ಹುಳಿಯಾರು ಶಾಲಾ ದುರಂತ: ಆರೋಪಿಗಳಾದ ಕಿರಣ್, ಕವಿತಾ ನಾಪತ್ತೆ
ಮಾಜಿ ಶಾಸಕ ಕಿರಣ್ ಕುಮಾರ್ ಹಾಗೂ ಅವರ ಪತ್ನಿ ಕವಿತಾ ಕಿರಣ್ ಸೇರಿದಂತೆ ಆರು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದ್ದ 1ನೇ ಜೆಎಂಎಫ್ ನ್ಯಾಯಾಲಯ. ಜಾಮೀನು ಸಿಕ್ಕ ನಂತರ ಕಿರಣ್ ಹಾಗೂ ಕವಿತಾ ನಾಪತ್ತೆ.
ತುಮಕೂರು, ಮಾರ್ಚ್ 10: ಹುಳಿಯಾರಿನಲ್ಲಿರುವ ವಿದ್ಯಾವಾರಿಧಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಶಾಲೆಯ ಮಾಲೀಕ ಹಾಗೂ ಮಾಜಿ ಶಾಸಕ ಕಿರಣ್ ಕುಮಾರ್, ಅವರ ಪತ್ನಿ ಕವಿತಾ ಕಿರಣ್ ಅವರು ನಾಪತ್ತೆಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸರು ಕಿರಣ್ ಕುಮಾರ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಆದರೆ, ವಿಚಾರಣೆಯ ನಂತರ ಅವರನ್ನು 1ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಲ್ಲಿ ಅವರಿಗೆ ಷರತ್ತು ಬದ್ಧ ಜಾಮೀನೂ ಸಿಕ್ಕಿತ್ತು. ಆದರೆ, ಜಾಮೀನು ಸಿಕ್ಕ ಬೆನ್ನಲ್ಲೇ ಈ ಇಬ್ಬರೂ ನಾಪತ್ತೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇನ್ನುಳಿದಂತೆ, ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನುಳಿದ 4 ಆರೋಪಿಗಳಿಗೆ 1ನೇ ಜೆಎಂಎಫ್ ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಶಾಲೆಯ ಹಾಸ್ಟೆಲ್ ನ ವಾರ್ಡನ್ ಆಗಿರುವ ಸುಹಾಸ್, ಅಡುಗೆ ಭಟ್ಟ ಶಿವಣ್ಣ, ಅಡುಗೆ ಸಹಾಯಕ ಜಗದೀಶ್ ಹಾಗೂ ಅಡುಗೆ ಸಹಾಯಕಿ ರಂಗ ಲಕ್ಷ್ಮಮ್ಮ ಅವರಿಗೆ ಜಾಮೀನು ಸಿಕ್ಕಿದೆ.
ಬುಧವಾರ (ಮಾ. 8) ರಾತ್ರಿ ಎಂದಿನಂತೆ ಹಾಸ್ಟೆಲ್ ವಿದ್ಯಾರ್ಥಿಗಳಾದ ಶಾಂತಮೂರ್ತಿ, ಆಕಾಂಕ್ಷಾ ಪಲ್ಲಕ್ಕಿ, ಶ್ರೇಯಸ್, ಸುದರ್ಶನ್ ಹಾಗೂ ಹಾಸ್ಟೆಲ್ ಗಾರ್ಡ್ ಎಲ್ಲರಿಗಿಂತ ಮುಂಚೆಯೇ ಆಹಾರ ಸೇವಿಸಿದ್ದರು.

ಆದರೆ, ಆಹಾರ ಸೇವಿಸಿದ ಕೆಲ ಹೊತ್ತಿಗೇ ತೀವ್ರ ಅಸ್ವಸ್ಥರಾದ ಈ ಎಲ್ಲರನ್ನೂ ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲಿ ಶಾಂತಮೂರ್ತಿ, ಆಕಾಂಕ್ಷಾ ಪಲ್ಲಕ್ಕಿ ಹಾಗೂ ಶ್ರೇಯಸ್ ಅಸುನೀಗಿದ್ದರು.
ಚಿಂತಾಜನಕ ಪರಿಸ್ಥಿತಿಯಲ್ಲಿದ್ದ ಸುದರ್ಶನ್ ಹಾಗೂ ಗಾರ್ಡ್ ಗೆಚಿಕಿತ್ಸೆಗೊಳಪಡಿಸಲಾಗಿತ್ತು. ಅವರಿನ್ನೂ ಚಿಕಿತ್ಸೆಯಲ್ಲೇ ಮುಂದುವರಿದಿದ್ದಾರೆ.












Click it and Unblock the Notifications