ಶಿವಮೊಗ್ಗ ನಗರದ ಟಿಕೆಟ್ ಖಾತ್ರಿಯಾದರೆ ಸಮಾಧಾನ ಆಗ್ತೀರಾ ಈಶ್ವರಪ್ಪ?
ತುಮಕೂರು, ಜನವರಿ 18: ರಾಜಕಾರಣದಲ್ಲಿ ಒಂದೇ ಪಕ್ಷದಲ್ಲಿರುವ ಇಬ್ಬರ ಮಧ್ಯದ ಬಂಧ ಹರಿದುಕೊಂಡರೆ ಏನಾಗಬಹುದು ಎಂಬುದು ಜಗಜ್ಜಾಹೀರಾದ ವಿಚಾರ. ಆದರೆ ಒಬ್ಬರ ಪಟ್ಟು ಮತ್ತೊಬ್ಬರಿಗೆ ಗೊತ್ತಾಗಿ, ಅಸಮಾಧಾನ ಮೂಡಿದರೆ ಏನಾಗಬಹುದು ಎಂಬುದಕ್ಕೆ ಈಶ್ವರಪ್ಪ ಹಾಗೂ ಯಡಿಯೂರಪ್ಪನವರ ಉದಾಹರಣೆ ಕಣ್ಣೆದುರಿಗಿದೆ.
ಇನ್ನು ತುಮಕೂರಿನಲ್ಲಿ ಮಾಜಿ ಸಚಿವ ಎಸ್.ಶಿವಣ್ಣ ಅವರ ಮನೆಯಲ್ಲಿ ನಡೆದ ಭಾರತ ಮಾತೆ ಪೂಜೆಗೆ ಬಂದಿದ್ದವರಲ್ಲಿ ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಇದ್ದವರೇ ಇದ್ದದ್ದು ಕಾಕತಾಳೀಯ ಆಗಿರಲಾರದು. ಅದರೆ ಮಾಧ್ಯಮದವರು ಕೇಳಿದ ಒಂದು ಪ್ರಶ್ನೆ ಮತ್ತು ಅದಕ್ಕೆ ಈಶ್ವರಪ್ಪನವರು ನೀಡಿದ ಉತ್ತರ ಕುತೂಹಲಕರವಾಗಿತ್ತು.[ಸೊಗಡು ಮನೆಯಲ್ಲಿ ಸಭೆ ಸೇರಿರುವ ಅತೃಪ್ತರು ಯಾರು?]

ಮುಂದಿನ ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ನಗರದಿಂದ ಬಿಜೆಪಿ ಟಿಕೆಟ್ ನಿಮಗೇ (ಈಶ್ವರಪ್ಪನವರಿಗೆ) ಅಂತ ಘೋಷಿಸಿದರೆ ಅಸಮಾಧಾನ ಕಡಿಮೆ ಆಗುತ್ತಾ? ಎಂದು ಮಾಧ್ಯಮದವರು ಕೇಳಿದರು. ಏಕೆಂದರೆ ಈಗ ಬಿಜೆಪಿಯ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವವರು ರುದ್ರಪ್ಪ. ಟಿಕೆಟ್ ಹಂಚಿಕೆ ವೇಳೆ ಯಡಿಯೂರಪ್ಪನವರು ಆಯ್ಕೆ ಮಾಡಿರುವ ಜಿಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳಿಗೆ ಪ್ರಾಶಸ್ತ್ಯ ಸಿಗುವುದು ಹೌದಲ್ಲವೆ?
ಅದಕ್ಕೆ ಈಶ್ವರಪ್ಪ ಅವರು ನೀಡಿದ ಉತ್ತರ ಏನು ಗೊತ್ತಾ? ಶಿವಮೊಗ್ಗ ನನ್ನದು. ಅಲ್ಲಿನ ಟಿಕೆಟ್ ಗಾಗಿ ನಾನು ಯಾಕೆ ಇಷ್ಟೆಲ್ಲ ಮಾಡಬೇಕು? ಅಸಮಾಧಾನ ಇರುವುದು ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಅಂದವರೇ ಅಲ್ಲಿಂದ ಹೊರಟೆ ಬಿಟ್ಟರು. ತುಮಕೂರಿನಲ್ಲೂ ಪರಿಸ್ಥಿತಿ ಹೀಗೇ ಇದೆ. ಜಿಲ್ಲಾ ಘಟಕದ ಅಧ್ಯಕ್ಷರಾಗಿರುವವರು ಜ್ಯೋತಿ ಗಣೇಶ್.[ಯಡಿಯೂರಪ್ಪ-ಈಶ್ವರಪ್ಪ ಮುನಿಸು ತಗ್ಗಿಸಲು ಆರೆಸ್ಸೆಸ್ ಕೂಡಾ ವಿಫಲ]
ಕಳೆದ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರದಿಂದ ಅವರು ಕೆಜೆಪಿ ಅಭ್ಯರ್ಥಿ. ಮತಗಳಿಕೆ ಲೆಕ್ಕಾಚಾರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಈಗ ಜ್ಯೋತಿಗಣೇಶ್ ಬಿಜೆಪಿಗೆ ಬಂದಿದ್ದಾರೆ. ಅದರಲ್ಲೂ ಜಿಲ್ಲಾ ಘಟಕದ ಅಧ್ಯಕ್ಷ.
ಆದ್ದರಿಂದ ಮುಂದಿನ ವಿಧಾನಸಭೆ ಚುನಾವಣೆಗೆ ತುಮಕೂರು ನಗರ ಕ್ಷೇತ್ರದಿಂದ ಹಿರಿಯರು ಹಾಗೂ ಬಿಜೆಪಿಯನ್ನು ಕಟ್ಟಿದ ಸೊಗಡು ಶಿವಣ್ಣ ಅವರಿಗೆ ಟಿಕೆಟ್ ಸಿಗಬಹುದಾ ಅಥವಾ ಜ್ಯೋತಿಗಣೇಶ್ ಬಿಜೆಪಿ ಅಭ್ಯರ್ಥಿ ಆಗಿಬಿಡಬಹುದಾ ಎಂಬ ಪ್ರಶ್ನೆಗಳು ಎದ್ದಿವೆ. ಅದಕ್ಕೆ ಪೂರಕವಾಗಿ ಶಿವಣ್ಣ ಬೆಂಬಲಿಗರನ್ನು ಜ್ಯೋತಿಗಣೇಶ್ ಸೆಳೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.












Click it and Unblock the Notifications