ಮತ್ತೆ ರಣರಂಗವಾದ ಶಬರಿಮಲೆ: 70 ಕ್ಕೂ ಹೆಚ್ಚು ಜನ ಪೊಲೀಸ್ ವಶಕ್ಕೆ
Recommended Video

ತಿರುವನಂತಪುರಂ, ನವೆಂಬರ್ 19: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ಭಾನುವಾರ ರಾತ್ರಿಯೂ ಮುಂದುವರಿದಿತ್ತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆಯ ಮುಂದೆ, ಮತ್ತು ಕೇರಳದ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ 70 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು.
ದೇವಾಲಯದ ಆವರಣದಲ್ಲಿ ಪೊಲೀಸರ ಜಮಾವಣೆಯನ್ನು ಪ್ರತಿಭಟನಕಾರರು ವಿರೋಧಿಸಿದರು. ಪೊಲಿಸ್ ಪಡೆಯನ್ನು ದೇವಾಲಯದ ಆವರಣದಿಂದ ಹಿಂಪಡೆಯುವಂತೆ ಬೇಡಿಕೆ ಇಟ್ಟರು. ಈ ಸಂದರ್ಭದಲ್ಲಿ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.

ಇಂದು ಕೇಂದ್ರ ಸಚಿವ ಆಲ್ಫಾನ್ಸ್ ಭೇಟಿ
ಶಬರಿಮಲೆ ದೇವಾಲಯದೆದುರು ಪ್ರತಿಭಟನೆ ಮಾಡಿದ ಕಾರ್ಯಕರ್ತರನ್ನು ಬಂಧಿಸಿದ ಕ್ರಮವನ್ನು ಖಂಡಿಸಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫಾನ್ಸ್ ಕನಂಥನಮ್ ವಿರೋಧಿಸಿದ್ದೆ. ಅವರು ಇಂದು ಶಬರಿಮಲೆಗೆ ಭೇಟಿ ನೀಡಲಿದ್ದು, ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ಮಹತ್ವದ ತೀರ್ಪು
ಸೆಪ್ಟೆಂಬರ್ 28 ರಂದು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನಲ್ಲಿ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಲು ಅನುಮತಿ ನೀಡಲಾಗಿತ್ತು. ಈ ಮೂಲಕ ಹತ್ತರಿಂದ ಅರವತ್ತು ವರ್ಷ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಇದ್ದ ನಿರ್ಬಂಧದ 800 ವರ್ಷಗಳ ಹಳೆಯ ಪದ್ಧತಿಗೆ ಸುಪ್ರೀಂ ಕೋರ್ಟ್ ತಿಲಾಂಜಲಿ ಬಿಟ್ತಿತ್ತು.

ಪ್ರತಿ ತಿಂಗಳೂ ಸಂಘರ್ಷ!
ಪ್ರತಿ ತಿಗಳೂ ನಾಲ್ಕು ದಿನ ಅಯ್ಯಪ್ಪ ದೇವಾಲಯವನ್ನು ಭಕ್ತರ ಪ್ರವೇಶಕ್ಕಾಗಿ ತೆರೆಯಲಾಗುತ್ತದೆ. ಈ ಸಂದರ್ಭದಲ್ಲಿ ಅಯ್ಯಪ್ಪ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರಲ್ಲಿ ಈ ಬಾರಿ ಹಲವು ಮಹಿಳೆಯರೂ ಸೇರಿದ್ದರು. ಆದರೆ ಮಹಿಳೆಯರ ಪ್ರವೇಶಕ್ಕೆ ಭಕ್ತರೇ ಅನುವು ಮಾಡಿಕೊಡದ ಕಾರಣ ಪ್ರತಿಭಟನೆ ಪ್ರತಿ ತಿಂಗಳೂ ದೇವಾಲಯ ತೆರೆಯುವ ಸಂದರ್ಭದಲ್ಲಿ ನಿರಂತರವಾಗಿ ನಡೆಯುತ್ತಲೇ ಇದ್ದು, ಈ ಸಂದರ್ಭದಲ್ಲಿ ದೇವಾಲಯದ ಆವರಣ ರಣರಂಗವಾಗುತ್ತಿದೆ.

ವಿಫಲವಾದ ತೃಪ್ತಿ ದೇಸಾಯಿ ಪ್ರಯತ್ನ!
ನವೆಂಬರ್ ತಿಂಗಳಿನಲ್ಲಿ ದೇವಾಲಯ ಭಕ್ತರಿಗಾಗಿ ತೆರೆದಿದ್ದ ಸಂದರ್ಭದಲ್ಲಿ ದೇವಾಲಯ ಪ್ರವೇಶಕ್ಕೆ ಯತ್ನಿಸಿದ ಮಹಿಳೆಯರನ್ನು ಪ್ರತಿಭಟನಕಾರರು ತಡೆದಿದ್ದರು. ಶುಕ್ರವಾರ ದೇವಾಲಯ ಪ್ರವೇಶಕ್ಕೆ ಯತ್ನಿಸಿದ ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿಯವರ ಪ್ರಯತ್ನವೂ ವಿಫಲವಾಗಿತ್ತು. ನಾನಿನ್ನು ಗೇರಿಲ್ಲಾ ತಂತ್ರ ಬಳಸಿ ದೇವಾಲಯ ಪ್ರವೇಶಿಸುತ್ತೇನೆ. ಹೀಗೆ ಪ್ರಚಾರ ನೀಡಿ ದೇವಾಲಯ ಪ್ರವೇಶಕ್ಕೆ ಯತ್ನಿಸಿದರೆ ನಮ್ಮ ಗುರಿ ಕೈಗೂಡುವುದಿಲ್ಲ ಎಂದು ತೃಪ್ತಿ ದೇಸಾಯಿ ಹೇಳಿದ್ದರು.

ಪೊಲೀಸ್ ಭದ್ರತೆ ಬೇಡ
ಈ ಹಿನ್ನಲೆಯಲ್ಲಿ ದೇವಾಲಯಕ್ಕೆ ವಿಶೇಷ ಭದ್ರತೆ ನೀಡಲಾಗಿತ್ತು. ಆದರೆ ದೇವಾಲಯದ ಆವರಣದಲ್ಲಿ ಎಲ್ಲಿ ನೋಡಿದರಲ್ಲಿ ಪೊಲೀಸರೇ ತುಂಬಿರುವುದರಿಂದ ಭಕ್ತರಿಗೆ ಸ್ವತಂತ್ರವಾಗಿ ದೇವರ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಆದ್ದರಿಂದ ಪೊಲೀಸ್ ಜಮಾವಣೆಯನ್ನು ಈ ಸ್ಥಳದಿಂದ ತೆರವುಗೊಳಿಸಬೇಕು ಎಂಬ ಬೇಡಿಕೆ ಪ್ರತಿಭಟನಕಾರರಿಂದ ಕೇಳಿಬರುತ್ತಿದೆ.











Click it and Unblock the Notifications