ಕಾಂಗ್ರೆಸ್ ಶಾಸಕನಿಂದ ತಮ್ಮದೇ ಪಕ್ಷದ ಜನಪ್ರತಿನಿಧಿಗೆ ಬೆದರಿಕೆ
ತುಮಕೂರು, ಏಪ್ರಿಲ್ 03: ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ತಮ್ಮದೇ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯನಿಗೆ ಫೋನ್ ಮೂಲಕ ಧಮ್ಕಿ ಹಾಕಿರುವ ಆಡಿಯೋ ವೈರಲ್ ಆಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಕಾಂಗ್ರೆಸ್ ಪಕ್ಷದ ಹೊನ್ವಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ್ ಅವರಿಗೆ ಕರೆ ಮಾಡಿರುವ ಶಾಸಕ ಷಡಕ್ಷರಿ ಅವರು ಅವಾಚ್ಯ ಶಬ್ದಗಳನ್ನು ಬಳಸಿ ಬೈದಿರುವುದಲ್ಲದೆ ಹೊಡೆಸುವುದಾಗಿ, ನಾಲಿಗೆ ಕೀಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಶಾಸಕರು ಬೈದಿರುವುದು ರೆಕಾರ್ಡ್ ಆಗಿದ್ದು, ಈಗ ಅದು ಸಾಮಾಜಿಕ ಜಾಲತಾಣಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಶಾಸಕ ಷಡಕ್ಷರಿ ಅವರಿಗೆ ಈ ಬಾರಿ ಟಿಕೆಟ್ ದೊರಕುವುದಿಲ್ಲ ಎಂದು ನಾರಾಯಣಸ್ವಾಮಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಸಿಟ್ಟಿಗೆದ್ದಿದ್ದ ಷಡಕ್ಷರಿ ಅವರು ನಾರಾಯಣಸ್ವಾಮಿ ಅವರಿಗೆ ಕರೆ ಮಾಡಿದ್ದಾರೆ, ಅತ್ತಲಿನಿಂದ ಅವರ ಸಹಾಯಕನೊಬ್ಬ ಫೋನ್ ರಿಸೀವ್ ಮಾಡಿ ನಾರಾಯಣಸ್ವಾಮಿ ಇಲ್ಲ ಎಂದಿದ್ದಾರೆ.
ಆದರೂ ಬಿಡದೆ 'ನನ್ನ ಬಗ್ಗೆ ಎಲ್ಲಾದರೂ ಮಾತನಾಡಿದರೆ ನಾಲಿಗೆ ಕೀಳಿಸಿ ಬಿಡುತ್ತೇನೆ ಎಂದು ಹೇಳು ಅವನಿಗೆ, ಬೆಂಬಲಿಗರಿಗೆ ಹೇಳಿ ಹೊಡೆಸುತ್ತೇನೆ, ಪಾರ್ಟಿ ಮೀಟಿಂಗ್ನಲ್ಲಿ ಹೇಳುತ್ತೇನೆ, ನನ್ನ ಹೆಸರು ಎತ್ತಿದರೆ ಅವನಿಗೆ ಹೊಡೆಯಿರಿ' ಎಂದು ಫೋನಿನಲ್ಲಿ ಗುಟುರು ಹಾಕಿದ್ದಾರೆ.
'ಮಗನಂತೆ ಇರುತ್ತೇನೆ ಎಂದು ಆಣೆ ಮಾಡಿದ್ದ ಅವನು ಇಂದು ನನ್ನ ವಿರುದ್ಧವೇ ಮಾತನಾಡುತ್ತಿದ್ದಾನೆ, ನನ್ನ ವಿರುದ್ಧ ಷಡ್ಯಂತ್ರ ಮಾಡಿದವರೆಲ್ಲಾ ಇಂದು ಸತ್ತು ಹೋಗಿದ್ದಾರೆ, ನನ್ನ ಇನ್ನೊಂದು ಮುಖ ನೋಡಿಲ್ಲ ನೀವು' ಎಂದು ಷಡಕ್ಷರಿ ಅವರು ಫುಲ್ ಆವಾಜ್ ಹಾಕಿದ್ದಾರೆ.
ಶಾಸಕರ ಧಮ್ಕಿಯಿಂದ ಬೇಸರಗೊಂಡಿರುವ ನಾರಾಯಣಸ್ವಾಮಿ ಅವರು ಕೆಪಿಸಿಸಿಗೆ ಷಡಕ್ಷರಿ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ.