ಅಕ್ರಮ ಪಡಿತರ ದಾಸ್ತಾನು ಮೇಲೆ ದಾಳಿ: 600 ಕ್ವಿಂಟಾಲ್ ಗೂ ಅಧಿಕ ಅಕ್ಕಿ ವಶ
ಉಡುಪಿ, ನವೆಂಬರ್ 2: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಶಿರಿಯಾರ ಗ್ರಾಮದಲ್ಲಿ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಮಳಿಗೆ ಮೇಲೆ ದಾಳಿ ನಡೆಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ತಂಡ ಭಾರೀ ಅಕ್ಕಿ ದಾಸ್ತಾನನ್ನು ವಶಕ್ಕೆ ಪಡೆದಿದೆ.
ಆರೋಪಿಗಳು ಮಾರಾಟ ಮಾಡಲು ಇರಿಸಿದ್ದ 600 ಕ್ವಿಂಟಾಲ್ ಗೂ ಅಧಿಕ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಲ್ಲದೆ, ಅಕ್ರಮವಾಗಿ ಬಳಸಿದ ವಾಹನಗಳನ್ನೂ ವಶಕ್ಕೆ ಪಡೆದಿದ್ದಾರೆ. ಕಳೆದ ತಿಂಗಳಷ್ಟೇ ಕುಂದಾಪುರದಲ್ಲಿ ಇಂತಹದ್ದೇ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದರು. ಅಕ್ರಮ ಪಡಿತರ ಅಕ್ಕಿ ಸಂಗ್ರಹ ಮತ್ತು ಮಾರಾಟದ ದಂಧೆಯೇ ಉಡುಪಿಯಲ್ಲಿದ್ದು, ಒಂದೇ ತಿಂಗಳಲ್ಲಿ ಎರಡನೇ ದಾಳಿ ಇದಾಗಿದೆ.
ಈ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಯಾವುದೇ ಕಾರಣಕ್ಕೂ ಬಡವರ ಅಕ್ಕಿಯನ್ನು ಮಾರಾಟ ಮಾಡುವವರನ್ನು ಬಿಡುವುದಿಲ್ಲ. ಅಂಥವರನ್ನು ಮಟ್ಟ ಹಾಕುತ್ತೇವೆ. ಇವತ್ತು ಆರು ನೂರು ಕ್ವಿಂಟಾಲ್ ಗೂ ಹೆಚ್ಚಿನ ಅಕ್ಕಿಯನ್ನು ವಶಪಡಿಸಿಕೊಂಡಿದ್ದೇವೆ ಎಂದರು.

ಕಳೆದ ತಿಂಗಳು ಕುಂದಾಪುರದಲ್ಲೂ ಇಂತಹ ಪ್ರಕರಣ ನಡೆದಿತ್ತು. ಬಡವರು ತಮ್ಮ ಅಕ್ಕಿಯನ್ನು ಮಾರಾಟ ಮಾಡಬೇಡಿ. ಯಾರಾದರೂ ಮಾರಾಟ ಮಾಡುವವರು ಕಂಡು ಬಂದರೆ ಮಾಹಿತಿ ನೀಡಿ, ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾಧಿಕಾರಿ ಗುಡುಗಿದ್ದಾರೆ. ಆದರೆ ಆರೋಪಿಗಳ ವಿವರ ಮತ್ತು ವಶಪಡಿಸಿಕೊಳ್ಳಲಾದ ಸ್ವತ್ತುಗಳ ವಿವರವನ್ನು ಇಲಾಖೆ ಇನ್ನಷ್ಟೇ ನೀಡಬೇಕಿದೆ.












Click it and Unblock the Notifications