Tumkur: ಮೂರು ವರ್ಷದಲ್ಲಿ ತುಮಕೂರು ಚಿತ್ರಣವೇ ಬದಲಾಗಲಿದೆ; ಕೇಂದ್ರ ಸಚಿವ ವಿ. ಸೋಮಣ್ಣ
ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ತುಮಕೂರು ನಗರದ ಅಭಿವೃದ್ಧಿ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಅದಕ್ಕೆ ತಕ್ಕಂತೆ ತುಮಕೂರು ನಗರ ಕೂಡ ನಿರೀಕ್ಷೆಗೂ ಮೀರಿ ಬೆಳವಣಿಗೆಯಾಗುತ್ತಿದೆ. ಇನ್ನು ಮೂರೇ ವರ್ಷದಲ್ಲಿ ತುಮಕೂರು ನಗರದ ಚಿತ್ರಣವೇ ಬದಲಾಗಲಿದೆ ಎಂದು ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭವಿಷ್ಯ ನುಡಿದಿದ್ದಾರೆ. ತುಮಕೂರು ಅಭಿವೃದ್ಧಿಗೆ ತಾವು ಎಲ್ಲಾ ರೀತಿಯ ಕೊಡುಗೆ ನೀಡುವುದಾಗಿ ಹೇಳಿದ್ದಾರೆ.
ತುಮಕೂರು ವೇಗವಾಗಿ ಬೆಳೆಯುತ್ತಿದ್ದು ಭೂಮಿ ಬೆಲೆ ಗಗನಕ್ಕೇರುತ್ತಿದೆ. ಭವಿಷ್ಯದಲ್ಲಿ ತುಮಕೂರು ಸುತ್ತಮುತ್ತ ಜಾಗದ ಬೆಲೆಗಳು ಇನ್ನಷ್ಟು ಹೆಚ್ಚಲಿದೆ. ನೆರೆಯ ಆಂಧ್ರದವರು ಈಗಾಗಲೇ ಒಂದಕ್ಕೆ ಎರಡರಷ್ಟು ಬೆಲೆ ನೀಡಿ ಭೂಮಿ ಖರೀದಿ ಮಾಡುತ್ತಿದ್ದಾರೆ. ಜಿಲ್ಲೆಯ ವೀರಶೈವ, ಲಿಂಗಾಯತ ಸಮುದಾಯದ ಹಿರಿಯರು ಸೇರಿಕೊಂಡು ಐದು ಎಕರೆ ಜಾಗ ಖರೀದಿ ಮಾಡಿ ಹಾಸ್ಟೆಲ್ ನಿರ್ಮಾಣಕ್ಕೆ ಮುಂದಾದರೆ ನಾನು ಕೂಡ ನನ್ನಿಂದಾದ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಳೆದ 25 ವರ್ಷಗಳಿಂದ ಜಿ.ಎಸ್. ಬಸವರಾಜು ಸಂಸದರಾಗಿ ಜಿಲ್ಲೆಗೆ ನೀಡಿದ್ದ ಕಾರ್ಯಕ್ರಮಗಳನ್ನು ಪೂರೈಸುತ್ತೇನೆ. ತುಮಕೂರಿಗೆ ಈಗಾಗಲೇ ಹಲವು ರೈಲುಗಳನ್ನು ನೀಡಲಾಗಿದೆ. ಪ್ರಯಾಣಿಕರ ಕೋರಿಕೆಯಂತೆ ತುಮಕೂರು ಮೂಲಕ ಮಂಗಳೂರಿಗೆ ರೈಲು ಸಂಚಾರ ಆರಂಭಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಅಗತ್ಯ ಕಂಡು ಬಂದರೆ ತುಮಕೂರು-ಮಂಗಳೂರು ರೈಲು ಸಂಚಾರ ಆರಂಭಿಸುತ್ತೇನೆ ಎಂದು ಭರವಸೆ ನೀಡಿದರು.
ರೈಲ್ವೆ ಯೋಜನೆಗಳ ಅಭಿವೃದ್ಧಿಗೆ ವೇಗ
ತುಮಕೂರು ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಕೆಳಸೇತುವೆ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮೂರು ವರ್ಷಗಳಲ್ಲಿ ಇಡೀ ತುಮಕೂರು ಜಿಲ್ಲೆಯ ಚಿತ್ರಣವೇ ಬದಲಾಗಲಿದೆ. ಕೈಗಾರಿಕೆಗಳು, ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾಗುತ್ತಿದ್ದು ತುಮಕೂರು ಜಿಲ್ಲೆಯ ಅಭಿವೃದ್ಧಿಯನ್ನು ಎಲ್ಲರೂ ಗಮನಿಸುತ್ತಿದ್ದಾರೆ ಎಂದರು.
ತುಮಕೂರು - ದಾವಣಗೆರೆ ರೈಲು ಕಾಮಗಾರಿ ಕೂಡ ಭರದಿಂದ ಸಾಗುತ್ತಿದ್ದು 2027ರ ವೇಳೆಗೆ ಉದ್ಘಾಟನೆಯಾಗಲಿದೆ. ತುಮಕೂರು ಬೆಂಗಳೂರು ದಶಪಥ ಕಾಮಗಾರಿ ಕೂಡ ವೇಗವಾಗಿ ನಡೆಯುತ್ತಿದ್ದು 2026ರ ಡಿಸೆಂಬರ್ ವೇಳೆಗೆ ಪೂರ್ತಿಯಾಗುವ ಸಾಧ್ಯತೆ ಇದೆ.
ಇದೀಗ ತುಮಕೂರು ಕಿರೀಟಕ್ಕೆ ಮತ್ತೊದು ಗರಿ ಎನ್ನುವಂತೆ ಅಂತಾರಾಷ್ಟ್ರೀ ಕ್ರಿಕೆಟ್ ಸ್ಟೇಡಿಯಂ ಕೂಡ ನಿರ್ಮಾಣವಾಗಲಿದ್ದು ಡಿಸೆಂಬರ್ 5ರಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.












Click it and Unblock the Notifications