ಶಬರಿಮಲೆ ಪ್ರವೇಶಿಸುವ ತೃಪ್ತಿ ದೇಸಾಯಿ ಪ್ರಯತ್ನ ವಿಫಲ
Recommended Video

ತಿರುವನಂತಪುರಂ, ನವೆಂಬರ್ 16 : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸುವ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಪ್ರಯತ್ನ ವಿಫಲವಾಗಿದೆ. ಅಯ್ಯಪ್ಪ ಭಕ್ತರ ಭಾರಿ ಪ್ರತಿಭಟನೆಗೆ ಮಣಿದ ಅವರು ಮುಂಬೈಗೆ ವಾಪಸ್ ಆಗಿದ್ದಾರೆ.
ಭೂಮಾತಾ ಸಂಘಟನೆಯ ಸಂಸ್ಥಾಪಕಿ ತೃಪ್ತಿ ದೇಸಾಯಿ ಅವರು ಶುಕ್ರವಾರ ಮುಂಜಾನೆ 5 ಗಂಟೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ವಿಮಾನ ನಿಲ್ದಾಣದ ಹೊರಗೆ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸುತ್ತಿದ್ದರು.
ಸಂಜೆಯಾದರೂ ವಿಮಾನ ನಿಲ್ದಾಣದಿಂದ ತೃಪ್ತಿ ದೇಸಾಯಿ ಮತ್ತು ಅವರ ಬೆಂಬಲಿಗರಿಗೆ ಹೊರಬರಲು ಸಾಧ್ಯವಾಗಲಿಲ್ಲ. ಕೇರಳ ಪೊಲೀಸರ ಸಲಹೆಯಂತೆ ಅವರು ಸಂಜೆ ಮುಂಬೈಗೆ ವಾಪಸ್ ಆದರು. ಈ ಮೂಲಕ ಮಹಿಳೆಯರು ದೇವಾಲಯ ಪ್ರವೇಶಿಸುವ 3ನೇ ಪ್ರಯತ್ನ ಸಹ ವಿಫಲವಾಗಿದೆ.
ತೃಪ್ತಿ ದೇಸಾಯಿ ಆಗಮನದ ಹಿನ್ನಲೆಯಲ್ಲಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ವಿಮಾನ ನಿಲ್ದಾಣದಿಂದ ಶಬರಿಮಲೆಗೆ ಅವರನ್ನು ಕರೆದುಕೊಂಡು ಹೋಗಲು ಟ್ಯಾಕ್ಸಿ ಚಾಲಕರು ಸಹ ನಿರಾಕರಿಸಿದರು.....

ಪತ್ರ ಬರೆದಿದ್ದರು
ಸುಪ್ರೀಂಕೋರ್ಟ್ ಆದೇಶದ ಬಳಿಕ ತೃಪ್ತಿ ದೇಸಾಯಿ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಲು ಬಯಸಿದ್ದರು. ಬುಧವಾರವೇ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ಶುಕ್ರವಾರ ಕೇರಳಕ್ಕೆ ಆಗಮಿಸುವುದಾಗಿ ಹೇಳಿದ್ದರು. ಸೂಕ್ತ ರಕ್ಷಣೆ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಅವರು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಷಯ ತಿಳಿದ ಪೊಲೀಸರು ನಿಲ್ದಾಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.

ಕೊಚ್ಚಿಗೆ ಬಂದ ತೃಪ್ತಿ
ಶುಕ್ರವಾರ ಮುಂಜಾನೆ 4.30ರ ಸುಮಾರಿಗೆ ತೃಪ್ತಿ ದೇಸಾಯಿ ಅವರು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಆದರೆ, ವಿಮಾನ ನಿಲ್ದಾಣದ ಹೊರಗೆ ಅಯ್ಯಪ್ಪ ಸ್ವಾಮಿ ಭಕ್ತರು ಭಾರಿ ಪ್ರತಿಭಟನೆ ಆರಂಭಿಸಿದರು. ಆದ್ದರಿಂದ, ಪೊಲೀಸರು ತೃಪ್ತಿ ದೇಸಾಯಿ ಮತ್ತು ಅವರ ಬೆಂಬಲಿಗರನ್ನು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಡಲಿಲ್ಲ.

ಟ್ಯಾಕ್ಸಿಗಳ ಬುಕ್ಕಿಂಗ್ ಕ್ಯಾನ್ಸಲ್
ತೃಪ್ತಿ ದೇಸಾಯಿ ಅವರು 2 ರಿಂದ 3 ಬಾರಿ ದೇವಾಲಯಕ್ಕೆ ತೆರಳಲು ಟ್ಯಾಕ್ಸಿ ಬುಕ್ ಮಾಡಿದರು. ಆದರೆ, ಟ್ಯಾಕ್ಸಿ ಚಾಲಕರು ಪ್ರತಿಭಟನೆಗೆ ಹೆದರಿ ಅದನ್ನು ರದ್ದುಗೊಳಿಸಿದರು. ಪೊಲೀಸರು ವಿಮಾನ ನಿಲ್ದಾಣದ ಮತ್ತೊಂದು ದ್ವಾರದ ಮೂಲಕ ಅವರನ್ನು ಹೊರಗೆ ಕರೆದುಕೊಂಡು ಹೋಗುವ ಪ್ರಯತ್ನ ನಡೆಸಿದರು. ಆದರೆ, ಅಲ್ಲಿಯೂ ಪ್ರತಿಭಟನಾಕಾರರು ಇದ್ದರು. ಆದ್ದರಿಂದ, ವಿಮಾನ ನಿಲ್ದಾಣದಿಂದ ಹೊರ ಹೋಗುವ ಪ್ರಯತ್ನ ಫಲ ನೀಡಲಿಲ್ಲ.

ಅಯ್ಯಪ್ಪ ಭಕ್ತರ ಮೇಲೆ ಆರೋಪ
'ಪ್ರತಿಭಟನಾಕಾರರು ನಮಗೆ ಟ್ಯಾಕ್ಸಿ ಸಿಗದಂತೆ ಬೆದರಿಕೆ ಹಾಕಿದರು. ನಮಗೆ ಹೋಟೆಲ್ಗಳಲ್ಲಿ ರೂಂ ನೀಡಿದರೆ ಹೋಟೆಲ್ ಮೇಲೆ ದಾಳಿ ಮಾಡುವ ಬೆದರಿಕೆಯೊಡ್ಡಿದರು. ಅಯ್ಯಪ್ಪ ಭಕ್ತರು ಎಂದು ಹೇಳಿಕೊಳ್ಳುವವರು ನಮ್ಮನ್ನು ಅಶ್ಲೀಲ ಪದಗಳಿಂದ ನಿಂದಿಸಿದರು' ಎಂದು ತೃಪ್ತಿ ದೇಸಾಯಿ ಆರೋಪ ಮಾಡಿದರು.

ಮಹಿಳೆಯರಿಗೆ ಪ್ರವೇಶವಿಲ್ಲ
ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟ್ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶ ಪಡೆಯಬಹುದು ಎಂದು ತೀರ್ಪು ನೀಡಿತ್ತು. ಆದರೆ, ಎರಡು ಬಾರಿ ದೇವಾಲಯ ಪ್ರವೇಶಕ್ಕೆ ಬಯಸಿದ್ದ ಮಹಿಳೆಯರು ಭಾರಿ ಪ್ರತಿಭಟನೆ ಹಿನ್ನಲೆಯಲ್ಲಿ ವಾಪಸ್ ಆಗಿದ್ದರು. ಶುಕ್ರವಾರ ನಡೆದ 3ನೇ ಪ್ರತಯತ್ನವೂ ವಿಫಲವಾಗಿದೆ.












Click it and Unblock the Notifications