ನಾನು ಕಾಟಾಚಾರಕ್ಕೆ ಶಿರಾಕ್ಕೆ ಬಂದಿಲ್ಲ: ಬಿ.ವೈ. ವಿಜಯೇಂದ್ರ!
ಬೆಂಗಳೂರು, ಅ. 30: ಉಪ ಚುನಾವಣೆಯಲ್ಲಿ ಶಿರಾ ತಾಲೂಕಿನ ಮದಲೂರು ಕೆರೆಯ ವಿಚಾರ ಮೂರು ಪಕ್ಷಗಳಿಗೆ ರಾಜಕೀಯ ಅಸ್ತ್ರವಾಗಿದೆ. ಕ್ಷೇತ್ರದ ಜನರನ್ನು ಕೆರೆಯ ನೀರಿನ ಅಸ್ತ್ರದೊಂದಿಗೆ ಭಾವನಾತ್ಮಕವಾಗಿ ಸೆಳೆಯಲು ಪ್ರಮುಖವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮುಂದಾಗಿವೆ. ಹೀಗಾಗಿಯೇ ಅದೇ ವಿಚಾರವು ಚುನಾವಣೆಯಲ್ಲಿ ಪ್ರಮುಖ ಚರ್ಚೆಯಾಗುತ್ತಿದೆ.
ಶಿರಾ ಉಪ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ, ಮದಲೂರಿನಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾತನಾಡಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಹಳು ನೀರಾವರಿ ಸಮಸ್ಯೆಯನ್ನು ಚುನಾವಣಾ ಗಿಮಿಕ್ ಆಗಿ ಬಳಸಿಕೊಳ್ಳುತ್ತಿದ್ದರು. ಆದರೆ ಅವರಿಂದ ಮದಲೂರು ಕೆರೆಗೆ ನೀರು ತರುವ ಕೆಲಸ ಆಗಲಿಲ್ಲ. ಶಿರಾದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ ಅಂತಿದ್ದವರು, ಕ್ಷೇತ್ರ ಕೇಸರಿಮಯ ಆಗಿದ್ದನ್ನು ಕಂಡು ಅವರಿಗೆ ನಿದ್ದೆ ಬರುತ್ತಿಲ್ಲ ಎಂದರು.
ಶಿರಾದಲ್ಲಿ ಕಾಂಗ್ರೆಸ್, ಜೆಡಿಎಸ್ ಹೋರಾಟ 2ನೇ ಸ್ಥಾನಕ್ಕಾಗಿ; ಬಿಎಸ್ವೈ
ಮದಲೂರು ಕೆರೆ ಬಿಜೆಪಿ ಸರ್ಕಾರದ ಮೊದಲ ಆದ್ಯತೆಯಾಗಿದೆ. ಕೇವಲ ಚುನಾವಣೆ ಪ್ರಚಾರಕ್ಕೆ ಮಾತ್ರ ಹೇಳುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರು ಕೆರೆಗೆ ನೀರು ತರುವ ಕೆಲಸ ಮಾಡುತ್ತಾರೆ. ಬಿಜೆಪಿ ಅಭ್ಯರ್ಥಿ ಇಲ್ಲಿ ಸೋಲುವ ಪ್ರಶ್ನೆಯೇ ಇಲ್ಲ. ಎರಡನೇ ಸ್ಥಾನಕ್ಕೆ ಕಾಂಗ್ರೆಸ್-ಜೆಡಿಎಸ್ ನವರು ಇಲ್ಲಿ ಪೈಪೋಟಿ ನಡೆಸಬೇಕು ಎಂದು ವಿಜಯೇಂದ್ರ ಹೇಳಿದರು.
ಕೆ.ಆರ್. ಪೇಟೆ ಬಗ್ಗೆ ವಿಪಕ್ಷದವರು ಮಾತಾಡ್ತಿದ್ದಾರೆ. ಕೆ ಆರ್ ಪೇಟೆಗೆ ವಿಪಕ್ಷಗಳು ಹೋಗಿ ನೋಡಲಿ. ಏನೆಲ್ಲಾ ನೀರಾವರಿ ಯೋಜನೆಗಳು ಜಾರಿಯಾಗಿವೆ ಅನ್ನೋದು ಗೊತ್ತಾಗುತ್ತದೆ. ನಾವು ಶಿರಾಗೆ, ಮದಲೂರಿಗೆ ಕಾಟಾಚಾರಕ್ಕೆ ಬಂದಿಲ್ಲ. ಬದಲಾವಣೆಯನ್ನು ತರುವುದಕ್ಕೆ ಬಂದಿದ್ದೇವೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಪ್ರಚಾರದಲ್ಲಿ ಹೇಳಿದರು.