ಮಕರವಿಳಕ್ಕು ಯಾತ್ರೆ, ಕಠಿಣ ಕೋವಿಡ್ 19 ನಿಯಮ ಜಾರಿ
ಶಬರಿಮಲೆ, ಜನವರಿ 03: ಶಬರಿಮಲೆಯ ಅಯ್ಯಪ್ಪ ಸ್ವಾಮಿ ಸನ್ನಿಧಿಯ ಆರು ಅರ್ಚಕರನ್ನೊಳಗೊಂಡಂತೆ 37 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗುತ್ತಿದ್ದಂತೆ ಕಠಿಣ ಕೋವಿಡ್ 19 ನಿಯಮಗಳನ್ನು ಜಾರಿಗೊಳಿಸಲಾಗಿದೆ. ಸನ್ನಿಧಿ ಹಾಗೂ ಆವರಣಗಳನ್ನು ಥರ್ಮಲ್ ಫಾಗಿಂಗ್ ಮೂಲಕ ಸೋಂಕು ಮುಕ್ತಗೊಳಿಸಲಾಗಿದೆ ಎಂದು ದೇವಸ್ವಂ ಸಚಿವ ಕೆ ಸುರೇಂದ್ರನ್ ಹೇಳಿದ್ದಾರೆ.
ಮಕರವಿಳಕ್ಕು ಯಾತ್ರೆಯ 41 ದಿನಗಳ ಸೀಸನ್ ಶುರುವಾಗಿದೆ. ಜೊತೆಗೆ ಭಕ್ತಾದಿಗಳ ಪ್ರತಿದಿನ ಪ್ರವೇಶ ಸಂಖ್ಯೆಯನ್ನು 5 ಸಾವಿರಕ್ಕೇರಿಸಲಾಗಿದೆ. ಇದರ ಬೆನ್ನಲ್ಲೇ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ದೇವಸ್ಥಾನ ಆಡಳಿತ ಮಂಡಳಿಯು ಎಚ್ಚೆತ್ತುಕೊಂಡಿದೆ. ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಎಲ್ಲರನ್ನೂ ಐಸೊಲೇಷನ್ ನಲ್ಲಿರಿಸಲಾಗಿದೆ.
ಡಿಸೆಂಬರ್ 31 ರಿಂದ ಜನವರಿ 19ರ ತನಕ ಮಕರವಿಳಕ್ಕು ಹಬ್ಬದ ಋತು ಆರಂಭವಾಗಲಿದೆ. ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಿ, ಕೊವಿಡ್ 19 ನೆಗಟಿವ್ ಇದ್ದ ಭಕ್ತರು ಮಾತ್ರ ಶಬರಿ ಬೆಟ್ಟವನ್ನೇರಬಹುದಾಗಿದೆ. ಈ ಮುಂಚೆ ಆಂಟಿಜನ್ ಪರೀಕ್ಷೆ ವರದಿಯಲ್ಲಿ ನೆಗಟಿವ್ ಎಂದರೆ ಬಂದರೆ ಸಾಕಿತ್ತು. ಆದರೆ, ಈಗ ಹೊಸ ನಿಬಂಧನೆ ಹಾಕಲಾಗಿದೆ. ಜೊತೆಗೆ ದೇಗುಲದ ಆವರಣದಲ್ಲಿ ಥರ್ಮಲ್ ಫಾಗಿಂಗ್ ಮಷಿನ್ ಗಳ ಸದ್ದು ಜೋರಾಗಿ ಕೇಳಿಸಿದೆ.

ಶಬರಿಮಲೆ ಅಭಯಾರಣ್ಯ ಪ್ರವೇಶದಿಂದ ಸನ್ನಿಧಿ ತನಕ ಥರ್ಮಲ್ ಫಾಗಿಂಗ್, ಹ್ಯಾಂಡ್ ಸ್ಪ್ರೇಯರ್ ಮುಂತಾದ ಸೋಂಕುನಿವಾರಕಗಳನ್ನು ಬಳಸಿ ಶುಚಿಗೊಳಿಸಲಾಗುತ್ತಿದೆ, ಇದಕ್ಕಾಗಿ ದೇವಸ್ವಂ ನಿರ್ವಹಣಾ ತಂಡದ ವಿಶೇಷ ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವ ಸುರೇಂದ್ರನ್ ಹೇಳಿದರು.












Click it and Unblock the Notifications