ಮಂಚಿಕೆರೆಯಲ್ಲಿ ಬಿರುಕು ಬಿಟ್ಟ ಭೂಮಿ; ಜನರ ಆತಂಕ
ಉಡುಪಿ, ಜೂನ್ 19: ಉಡುಪಿಯ ಮಣಿಪಾಲ ಸಮೀಪದ ಮಂಚಿಕೆರೆ ನಾಗಬ್ರಹ್ಮಸ್ಥಾನ ಮುಂಭಾಗದ ಕಾಲನಿ ಸಮೀಪದ ಭೂಮಿ ಬಿರುಕು ಬಿಟ್ಟಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
2014ರ ಜುಲೈಯಲ್ಲಿ ಮಂಚಿಕೆರೆಯ ಸಮೀಪ ಭೂಮಿಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿತ್ತು. ಈಗ ಮತ್ತೊಮ್ಮೆ ಬಿರುಕು ಕಾಣಿಸಿಕೊಂಡಿದ್ದು, ಅದರ ಗಾತ್ರ ಹೆಚ್ಚಿದೆ. ಬಿರುಕು ವಿಸ್ತಾರಗೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಅದರ ವ್ಯಾಪ್ತಿ ಹೆಚ್ಚುತ್ತಿದೆ. ಇದರಿಂದ ಇಲ್ಲಿಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಭೂಮಿ ಬಿರುಕು ಬಿಡುತ್ತಿರುವ ಕಾರಣ ಇಲ್ಲಿಯ ಕೆಲ ಮನೆ, ಬಾವಿಗೆ ಹಾನಿಯಾಗಿದೆ. ಇಲ್ಲಿನ ಮನೆಯೊಂದರ ಗೋಡೆ, ಬಾವಿಯ ಕಟ್ಟೆ ಹಾಗೂ ಕಾಲನಿ ಸಂಪರ್ಕಿಸುವ ರಸ್ತೆಯಲ್ಲಿ ಕೂಡ ಬಿರುಕು ಕಾಣಿಸಿಕೊಂಡಿದೆ.

8 ಇಂಚು ಅಗಲ, 200 ಮೀಟರ್ ಉದ್ದದವರೆಗೆ ಭೂಮಿ ಬಾಯಿ ಬಿಟ್ಟಿದೆ. ಆಳವೂ ಇದೆ. ಇದನ್ನು ನೋಡಲು ಜನರು ಜಮಾಯಿಸುತ್ತಿದ್ದಾರೆ. ಆದರೆ ಭೂಮಿ ಬಿರುಕು ಬಿಡಲು ಕಾರಣವೇನು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಕುರಿತು ಭೂ ವಿಜ್ಞಾನಿಗಳು ಸ್ಥಳಕ್ಕೆ ಆಗಮಿಸಿ ಅಧ್ಯಯನ ನಡೆಸಬೇಕೆಂದು ಸ್ಥಳೀಯರು ಕೋರಿದ್ದಾರೆ.












Click it and Unblock the Notifications