ಬೆಳೆದ ಬೆಳೆಯಲ್ಲಿ ಮೊದಲು ಇಂತಿಷ್ಟು ಪ್ರಮಾಣ ಸಿದ್ದಗಂಗಾ ಮಠಕ್ಕೆ ಮೀಸಲು
ತುಮಕೂರು, ಜನವರಿ 21: ಸಿದ್ದಗಂಗಾ ಸ್ವಾಮೀಜಿ ಫೋಟೋ ಯಾವ ಪತ್ರಿಕೆಯಲ್ಲಿ ತುಂಬ ಚೆನ್ನಾಗಿ ಹಾಕುತ್ತಾರೋ ಅದನ್ನು ಇಲ್ಲಿನ ಜನ ಕಣ್ಣಿಗೊತ್ತಿಕೊಂಡು ಓದುತ್ತಾರೆ ಅನ್ನೋದನ್ನು ಹೇಳಿದರೆ ನೀವು ನಂಬುತ್ತೀರಾ? ಈ ಮಾತು ಜಿಲ್ಲೆಯಲ್ಲಿ ಬೇರೆ ಯಾವ ಪತ್ರಿಕಾ ವಿತರಕರನ್ನಾದರೂ ಕೇಳಿ ನೋಡಿ ಎಂದರು ರಾಜ್ಯದ ಪ್ರಮುಖ ದಿನಪತ್ರಿಕೆಯೊಂದರ ವಿತರಕರಾದ ಸಿದ್ದಪ್ಪಾಜಿ.
ಸಿದ್ದಗಂಗಾ ಶ್ರೀಗಳ ಬಗ್ಗೆ ಜನರಿಗೆ ಯಾವ ಪರಿಯ ಅಭಿಮಾನ, ಗೌರವ, ಭಕ್ತಿ ಇದೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸುತ್ತಾ ಹೋದರು. ಶಿವಕುಮಾರ ಸ್ವಾಮೀಜಿ ಅವರು ಕಾರ್ಯಕ್ರಮದ ಅತಿಥಿಯೋ ಅಧ್ಯಕ್ಷರೋ ಅಂದರೆ ಒಂದು ನಿಮಿಷ ಕೂಡ ಆಚೀಚೆ ಆಗದೆ ಆ ಸ್ಥಳದಲ್ಲಿ ಸ್ವಾಮೀಜಿ ಹಾಜರ್. ಗುರು ವಂದನೆ, ತಮ್ಮ ಭಾಷಣ ಮುಗಿಸಿ ಅಲ್ಲಿಂದ ಹೊರಟು ಬಿಡುತ್ತಿದ್ದರು.
ಮಠದಲ್ಲಿ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳುವಾಗ ಸ್ವತಃ ತಾವೇ ಆ ಬಗ್ಗೆ ಗಮನ ಹರಿಸುತ್ತಿದ್ದರು. ಅವರು ಎಂದಾದರೂ ಕನ್ನಡಕ ಹಾಕಿದ್ದನ್ನು ನೋಡಿದ್ದೀರಾ? ಏಕೆಂದರೆ, ಅವರು ಕನ್ನಡಕವನ್ನೇ ಧರಿಸುತ್ತಿರಲಿಲ್ಲ. ಅವರ ಜೀವ ಖಂಡಿತಾ ಆ ಗುಬ್ಬಿ ಗಾತ್ರದ ದೇಹದಲ್ಲಿಲ್ಲ. ಸಿದ್ದಗಂಗಾ ಮಠದ ಕಣ ಕಣದಲ್ಲೂ ಇದೆ. ಈಗ ಅವರಿಗೆ ನಡೆಯುತ್ತಿರುವ ಚಿಕಿತ್ಸೆ ನಮ್ಮಂಥವರ ಕಣ್ಣಿಗೆ ಕಾಣುವ ದೇಹಕ್ಕಷ್ಟೇ ಆಗುತ್ತಿದೆ ಎಂದು ಅವರು ಕ್ಷಣ ಕಾಲ ಮೌನವಾದರು.

ತುಮಕೂರು ಸೇರಿದ ಹಾಗೆ ಸುತ್ತ ಮುತ್ತ ಜಿಲ್ಲೆಯಲ್ಲಿ ಒಂದು ಪರಿಪಾಠವಿದೆ. ರೈತರು ಬೆಳೆವ ಬೆಳೆಯ ಮೊದಲ ಫಸಲು ಇಂತಿಷ್ಟು ಎಂದು ಸಿದ್ದಗಂಗಾ ಮಠಕ್ಕೆ ನೀಡುತ್ತಾರೆ. ಕೆಲವರು ದವಸ-ಧಾನ್ಯ, ಮತ್ತೂ ಕೆಲವರು ಹಣ...ಹೀಗೆ ಮಠಕ್ಕೆ ನಡೆದುಕೊಳ್ಳುವ ಲಕ್ಷಾಂತರ ಮಂದಿ ಇದ್ದಾರೆ. ಅದೂ ದೇವರು-ದಿಂಡರಲ್ಲಿ ಭಕ್ತಿಯೇ ಕರಗಿ ಹೋಗುತ್ತಿರುವ ಹಾಗೂ ಮನುಷ್ಯರ ಮೇಲೆ ಸಿಕ್ಕಾಪಟ್ಟೆ ಅನುಮಾನ ಪಡುವ ಕಾಲದಲ್ಲೂ ಶಿವಕುಮಾರ ಶ್ರೀಗಳು ಹಾಗೂ ಸಿದ್ದಗಂಗಾ ಮಠ ಅಂದರೆ ಅಂಥ ಪ್ರೀತಿ.












Click it and Unblock the Notifications