ಫಿಲಿಪೈನ್ಸ್ : ಕೆಜೆಪಿ ಮುಖಂಡ ಸೇರಿ ಮೂವರ ಪರದಾಟ
ತುಮಕೂರು, ನ.11 : ಕರಾವಳಿ ದೇಶ ಫಿಲಿಪೈನ್ಸ್ ಮೇಲೆ ಅಪ್ಪಳಿಸಿರುವ ಹೈಯಾನ್ ಚಂಡಮಾರುತ ಭಾರೀ ಹಾನಿ ಉಂಟುಮಾಡಿದೆ. ಈ ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಸಂಖ್ಯೆ 10 ಸಾವಿರ ದಾಟಿದೆ ಎಂದು ಅಂದಾಜಿಸಲಾಗಿದ್ದು, ಕೆಜೆಪಿ ಮುಖಂಡ ಸೇರಿದಂತೆ ನಾಲ್ವರು ಕನ್ನಡಿಗರು ಹೋಟೆಲ್ ನಲ್ಲಿ ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೆಜೆಪಿ ಮುಖಂಡ ಮಸಾಲ ಜಯರಾಂ ಅವರು ಮಸಾಲ ವ್ಯವಹಾರದ ನಿಮಿತ್ತ ತಮ್ಮ ಪಾಲುದಾರ ಮಣಿ, ಮತ್ತಿಬ್ಬರು ಸ್ನೇಹಿತರೊಂದಿಗೆ ಐದು ದಿನಗಳ ಹಿಂದೆ ಫಿಲಿಪೈನ್ಸ್ ಗೆ ತೆರಳಿದ್ದರು ಸದ್ಯ ಅವರು, ಹಯಾನ್ ಚಂಡಮಾರುತದ ಭೀಕರತೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಪ್ರಸ್ತುತ ಮನಿಲಾ ನಗರಕ್ಕೆ ಸಮೀಪವಿರುದ ಹೋಟೆಲ್ ನಲ್ಲಿ ಮಸಾಲೆ ಜಯರಾಂ ಸೇರಿದಂತೆ ನಾಲ್ವರು ಸಿಕ್ಕಿಹಾಕಿಕೊಂಡಿದ್ದಾರೆ. "30 ಅಂತಸ್ತಿನ ಹೊಟೇಲ್ ನಲ್ಲಿ ಇದ್ದೇವೆ" ಎಂದು ಮನೆಗೆ ದೂರವಾಣಿ ಮೂಲಕ ಮನೆಗೆ ಕರೆ ಮಾಡಿದ್ದ ಜಯರಾಂ, ಸುರಕ್ಷಿತವಾಗಿದ್ದೇವೆ. ಆದರೆ, ಊಟಕ್ಕಾಗಿ ಪರದಾಡಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗಾಬರಿಯಾಗಬೇಕಾದ ಅಗತ್ಯವಿಲ್ಲ, ಶೀಘ್ರವೇ ದೇಶಕ್ಕೆ ಮರಳುತ್ತೇವೆ ಎಂದು ಜಯರಾಂ ತಿಳಿಸಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ನ.6ರಂದು ಫಿಲಿಪೈನ್ಸ್ ಗೆ ತೆರಳಿದ್ದ ಜಯರಾಂ ಭಾನುವಾರ ಅಲ್ಲಿಂದ ಹೊರಟು, ಸೋಮವಾರ ಭಾರತಕ್ಕೆ ಮರಳಬೇಕಾಗಿತ್ತು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಯರಾಂ ತುರುವೆಕೆರೆ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಶಾಸಕ ಎಂ.ಟಿ.ಕೃಷ್ಣಪ್ಪ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಮಸಾಲೆ ಕಾರ್ಖನೆ ನಡೆಸುವ ಇವರು ಮಸಾಲೆ ಜಯರಾಂ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಇವರ ಕಾರ್ಖನೆ ಇದ್ದು, ಸುಮಾರು 2000 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. (ಫಿಲಿಪೈನ್ಸ್ ಚಂಡಮಾರುತಕ್ಕೆ ಸಾವಿರಾರು ಮಂದಿ ಬಲಿ)












Click it and Unblock the Notifications