ಶಿರಾ ಉಪ ಚುನಾವಣೆ; ಎಲ್ಲಾ ಪಕ್ಷಗಳಿಗೂ ಪರೀಕ್ಷೆಯ ಕಾಲ!
ತುಮಕೂರು, ಸೆಪ್ಟೆಂಬರ್ 23 : ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣೆ ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೂ ಪರೀಕ್ಷೆಯ ಕಾಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹೋರಾಟ ಕ್ಷೇತ್ರದಲ್ಲಿ ನಡೆಯುತ್ತಿತ್ತು. ಉಪ ಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ ಪ್ರಯತ್ನ ಆರಂಭಿಸಿದೆ.
2018ರ ಚುನಾವಣೆಯಲ್ಲಿ ಜೆಡಿಎಸ್ನ ಬಿ. ಸತ್ಯನಾರಾಯಣ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದರು. ಅವರ ಅಕಾಲಿಕ ಮರಣದಿಂದಾಗಿ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಾಗಿದೆ. ಚುನಾವಣಾ ಆಯೋಗ ಉಪ ಚುನಾವಣೆಗೆ ಸಿದ್ಧವಾಗಿದ್ದು, ವೇಳಾಪಟ್ಟಿ ಪ್ರಕಟಿಸುವುದು ಬಾಕಿ ಇದೆ.
ಬಿಜೆಪಿ ಚುನಾವಣೆ ಘೋಷಣೆಗೂ ಮೊದಲು ಉಪ ಚುನಾವಣೆ ಸಿದ್ಧತೆಯನ್ನು ಆರಂಭಿಸಿದೆ. ಕ್ಷೇತ್ರದಲ್ಲಿ ಬೂತ್ ಮಟ್ಟದ ಸಭೆಯಗಳನ್ನು ನಡೆಸುತ್ತಿದೆ. ಅಧಿಕೃತವಾಗಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಾಗಿದೆ. ಪಕ್ಷದ ಅಭ್ಯರ್ಥಿ ಯಾರು? ಎಂಬ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.
ಕಾಂಗ್ರೆಸ್ ಕಳೆದ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸಚಿವ ಟಿ. ಬಿ. ಜಯಚಂದ್ರ ಉಪ ಚುನಾವಣೆ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಜೆಡಿಎಸ್ ಮತ್ತು ಬಿಜೆಪಿ ಇನ್ನೂ ಅಭ್ಯರ್ಥಿ ಬಗ್ಗೆ ತೀರ್ಮಾನ ಕೈಗೊಂಡಿಲ್ಲ.

ಕಾಂಗ್ರೆಸ್-ಜೆಡಿಎಸ್ ನಡುವಿನ ಹೋರಾಟ
ಶಿರಾ ಕ್ಷೇತ್ರದ ಚುನಾವಣೆ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿ ಹೋರಾಟ. ಕಳೆದ 2 ಚುನಾವಣೆಯಲ್ಲಿಯೂ ಬಿಜೆಪಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ, ಈ ಉಪ ಚುನಾವಣೆ ಪ್ರಚಾರವನ್ನು ಮೊದಲು ಆರಂಭಿಸಿರುವುದೇ ಬಿಜೆಪಿ. ರಾಜ್ಯದಲ್ಲಿ ಸರ್ಕಾರವೂ ಅವರದ್ದೇ ಇರುವುದರಿಂದ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರವೂ ಇದೆ.

3ನೇ ಸ್ಥಾನದಲ್ಲಿದೆ ಪಕ್ಷ
2013ರ ಚುನಾವಣೆಯಲ್ಲಿ ಬಿ. ಕೆ. ಮಂಜುನಾಥ ಬಿಜೆಪಿಯಿಂದ ಕಣಕ್ಕಿಳಿದು 18,884 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಟಿ. ಬಿ. ಜಯಚಂದ್ರ ಗೆದ್ದು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು ಆಗಿದ್ದರು. 2018ರ ಚುನಾವಣೆಯಲ್ಲಿ ಜೆಡಿಎಸ್ನ ಬಿ. ಸತ್ಯನಾರಾಯಣ ಗೆದ್ದಿದ್ದರು. ಜಯಚಂದ್ರ 2ನೇ ಸ್ಥಾನಕ್ಕೆ ಬಂದಿದ್ದರು. ಬಿಜೆಪಿ ಹುರಿಯಾಳು ಎಸ್. ಆರ್. ಗೌಡ 16,959 ಮತಗಳನ್ನು ಪಡೆದಿದ್ದರು.

10 ರಿಂದ 12 ಸಾವಿರ ಮತಗಳ ಗೆಲುವು
ಕಾಂಗ್ರೆಸ್ ಶಿರಾ ಕ್ಷೇತ್ರದ ಉಪ ಚುನಾವಣೆ ಗೆಲ್ಲಬೇಕು ಎಂದು ತಂತ್ರ ರೂಪಿಸಿದೆ. ಡಾ. ಜಿ. ಪರಮೇಶ್ವರ, ಮಾಜಿ ಶಾಸಕ ಕೆ. ಎಸ್. ರಾಜಣ್ಣ ಮತ್ತು ಟಿ. ಬಿ. ಜಯಚಂದ್ರ ಉಪ ಚುನಾವಣೆ ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ. "ಟಿ. ಬಿ. ಜಯಚಂದ್ರ 10 ರಿಂದ 12 ಸಾವಿರ ಮತಗಳ ಅಂತದಲ್ಲಿ ಗೆಲ್ಲಲಿದ್ದಾರೆ" ಎಂದು ಕೆ. ಎನ್. ರಾಜಣ್ಣ ಭವಿಷ್ಯ ನುಡಿದಿದ್ದಾರೆ.

ಜೆಡಿಎಸ್ಗೆ ದೊಡ್ಡ ಸವಾಲು
ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿ ಕಾರಣಕ್ಕೆ ಜೆಡಿಎಸ್ ಪಕ್ಷಕ್ಕೆ ದೊಡ್ಡ ಸವಾಲು ಎದುರಾಗಿದೆ. ಕ್ಷೇತ್ರವನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರವೇ ಉಪ ಚುನಾವಣೆ ಗೆಲ್ಲುವುದು ಬಹುತೇಕ ಬಾರಿ ಸತ್ಯವಾಗಿದೆ. ಶಿರಾದಲ್ಲಿಯೂ ಅದೇ ಆಗಲಿದೆಯೇ ಕಾದು ನೋಡಬೇಕು.












Click it and Unblock the Notifications