈಕಮಾಂಡ್ ನಮ್ಮ ಮನವಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಹತ್ತೊಂಬತ್ತರಂದು ಮತ್ತೆ ಸಮುದಾಯದ ಮುಖಂಡರು ಸಭೆ ಸೇರಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಗುಡುಗಿದ್ದಾರೆ.












Click it and Unblock the Notifications