ತುಮಕೂರು; ಅಜ್ಜನ ಎದುರೇ ಮೊಮ್ಮಗಳು ಚಿರತೆಗೆ ಬಲಿ
ತುಮಕೂರು, ಮಾರ್ಚ್ 01: ಚಿರತೆಯೊಂದು ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ದಾಳಿ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆಸಿದೆ. ಅಜ್ಜ-ಅಜ್ಜಿಯ ಕಣ್ಣ ಮುಂದೆಯೇ ಮಗುವನ್ನು ಚಿರತೆ ಹೊತ್ತುಕೊಂಡು ಹೋಗಿದೆ.
ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಬೈಚೇನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯ ಗಂಗ ಚಿಕ್ಕಣ್ಣ ಎಂಬುವವರ ಮೊಮ್ಮಗಳು ಮನೆಯ ಮುಂದೆ ಆಟವಾಡುತ್ತಿದ್ದಾಗ ಚಿರತೆ ದಾಳಿ ಮಾಡಿದೆ.
ಆಟವಾಡುತ್ತಿದ್ದ ಮಗು ಮನೆಯೊಳಗೆ ಬರಬೇಕಿತ್ತು. ಅಜ್ಜ-ಅಜ್ಜಿ ಅಲ್ಲಿಯೇ ಇದ್ದರು. ಅಷ್ಟರಲ್ಲಿಯೇ ಚಿರತೆ ದಾಳಿ ನಡೆಸಿ ಮಗುವನ್ನು ಹೊತ್ತೊಯ್ದಿದೆ. ರಾತ್ರಿ 10 ಗಂಟೆ ವೇಳೆಗೆ ಮಗುವಿನ ಶವ ಪತ್ತೆಯಾಗಿದೆ.

ಚಂದನ ಎಂಬ ಮೂರು ವರ್ಷದ ಮಗು ಅಜ್ಜ-ಅಜ್ಜಿ ಜೊತೆಗೆ ಬೈಚೇನಹಳ್ಳಿ ಗ್ರಾಮದಲ್ಲಿತ್ತು. ಬೆಂಗಳೂರಿನಲ್ಲಿದ್ದ ತಂದೆ ಶ್ರೀನಿವಾಸ, ತಾಯಿ ಶಿಲ್ಪ ಶನಿವಾರ ಮಗಳನ್ನು ನೋಡಲು ಗ್ರಾಮಕ್ಕೆ ಬಂದಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಮಗು ಮನೆಯ ಮುಂದೆ ಆಟವಾಡುತ್ತಿದ್ದಾಗ ಚಿರತೆ ದಾಳಿ ಮಾಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಚಿರತೆಯನ್ನು ಹಿಡಿಯಲು ಬೋನ್ ಇಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಚಿರತೆ ಹಿಡಿಯಲು ಕ್ರಮ ಕೈಗೊಂಡಿರಲಿಲ್ಲ.
ಮಾಜಿ ಶಾಸಕ, ಬಿಜೆಪಿ ನಾಯಕ ಸುರೇಶ್ ಗೌಡ ಸ್ಥಳಕ್ಕೆ ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಭಾನುವಾರ ಅರಣ್ಯ ಸಚಿವ ಆನಂದ್ ಸಿಂಗ್ ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಭರವಸೆ ನೀಡಿದ್ದಾರೆ. ಇದೇ ಗ್ರಾಮದಲ್ಲಿ ಕಳೆದ ತಿಂಗಳು ಬಾಲಕನೊಬ್ಬ ಚಿರತೆ ದಾಳಿಗೆ ಬಲಿಯಾಗಿದ್ದ.












Click it and Unblock the Notifications