ಹಳಬರನ್ನು ಕಡೆಗಣಿಸದಿರಿ: ಯಡಿಯೂರಪ್ಪಗೆ ಈಶ್ವರಪ್ಪ ಆಗ್ರಹ
ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಮನೆಯಲ್ಲಿ ನಡೆದ ರಾಜ್ಯ ಬಿಜೆಪಿ ಅತೃಪ್ತ ನಾಯಕರ ಸಭೆಯ ನಂತರ, ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆ.
ತುಮಕೂರು, ಜನವರಿ 18: ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷದಲ್ಲಿನ ಹಳಬರು ಮೂಲೆಗುಂಪಾಗಿದ್ದು, ಅವರಿಗೆ ಸೂಕ್ತ ಸ್ಥಾನಮಾನ ಸಿಗಬೇಕಿದೆ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ಮಂಗಳವಾರ, ಮಾಜಿ ಸಚಿವ ಸೊಗಡು ಶಿವಣ್ಣ ಮನೆಯಲ್ಲಿ ನಡೆದ ರಾಜ್ಯ ಬಿಜೆಪಿ ನಾಯಕರ ಅತೃಪ್ತ ನಾಯಕರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರ ತಿಳಿಸಿದರು.
''ಯಡಿಯೂರಪ್ಪ ಅವರು, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಹೊಸಬರಿಗೆ ಪಕ್ಷದ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಹೊಸಬರಿಗೆ ಪಕ್ಷದ ಹಿರಿಯ ನಾಯಕರ ಪರಿಚಯವಿಲ್ಲ. ಕೆಲವು ಜಿಲ್ಲೆಗಳಲ್ಲಿ ಪದಾಧಿಕಾರಿಗಳ ಬದಲಾವಣೆಯಾಗಬೇಕು'' ಎಂದು ಆಗ್ರಹಿಸಿದರು.[ಸೊಗಡು ಮನೆಯಲ್ಲಿ ಸಭೆ ಸೇರಿರುವ ಅತೃಪ್ತರು ಯಾರು?]
ಅಂತೆಯೇ, ಯಡಿಯೂರಪ್ಪ ಅವರು ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕೊಡಬೇಕು ಎಂದು ಹೇಳಿದ ಅವರು, ಎಲ್ಲಾ ಬದಲಾವಣೆಗಳಿಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಳಿ ಹೋಗಿ ಎಂದು ಹೇಳುವುದನ್ನು ಅವರು ಬಿಡಬೇಕು ಎಂದು ತಾಕೀತು ಮಾಡಿದರು.
ಇನ್ನು, ತಮ್ಮ ರಾಯಣ್ಣ ಬ್ರಿಗೇಡ್ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿದ ಅವರು, '' ಜ.26 ರಂದು ರಾಯಣ್ಣ ಬಲಿದಾನ ದಿನಾಚರಣೆ ಆಚರಿಸುತ್ತೇವೆ . 2 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಹಲವು ಮಠಾಧೀಶರು ಭಾಗವಹಿಸುತ್ತಿದ್ದಾರೆ'' ಎಂದು ವಿವರಿಸಿದರು.