'ಡೋಂಟ್ ಟಾಕ್ ಲೈಕ್ ದಟ್', ಬಿಜೆಪಿ ಶಾಸಕನ ಮೇಲೆ ಪರಮೇಶ್ವರ್ ಗರಂ
ತುಮಕೂರು, ಜೂನ್ 15: ಬಿಜೆಪಿ ಶಾಸಕ ಮಾಧುಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ನಡುವೆ ಮಾತಿನ ಚಕಮಕಿ ನಡೆದಿದೆ. ಪರಮೇಶ್ವರ್ ಅವರು ಏರು ದನಿಯಲ್ಲಿಯೇ ಮಾಧುಸ್ವಾಮಿ ಅವರ ವಿರುದ್ಧ ಗುಡುಗಿದ್ದಾರೆ.
ಜಿಲ್ಲಾ ಪಂಚಾಯಿತಿ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮಾತಿನ ಚಕಮಕಿ ನಡೆದಿದ್ದು, ಸುಮಾರು ಅರ್ಧ ಗಂಟೆಗಳ ಕಾಲ ಬಿಜೆಪಿ ಶಾಸಕ ಮಾಧುಸ್ವಾಮಿ ಮತ್ತು ಪರಮೇಶ್ವರ್ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಅಂತಿಮವಾಗಿ ಸಿಟ್ಟಿಗೆದ್ದ ಪರಮೇಶ್ವರ್ ಅವರು, 'ಡೋಂಟ್ ಟಾಕ್ ಲೈಕ್ ದಟ್' ಎಂದು ಸಿಟ್ಟಿನಿಂದಲೇ ಮಾಧುಸ್ವಾಮಿಯನ್ನು ಗದರಿದ್ದಾರೆ.
ಡಿಸಿಎಂ ನೇತೃತ್ವದಲ್ಲಿ ನಡೆದ ಬರನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಮಾಧುಸ್ವಾಮಿ ಡಿಸಿಎಂ ವಿರುದ್ಧ ಹರಿಹಾಯ್ದರು. 'ನಿಮ್ಮ ಬೇಜವಾಬ್ದಾರಿಯಿಂದ ಯಾವ ಕೆಲಸವೂ ಆಗುತ್ತಿಲ್ಲ. ನಿಮ್ಮ ಮಾತಿಗೆ ಅಧಿಕಾರಿಗಳು ಕಿಮ್ಮತ್ತುಕೊಡುತ್ತಿಲ್ಲ. ನಮ್ಮ ಜಿಲ್ಲೆ ಸರ್ವನಾಶ ಆಗುತ್ತಿದೆ' ಎಂದು ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ತಿಂಗಳು ನಡೆದ ಬರ ಪರಿಹಾರ ಸಭೆಗೆ ಆಹ್ವಾನ ನೀಡದೆ ಇರುವುದಕ್ಕೆ ಕೂಡ ಮಾಧುಸ್ವಾಮಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಶಾಸಕರಾದ ಎ.ಎಸ್ . ಜಯರಾಮ್ , ಬಿ.ಸಿ.ನಾಗೇಶ್ ಕೂಡ ಸಹಮತ ವ್ಯಕ್ತಪಡಿಸಿದರು. ಚುನಾವಣಾ ನೀತಿ ಸಂಹಿತೆ ಇದ್ದುದರಿಂದ ಸಭೆಗೆ ಕರೆಯಲಿಲ್ಲ ಎಂದು ಅಧಿಕಾರಿಯೋರ್ವರು ನೀಡಿದ ಸಮಜಾಯಿಷಿಯನ್ನೂ ಒಪ್ಪದ ಮಾಧುಸ್ವಾಮಿ ನಿರಂತರ ವಾಗ್ದಾಳಿ ನಡೆಸಿದರು.
ಮಾಧುಸ್ವಾಮಿಯವರ ಆರೋಪದಿಂದ ಸಿಟ್ಟಾದ ಡಿಸಿಎಂ ಪರಮೇಶ್ವರ್, 'ಡೋಂಟ್ ಟಾಕ್ ಲೈಕ್ ದಟ್' ಎಂದು ಸಿಟ್ಟಾಗಿ ಪ್ರತಿಕ್ರಿಯೆ ನೀಡಿದರು. ಇವರಿಬ್ಬರ ನಡುವಿನ ಮಾತಿನ ಚಕಮಕಿ ಸುಮಾರು ಅರ್ಧಗಂಟೆ ಕಾಲ ನಡೆಯಿತು.












Click it and Unblock the Notifications