ತುಮಕೂರು; ರಾಜೀನಾಮೆ ಸಂದೇಶ ರವಾನಿಸಿದ ಬಿಜೆಪಿ ಶಾಸಕ!
ತುಮಕೂರು, ಅಕ್ಟೋಬರ್ 13; ಉತ್ತಮ ನಿಗಮ-ಮಂಡಳಿಗಾಗಿ ಬೇಡಿಕೆ ಇಟ್ಟಿರುವ ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ರಾಜೀನಾಮೆ ಸಂದೇಶವನ್ನು ರವಾನೆ ಮಾಡಿದ್ದಾರೆ. ತಮ್ಮ ಬೇಡಿಕೆ ಈಡೇರಿಸಲು ನವೆಂಬರ್ ತಿಂಗಳ ಗಡುವನ್ನು ಪಕ್ಷದ ನಾಯಕರಿಗೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರದ ಬಿಜೆಪಿ ಶಾಸಕ ಮಸಾಲ ಜಯರಾಂ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಮ್ಮನ್ನು ಕಡೆಗಣಿಸಿದರೆ ಪಕ್ಷದಲ್ಲಿ ಇರುವುದಿಲ್ಲ. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ" ಎಂದು ಎಚ್ಚರಿಕೆ ನೀಡಿದ್ದಾರೆ.
"ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಒಳ್ಳೆಯ ನಿಗಮ-ಮಂಡಳಿ ಕೊಡಿ ಎಂದು ಕೇಳಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳಿಗೆ ಕೇಳಿದ್ದೇವೆ. ನವೆಂಬರ್ ತಿಂಗಳ ಗುಡುವು ಕೊಟ್ಟಿದ್ದೇನೆ. ಕೊಟ್ಟರೆ ಕೊಡಲಿ" ಎಂದು ಶಾಸಕರು ಹೇಳಿದರು.
"ಇಲ್ಲದಿದ್ದರೆ ಏನು ಮಾಡಬೇಕೆಂದು ನನಗೆ ಗೊತ್ತಿದೆ. ಸಾಂಬಾರು ಅಭಿವೃದ್ಧಿ ನಿಗಮದಲ್ಲಿ 10 ರೂಪಾಯಿ ದುಡ್ಡಿಲ್ಲ. ನಾನೇ ಊಟ ತೆಗೆದುಕೊಂಡು ಹೋಗಿ ಕೊಟ್ಟು ಬರಬೇಕು" ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ತಿಂಗಳು ಮಾಜಿ ಶಾಸಕ, ಬಿ. ಸುರೇಶ್ ಗೌಡ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಜಿಲ್ಲೆಯ ಮತ್ತೊಬ್ಬ ಶಾಸಕರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಶಾಸಕ ಮಸಾಲ ಜಯರಾಂ
"ನಮ್ಮನ್ನು ಕಡೆಗಣಿಸಿದರೆ ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಇರಲ್ಲ. ಕಡೆಗಣಿಸಿದರೆ ರಾಜಕೀಯವನ್ನೇ ಕೊನೆ ಮಾಡುತ್ತೇವೆ. ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ" ಎಂದು ಮಸಾಲ ಜಯರಾಂ ತಿಳಿಸಿದ್ದಾರೆ.
"ಎಲ್ಲೋ ಒಂದು ಕಡೆ ಬಿಜೆಪಿ ನನಗೆ ದ್ರೋಹ ಮಾಡುತ್ತಿದೆ ಎಂಬ ಮಟ್ಟಕ್ಕೆ ಬಂದಿದೆ. ನಾವು ಕೇಳೋದೆಲ್ಲ ಕೇಳಿಕೊಂಡು ಬಂದಿದ್ದೇವೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಿಗಮ ಮಂಡಳಿ ನೀಡುವಂತೆ ಕೇಳಿದ್ದೇವೆ. ಅವರು ಕಡೆಗಣಿಸಿದರೆ ಪಕ್ಷದಲ್ಲಿ ಇರಲ್ಲ" ಎಂದರು.

ಜಿಲ್ಲಾಧ್ಯಕ್ಷ ಸ್ಥಾನವೂ ಬೇಡ
"ಜನರು ವೋಟ್ ಹಾಕಿದ್ದಾರೆ ಅವರಿಗೆ ತೃಪ್ತಿ ಆಗುವ ಹಾಗೆ ಕೆಲಸ ಮಾಡಿದ್ದೇನೆ. ನವೆಂಬರ್ ತಿಂಗಳ ಗುಡುವು ಕೊಟ್ಟಿದ್ದೇನೆ. ನನಗೆ ಏನೂ ಇಲ್ಲದೆಯೂ ಕೆಲಸ ಮಾಡಿ ಗೊತ್ತಿದೆ. ಜಿಲ್ಲಾಧ್ಯಕ್ಷ ಸ್ಥಾನವೂ ನನಗೆ ಬೇಡ ಎಂದು" ಮಸಾಲ ಜಯರಾಂ ಸ್ಪಷ್ಟಪಡಿಸಿದ್ದಾರೆ.
ಮಸಾಲ ಜಯರಾಂ 2018ರ ವಿಧಾನಸಭೆ ಚುನಾವಣೆಯಲ್ಲಿ 60,710 ಮತಗಳನ್ನು ಪಡೆದು, 58,661 ಮತಗಳನ್ನು ಪಡೆದಿದ್ದ ಜೆಡಿಎಸ್ನ ಎಂ. ಟಿ. ಕೃಷ್ಣಪ್ಪ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ನವೆಂಬರ್ ತನಕ ಕಾದು ನೋಡುತ್ತೇನೆ
ಶಾಸಕ ಮಸಾಲ ಜಯರಾಂ, "ನವೆಂಬರ್ ಅಂತ್ಯದ ತನಕ ನನ್ನ ಬೇಡಿಕೆ ಈಡೇರುತ್ತದೆಯೇ ಎಂದು ಕಾದು ನೋಡುತ್ತೇನೆ. ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಒಳ್ಳೆಯ ನಿಗಮ ಮಂಡಳಿ ಕೊಡಿ ಎಂದು ಕೇಳಿದ್ದೇನೆ. ಕೊಟ್ಟರೆ ಕೊಡಲಿ, ಇಲ್ಲವಾದರೆ ಏನು ಮಾಡಬೇಕು ಮಾಡುತ್ತೇವೆ" ಎಂದು ಬಿಜೆಪಿ ನಾಯಕರಿಗೆ ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.

ಜಿಲ್ಲಾಧ್ಯಕ್ಷರ ರಾಜೀನಾಮೆ
ಸೆಪ್ಟೆಂಬರ್ 27ರಂದು ಮಾಜಿ ಶಾಸಕ, ಬಿಜೆಪಿ ನಾಯಕ ಬಿ. ಸುರೇಶ್ ಗೌಡ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜನರು ತೋರಿಸಿದ ಪ್ರೀತಿ, ಕೊಟ್ಟ ಸಹಕಾರಕ್ಕೆ ಧನ್ಯವಾದ ಸಲ್ಲಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು.
'ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ. ಜಿಲ್ಲೆಯ ಜನರ ಸಹಕಾರಕ್ಕೆ ಧನ್ಯವಾದ ಪಕ್ಷದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನು ಇಂದು ರಾಜೀನಾಮೆ ನೀಡಿದ್ದು, ಜಿಲ್ಲೆಯ ಜನರು ತೋರಿಸಿದ ಪ್ರೀತಿ, ಬೆಂಬಲಕ್ಕೆ ಅಭಾರಿಯಾಗಿದ್ದೇನೆ' ಎಂದು ಪೋಸ್ಟ್ನಲ್ಲಿ ಹೇಳಿದ್ದರು. ಈಗ ಜಿಲ್ಲೆಯ ಮತ್ತೊಬ್ಬ ಶಾಸಕರು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ.












Click it and Unblock the Notifications