ಭಕ್ತರಿಗೆ ಸಿಹಿ ಸುದ್ದಿ: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ
ತುಮಕೂರು, ಜನವರಿ 18: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಗಣನೀಯ ಚೇತರಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸ್ವಾಮೀಜಿಗಳ ಆರೋಗ್ಯ ಗುರುವಾರ ಸಂಜೆಯಿಂದ ಸುಧಾರಿಸಿದೆ. ಅವರೀಗ ಸಂಪೂರ್ಣವಾಗಿ ಕೃತಕ ಉಸಿರಾಟ ಪಡೆಯುತ್ತಿಲ್ಲ. ಒಂದು ಗಂಟೆ ಕೃತಕ ಉಸಿರಾಟ ನಡೆಸಿದರೆ, ಇನ್ನು ಒಂದು ಗಂಟೆ ವೆಂಟಿಲೇಟರ್ ತೆಗೆಯಲಾಗುತ್ತಿದ್ದು, ಸ್ವಾಮೀಜಿಗಳು ಸ್ವಂತ ಉಸಿರಾಡುತ್ತಿದ್ದಾರೆ.
ಅಲ್ಲದೆ, ಅವರ ರಕ್ತ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ಸೋಂಕು ಕಡಿಮೆಯಾಗಿರುವುದು ಗೊತ್ತಾಗಿದೆ. ಅವರಾಗಿಯೇ ಉಸಿರಾಡುವುದನ್ನು ಟ್ರಯಲ್ ನೋಡುತ್ತಿದ್ದೇವೆ. ಕಣ್ಣುಬಿಟ್ಟು ಎಲ್ಲರನ್ನೂ ನೋಡುತ್ತಾರೆ. ಕೈಆಡಿಸುವಷ್ಟು ಶಕ್ತಿ ಅವರಲ್ಲಿದೆ. ಆದರೆ, ಬಂದವರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ವಾಮೀಜಿಗಳ ಆಪ್ತ ವೈದ್ಯ ಡಾ. ಪರಮೇಶ್ ತಿಳಿಸಿದ್ದಾರೆ.

ಅವರ ದೇಹದಲ್ಲಿನ ಪ್ರೋಟೀನ್ ಅಂಶ ನಿನ್ನೆ 2.7ರಷ್ಟಿತ್ತು. ಬಾಹ್ಯ ಶಕ್ತಿ ಪೂರೈಕೆ ತಗ್ಗಿಸಿರುವುದರಿಂದ ಅದು 2.5ಕ್ಕೆ ಇಳಿದಿದೆ.
ಆಲ್ಬುಮಿನ್ ಮಟ್ಟ ಸುಧಾರಣೆಯಾಗಲು ಎರಡು ಮೂರು ವಾರ ಬೇಕು. ಅದು ಸ್ಥಿರವಾದರೆ ಅವರ ಆರೋಗ್ಯ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತದೆ. ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಈಗ ಅದು ಕಡಿಮೆಯಾಗಿದೆ.
ಕಿರಿಯ ಸ್ವಾಮೀಜಿಗಳು ಶ್ರೀಗಳ ಪಕ್ಕದಲ್ಲಿ ಕುಳಿತು ಇಷ್ಟಲಿಂಗ ಪೂಜೆ ಮಾಡುತ್ತಿದ್ದಾರೆ. ಮಠದಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗುವುದು ಎಂದು ಪರಮೇಶ್ ವಿವರಿಸಿದ್ದಾರೆ.












Click it and Unblock the Notifications