ಬ್ರಾಹ್ಮಣರ ಕುರಿತ ಸ್ವಾಮೀಜಿ ಹೇಳಿಕೆಗೆ ಮಠದ ಸ್ಪಷ್ಟನೆ
ತುಮಕೂರು, ಜನವರಿ 14 : ಹೆಬ್ಬೂರಿನ ಕೋದಂಡಾಶ್ರಮ ಮಠದ ಪೀಠಾಧಿಪತಿ ಮಾಧವಾಶ್ರಮ ಸ್ವಾಮೀಜಿ ನೀಡಿರುವ ಹೇಳಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ತುಮಕೂರಿನಲ್ಲಿರುವ ಕೋದಂಡಾಶ್ರಮ ಮಠ ಸ್ವಾಮೀಜಿಗಳ ಹೇಳಿಕೆ ಕುರಿತು ಸ್ಪಷ್ಟೀಕರಣವನ್ನು ನೀಡಿದೆ.
ಶನಿವಾರ ಮಾಧವಾಶ್ರಮ ಸ್ವಾಮೀಜಿ ಬೆಂಗಳೂರಿನಲ್ಲಿ ಮಂಗಳೂರಿನ ಸ್ಥಾನಿಕ ಬ್ರಾಹ್ಮಣ ಮಹಾಮಂಡಲವು ಆಯೋಜಿಸಿದ್ದ 'ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶ' ಉದ್ಘಾಟಿಸಿದ್ದರು. ಈ ಸಮಾವೇಶದಲ್ಲಿ ಸ್ವಾಮೀಜಿ ಹೇಳಿದ್ದ ಮಾತಿನ ಬಗ್ಗೆ ಚರ್ಚೆಗಳು ಆರಂಭವಾಗಿತ್ತು.
"ಶಿವಳ್ಳಿ ಬ್ರಾಹ್ಮಣ ಹುಡುಗರು ಸಾಯಂಕಾಲವಾಗುತ್ತಿದ್ಧಂತೆ ಕುಡಿದು ಮೋರಿಯಲ್ಲಿ ಬೀಳುತ್ತಿರುವ ಬಗ್ಗೆ ಆ ಸಮಾಜದವರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಸಮಾಜದವರು ಆ ಹಂತಕ್ಕೆ ತಲುಪದಿರುವುದಕ್ಕೆ ಸಮಾಧಾನಪಟ್ಟುಕೊಳ್ಳಬೇಕು" ಎಂದು ಮಾಧವಾಶ್ರಮ ಸ್ವಾಮೀಜಿ ಹೇಳಿದ್ದರು.

ಪತ್ರಿಕೆಗಳಲ್ಲಿ ಈ ಸ್ವಾಮೀಜಿಗಳ ಹೇಳಿಕೆ ಬಗ್ಗೆ ವರದಿ ಪ್ರಕಟವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಈ ಹೇಳಿಕೆ ಕುರಿತು ಮಠದ ವ್ಯವಸ್ಥಾಪಕ ಸುಬ್ರಮಣ್ಯ ಶಾಸ್ತ್ರಿ ಸ್ಪಷ್ಟನೆ ನೀಡಿದ್ದಾರೆ.
"ಬ್ರಾಹ್ಮಣ ಸಮುದಾಯದ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿರುವ ಬಗ್ಗೆ ಸ್ವಾಮೀಜಿ ಪ್ರಸ್ತಾಪಿಸಿದ್ದರು. ಯಾವುದೇ ಸಮಾಜವನ್ನು ಟೀಕಿಸುವುದು ಸ್ವಾಮೀಜಿ ಉದ್ದೇಶವಾಗಿರಲಿಲ್ಲ" ಎಂದು ಹೇಳಿದ್ದಾರೆ.











Click it and Unblock the Notifications