ಕೃಷ್ಣನ ನಾಡು ಉಡುಪಿಯಲ್ಲಿ ಅದ್ದೂರಿ ರಥೋತ್ಸವ
ಉಡುಪಿ, ಜನವರಿ 15: ಪೊಡವಿಗೊಡೆಯನಾದ ಕೃಷ್ಣನ ನಾಡು ಉಡುಪಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಕಳೆಗಟ್ಟಿದೆ. ಸಾವಿರಾರು ಭಕ್ತಾಧಿಗಳ ಮಧ್ಯೆ ವೈಭವದ ರಥೋತ್ಸವ ಸಂಪನ್ನಗೊಂಡಿದೆ. ಒಂದೆಡೆ ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದರೆ, ಇನ್ನೊಂದೆಡೆ ರಾತ್ರಿ ಹೊತ್ತು ಸಪ್ತೋತ್ಸವ ಮತ್ತು ಸಂಕ್ರಾಂತಿಯ ಹಗಲು ಉತ್ಸವ ಭಕ್ತರನ್ನು ಸೊಜಿಗದಂತೆ ಸೆಳೆಯಿತು.
ಕೃಷ್ಣ ಮಠದ ವಾರ್ಷಿಕ ಪರ್ವವಾಗಿ ಮಕರ ಸಂಕ್ರಾಂತಿಗೆ ವಿಶೇಷ ಸ್ಥಾನವಿದೆ. 800 ವರ್ಷಗಳ ಇತಿಹಾಸವಿರುವ ಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿಯ ದಿನ ವಿಶೇಷ ಉತ್ಸವ ನಡೆಯುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಏಕಕಾಲದಲ್ಲಿ 3 ರಥಗಳನ್ನು ಎಳೆಯಲಾಗುತ್ತದೆ. ಈ ಬಾರಿಯಂತೂ ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಉತ್ಸವಕ್ಕೆ ಮೊದಲು ಮಧ್ವ ಸರೋವರದಲ್ಲಿ ಆಕರ್ಷಕ ತೆಪ್ಪೋತ್ಸವ ನಡೆಯಿತು. ರಥದ ಆಕಾರದಲ್ಲಿ ಸಿದ್ಧಗೊಂಡ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಕೆರೆಯನ್ನು ಸುತ್ತಿ ಬರಲಾಯಿತು. ಬಳಿಕ 3 ರಥಗಳಲ್ಲಿ ಅನಂತೇಶ್ವರ, ಚಂದ್ರಮೌಳೀಶ್ವರ ಮತ್ತು ಮುಖ್ಯಪ್ರಾಣ ದೇವರನ್ನು ಕುಳ್ಳಿರಿಸಿ ತೇರು ಎಳೆಯಲಾಯಿತು.

ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ತೇರು ಎಳೆದರು. ಚೆಂಡೆ ನಾಸಿಕ್ ಬ್ಯಾಂಡ್ ಭಜನೆಯೊಂದಿಗೆ 3 ರಥಗಳು ಗಂಭೀರವಾಗಿ ರಥಬೀದಿಯಲ್ಲಿ ಸಾಗಿ ಬಂದವು. ಬಳಿಕ ಸಂಪ್ರದಾಯದಂತೆ ಸುಡುಮದ್ದು ಪ್ರದರ್ಶನ ನಡೆದು ನೋಡುಗರ ಮನಸೂರೆಗೊಂಡಿತು. ಅಷ್ಟ ಮಠದ ಶ್ರೀಗಳಾದ ಪರ್ಯಾಯ ಪಲಿಮಾರು ಶ್ರೀ, ಸೋದೆ, ಕಾಣಿಯೂರು ಶ್ರೀಗಳು ಉಪಸ್ಥಿತರಿದ್ದರು.
ಕೃಷ್ಣಮಠದ ವಾರ್ಷಿಕ ಪರ್ವ ಮಕರ ಸಂಕ್ರಾಂತಿಯ ರಥೋತ್ಸವ ನಡೆದ ಬಳಿಕ ಇಂದು ಬೆಳಗ್ಗೆ ಚೂರ್ಣೋತ್ಸವ ನಡೆಯಿತು. ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು. ಬಳಿಕ ಅಮೃತ ಸ್ನಾನ ನಡೆಯಿತು. ಈ ಮೂಲಕ ಏಳು ದಿನಗಳಿಂದ ನಡೆಯುತ್ತಿದ್ದ ಸಪ್ತೋತ್ಸವ ಉಡುಪಿಯಲ್ಲಿ ಸಂಪನ್ನಗೊಂಡಿತು.












Click it and Unblock the Notifications