ಹೊನ್ನಾಂಬಿಕೆಗೆ ನಮಿಸಿ ಹರಕೆ ತೀರಿಸಿದ ಬಿ. ಎಸ್. ಯಡಿಯೂರಪ್ಪ
ತುಮಕೂರು, ಸೆಪ್ಟೆಂಬರ್ 28 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೊನ್ನಾಂಬಿಕೆಗೆ ನಮಿಸಿ ಹರಕೆ ತೀರಿಸಿದರು. ತಿಪಟೂರಿನಲ್ಲಿರುವ ದೇವಾಲಯದ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ಘೋಷಣೆ ಮಾಡಿದರು.
ಶನಿವಾರ ಯಡಿಯೂರಪ್ಪ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿರುವ ಹೊನ್ನವಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ತಮ್ಮ ಆಪ್ತ ಸಹಾಯಕ ಹೊತ್ತುಕೊಂಡಿದ್ದ ಹರಕೆಯನ್ನು ತೀರಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ದೇವಾಲಯಕ್ಕೆ ಭೇಟಿ ಮಾಡಿಸುವುದಾಗಿ ಹರಕೆ ಹೊರಲಾಗಿತ್ತು. ಇಂದು ಯಡಿಯೂರಪ್ಪ ದೇವಾಲಯಕ್ಕೆ ಭೇಟಿ ನೀಡಿದರು. ಅರ್ಚಕರು ಪೂರ್ಣಕುಂಭ ಸ್ವಾಗತವನ್ನು ಕೋರಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, "ಇಂದು ಮಹಾಲಯ ಅಮಾವಾಸ್ಯೆ. ಹೊನ್ನಾಂಬಿಕೆ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂದು ಸಂತೋಷ್ ಹೇಳಿದ್ದರು. ತಾಯಿಯ ದರ್ಶನದಿಂದ ನೆಮ್ಮದಿ, ಸಮಾಧಾನ ಸಿಕ್ಕಿದೆ" ಎಂದು ಹೇಳಿದರು.
ದೇವಾಲಯದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಭಕ್ತರು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಒಂದು ವಾರದಲ್ಲಿ 50 ಲಕ್ಷ ರೂ. ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ಭಕ್ತರಿಗೆ ಭರವಸೆ ನೀಡಿದರು.

"ಪ್ರವಾಹ ಸಂತ್ರಸ್ತ ರೈತರಿಗೆ ಕೇಂದ್ರ ಸರ್ಕಾರದಿಂದ 2 ಸಾವಿರ ರೂ.ಗಳಂತೆ 3 ಕಂತುಗಳಲ್ಲಿ ಪರಿಹಾರದ ಹಣ ಸಿಗುತ್ತಿದೆ. ರಾಜ್ಯ ಸರ್ಕಾರದಿಂದ ನೀಡಲಾಗುವ 2 ಸಾವಿರ ರೂ. ಪರಿಹಾರವನ್ನು 4 ಸಾವಿರಕ್ಕೆ ಹೆಚ್ಚಿಸಿ ರೈತರಿಗೆ ನೀಡುತ್ತೇವೆ" ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications