'ಅಪ್ಪ ಮಕ್ಕಳಿಗೆ ಮದುವೆ, ಹಬ್ಬದ ಊಟ ಮಾಡಿ ಅಭ್ಯಾಸವಿಲ್ಲ'
ತುಮಕೂರು, ಫೆಬ್ರವರಿ 09 : 'ಜೆಡಿಎಸ್ ಪಕ್ಷ ರಾಜ್ಯದಲ್ಲಿ ಮನೆ ಮುರಕ ಕೆಲಸ ಮಾಡುತ್ತಿದೆ. ಅಪ್ಪ ಮಕ್ಕಳಿಗೆ ತಿಥಿ ಊಟ ಉಂಡು ಅಭ್ಯಾಸವೇ ಹೊರತು, ಮದುವೆ ಹಬ್ಬದ ಊಟ ಮಾಡಿ ಅಭ್ಯಾಸವಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.
ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಪ್ರಚಾರಕ್ಕಾಗಿ ತುಮಕೂರಿನಲ್ಲಿ ಕಾಂಗ್ರೆಸ್ ಸೋಮವಾರ ಹಮ್ಮಿಕೊಂಡಿದ್ದ 'ಗ್ರಾಮ ಸ್ವರಾಜ್' ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. [ಜಯ ತರುತ್ತಾ ಗ್ರಾಮ ಸ್ವರಾಜ್ ಕಾಂಗ್ರೆಸ್ ಸಮಾವೇಶ?]
'ಬಿಜೆಪಿ ರೈತ ಚೈತನ್ಯ ಯಾತ್ರೆ ಮಾಡಿ ಯಾವ ರೈತನಿಗೆ ಚೈತನ್ಯ ತುಂಬಿದೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ರೈತರ ಹೆಸರಿನಲ್ಲಿ ಪಂಚಾಯಿತಿ ಚುನಾವಣೆಯಲ್ಲಿ ಮತ ಹೇಳುವ ಹಕ್ಕು ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕಿಲ್ಲ' ಎಂದು ಹೇಳಿದರು. [112 ಭರವಸೆಗಳ ಕಾಂಗ್ರೆಸ್ ಪ್ರಣಾಳಿಕೆಯ ಮುಖ್ಯಾಂಶಗಳು]
ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್, ಸಂಸದ ವೀರಪ್ಪ ಮೊಯ್ಲಿ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಚಿವರಾದ ಟಿ.ಬಿ.ಜಯಚಂದ್ರ, ಎಚ್.ಆಂಜನೇಯ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ.......

ವಾಚು, ಕನ್ನಡಕ ಟೀಕೆಗೆ ಸೀಮಿತ
'ಜೆಡಿಎಸ್ ರಾಜ್ಯದಲ್ಲಿ ಮನೆ ಮುರಕ ಕೆಲಸ ಮಾಡುತ್ತಿದೆ' ಎಂದು ಆರೋಪಿಸಿದ ಸಿದ್ದರಾಮಯ್ಯ ಅವರು, 'ಕುಮಾರಸ್ವಾಮಿ ಅವರಿಗೆ ಸೈದ್ಧಾಂತಿಕ ವಿಚಾರ ಕಾರ್ಯಕ್ರಮಗಳ ಅರಿವಿಲ್ಲ. ಸಿದ್ದರಾಮಯ್ಯ ವಾಚು, ಕನ್ನಡಕ ಹಾಕಿದ್ದಾರೆ ಎನ್ನುವ ಟೀಕೆ ಬಿಟ್ಟರೆ ಬೇರೆ ತಿಳಿದಿಲ್ಲ' ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

'ಹಣ ಬಲದಿಂದ ಚುನಾವಣೆ ಗೆದ್ದಿದೆ'
'ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿರುವುದು ಹಣ ಬಲದಿಂದ ಹೊರತು ಜನ ಬಲದಿಂದಲ್ಲ. ಇವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ನಿಮ್ಮ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಹೇಳುವ ಜಾಯಮಾನ ಅಪ್ಪ-ಮಕ್ಕಳದ್ದು' ಎಂದು ಸಿದ್ದರಾಮಯ್ಯ ಟೀಕಿಸಿದರು.

ಮೂರು ಸ್ಥಾನಗಳಲ್ಲೂ ಜೆಡಿಎಸ್ ಠೇವಣಿ ಕಳೆದುಕೊಳ್ಳಲಿದೆ
'ಜ್ಯಾತ್ಯಾತೀತ ತತ್ವ ಎಂದು ಹೇಳುವ ಜೆಡಿಎಸ್ ಹೆಬ್ಬಾಳ, ದೇವದುರ್ಗ ಮತ್ತು ಬೀದರ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಉದ್ದೇಶದಿಂದ ಅಲ್ಪ ಸಂಖ್ಯಾತ ಅಭ್ಯರ್ಥಿಗಳಿಗೆ ಹುಡುಕಿ ಟಿಕೆಟ್ ನೀಡಿದೆ. ಮೂರು ಕ್ಷೇತ್ರಗಳಲ್ಲಿಯೂ ಜೆಡಿಎಸ್ ಠೇವಣಿ ಕಳೆದುಕೊಳ್ಳಲಿದೆ' ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

'ಬಿಜೆಪಿ ಯಾವ ರೈತರಿಗೆ ಚೈತನ್ಯ ತುಂಬಿದೆ'
ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು 'ಬಿಜೆಪಿ ರಾಜ್ಯದ ತುಂಬಾ ರೈತ ಚೈತನ್ಯ ಯಾತ್ರೆ ಮಾಡಿ ಯಾವ ರೈತನಿಗೆ ಚೈತನ್ಯ ತುಂಬಿದೆ ಎಂದು ಪ್ರಶ್ನಿಸಿದರು. ರೈತರ ಹೆಸರಿನಲ್ಲಿ ಬಿಜೆಪಿಯವರೇ ಅನುಕೂಲ ಪಡೆದುಕೊಂಡಿದ್ದಾರೆ. ಪಂಚಾಯಿತಿ ಚುನಾವಣೆಯಲ್ಲಿ ಮತ ಕೇಳುವ ನೈತಿಕ ಹಕ್ಕು ಪ್ರತಿಪಕ್ಷಗಳಿಗೆ ಇಲ್ಲ' ಎಂದರು.

'ಯಾರು ಸ್ವತಂತ್ರ್ಯಕ್ಕೆ ಹೋರಾಡಿದ್ದಾರೆ'
'ಪ್ರಧಾನಿ ನರೇಂದ್ರ ಮೋದಿ ಅವರು ಸದಾ ಗಾಂಧಿ ಕುಟುಂಬದಿಂದ ದೇಶ ಹಾಳಾಗುತ್ತಿದೆ ಎಂದು ಟೀಕಿಸುತ್ತಾರೆ. ಬಿಜೆಪಿ ಹಾಗೂ ಆರ್ಎಸ್ಎಸ್ನಲ್ಲಿ ಯಾರು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ' ಎಂದು ಮೋದಿ ಬಹಿರಂಗ ಪಡಿಸಲಿ ಎಂದು ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.

'ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ'
'ಮೋದಿ ಮತ್ತು ಬಿಜೆಪಿ ಶ್ರೀಮಂತರು ಮತ್ತು ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ರಾಷ್ಟ್ರದ ಬಡ ಜನರಿಗೆ ಮೋದಿ ಸರ್ಕಾರದ ಕೊಡುಗೆ ಏನು? ಎಂಬುದನ್ನು ಅವರು ವಿವರಿಸಲಿ' ಎಂದು ಖರ್ಗೆ ಪ್ರಶ್ನಿಸಿದರು.

'ಕಾಂಗ್ರೆಸ್ ರಾಷ್ಟ್ರವನ್ನು ಒಗ್ಗೂಡಿಸುತ್ತಿದೆ'
'ಕಾಂಗ್ರೆಸ್ ಪಕ್ಷ ರಾಷ್ಟ್ರದ ಐಕ್ಯತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತಿದೆ. ಆದರೆ, ಬಿಜೆಪಿ ಜನರ ಆಹಾರ, ಆಚಾರ, ಉಡುಗೆ-ತೊಡುಗೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದರಿಂದ ಅಸಹಿಷ್ಣುತೆ ಹೆಚ್ಚಾಗುತ್ತಿದೆ' ಎಂದು ಖರ್ಗೆ ಆರೋಪಿಸಿದರು.

5 ಸಮಾವೇಶ ಆಯೋಜಿಸಿದೆ ಕಾಂಗ್ರೆಸ್
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಪ್ರಚಾರ ನಡೆಸಲು ಕರ್ನಾಟಕ ಕಾಂಗ್ರೆಸ್ 5 ಬೃಹತ್ ಸಮಾವೇಶಗಳನ್ನು ಆಯೋಜಿಸಲಿದೆ. ಮೈಸೂರು ಮತ್ತು ತುಮಕೂರಿನಲ್ಲಿ ಸಮಾವೇಶಗಳು ನಡೆದಿದ್ದು, ಕಲಬುರಗಿ, ಬಾಗಲಕೋಟೆ, ಧಾರವಾಡದಲ್ಲಿ ಸಮಾವೇಶಗಳು ನಡೆಯಬೇಕಾಗಿವೆ.

ಚುನಾವಣೆ ವೇಳಾಪಟ್ಟಿ
ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಚಾರಿ ಅವರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಫೆ.13ರ ಶನಿವಾರ ಮತ್ತು 20ರ ಶನಿವಾರ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಫೆ.23ರ ಮಂಗಳವಾರ ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications