ತುಮಕೂರು: ತನ್ನ ಚಿತ್ರ ಚಾನೆಲ್ ಗೆ ನೀಡಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಖೈದಿ
ಖೈದಿಗಳು ಚಿತ್ರಗಳನ್ನು ತೆಗೆದು, ನ್ಯೂಸ್ ಚಾನೆಲ್ ಗಳಿಗೆ ನೀಡಿ ಖೈದಿಗಳಿಗೆ ಕಿರುಕುಳ ನೀಡುತ್ತಿದ್ದ ಜೈಲರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಹಿಳಾ ಖೈದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು, ಜೂನ್ 2: ಖೈದಿಗಳು ಕೆಲಸ ಮಾಡುತ್ತಿರುವ ಚಿತ್ರಗಳನ್ನು ತೆಗೆದು, ನ್ಯೂಸ್ ಚಾನೆಲ್ ಗಳಿಗೆ ನೀಡಿ ಖೈದಿಗಳಿಗೆ ಕಿರುಕುಳ ನೀಡುತ್ತಿದ್ದ ಜೈಲರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಹಿಳಾ ಖೈದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನ ಕೇಂದ್ರ ಮಹಿಳಾ ಕಾರಾಗ್ರಹದಲ್ಲಿ ನಡೆದಿದೆ.
ಜೈಲರ್ ವಿರುದ್ಧ ಮಹಿಳಾ ಖೈದಿಗಳು ಉಪವಾಸ ಸತ್ಯಾಗ್ರಹ ನಡೆಸಿ ಪ್ರತಿಭಟಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.[ತುಮಕೂರಿನಲ್ಲಿ ಅತ್ತೆ-ಮಾವನ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ]
ಕಾನ್ ಸ್ಟೇಬಲ್ ಉಮಾ ಎಂಬುವವರ ಪತಿ ಮುರಳೀಕೃಷ್ಣ ಮತ್ತು ಶಿನಾಜಾ ನಿಗವನ್ ಎಂಬ ಇಬ್ಬರು ಜೈಲರ್ ಗಳು ಮಹಿಳಾ ಖೈದಿಗಳತ್ತ ಅಸಭ್ಯ ನೋಟ ಬೀರುತ್ತಿದುದಲ್ಲದೆ, ಅವರ ಚಿತ್ರಗಳನ್ನು ತೆಗೆದು ಚಾನೆಲ್ ಗಳಿಗೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಮಹಿಳಾ ಖೈದಿಗಳು, ಈ ಜೈಲರ್ ಗಳನ್ನು ಕೆಲಸದಿಂದ ತೆಗೆಯದ ಹೊರತು ನಾವು ಊಟ-ನಿದ್ದೆ ಮಾಡೊಲ್ಲ ಎಂದು ಪಟ್ಟು ಹಿಡಿದಿದ್ದರು.

ಪತ್ನಿ ಉಮಾ ಚಿತ್ರದುರ್ಗಕ್ಕೆ ವರ್ಗಾವಣೆಗೊಂಡು ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರೂ, ಪತಿ ಮುರಳೀಕೃಷ್ಣ ಮಾತ್ರ ತುಮಕೂರಿನಲ್ಲೇ ಇದ್ದ. ಇಲ್ಲಿ ಜೈಲರ್ ಆಗಿ ಕೆಲಸ ಮಾಡುತ್ತಿದ್ದ ಆತ ಪ್ರತಿದಿನ ಇಲ್ಲಿನ ಮಹಿಳಾ ಖೈದಿಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ. ಇಷ್ಟುದಿನ ಸಹಿಸಿಕೊಂಡಿದ್ದ ಖೈದಿಗಳು, ಈತ ತಮ್ಮ ಚಿತ್ರಗಳನ್ನು ತೆಗೆದು ಚಾನೆಲ್ ಗಳಿಗೆ ನೀಡಿದ್ದನ್ನು ಸಹಿಸಲಾಗದೆ ಪ್ರತಿಭಟನೆ ನಡೆಸುವುದಕ್ಕೆ ಆರಂಭಿಸಿದ್ದಾರೆ.
ಪ್ರತಿಭಟನೆ ತೀವ್ರವಾಗಿದ್ದಲ್ಲದೆ, ಆತ್ಮಹತ್ಯೆ ಪ್ರಯತ್ನವೂ ನಡೆದ ಕಾರಣ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಇಲ್ಲಿನ ಉಪ ಪೊಲೀಸ್ ಅಧಿಕಾರಿ ವೀರಭದ್ರಸ್ವಾಮಿ ಮೂರು ಗಂಟೆಗಳ ಕಾಲ ಖೈದಿಗಳೊಂದಿಗೆ ಮಾತನಾಡಿ, ಸಮಸ್ಯೆಯನ್ನು ಬಗೆಹರಿಸುವ ಅಭಯ ನೀಡಿದ್ದರು.
ಅದರಂತೆಯೇ ಜೈಲರ್ ಅನ್ನು ವರ್ಗಾವಣೆ ಮಾಡಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮ್ಮ ಅವರಿಗೆ ಆಸ್ಪತರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಎಲ್ಲ ಬೆಳವಣಿಗೆಯ ನಂತರ ಮಹಿಳಾ ಖೈದಿಗಳು ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡರು.












Click it and Unblock the Notifications