ಲಸಿಕೆ ವಿತರಣೆಯ ಹೊಸ ನೀತಿಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಕೇರಳ ಸಿಎಂ ಪತ್ರ
ತಿರುವನಂತಪುರಂ, ಏಪ್ರಿಲ್ 20: ಕೊರೊನಾ ಎರಡನೇ ಅಲೆ ಹೊಡೆತದ ನಡುವೆ ಕೊರೊನಾ ಲಸಿಕೆಯ ಕೊರತೆಯೂ ದೇಶವನ್ನು ಕಾಡುತ್ತಿದೆ. ಹೀಗಾಗಿ ಲಸಿಕಾ ವಿತರಣೆ ಕುರಿತ ಹೊಸ ನೀತಿಯನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಲಸಿಕೆ ಪಡೆಯಲು ಅನುಮತಿ ನೀಡುವ ಮೂಲಕ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಕೇಂದ್ರಕ್ಕೆ ಧನ್ಯವಾದ ಹೇಳಿರುವ ಅವರು, ಕೇರಳಕ್ಕೆ ಇನ್ನಷ್ಟು ಲಸಿಕೆಗಳ ಅಗತ್ಯವಿದೆ ಎಂದು ಬೇಡಿಕೆ ಇಟ್ಟರು. ನಾವು 50 ಲಕ್ಷ ಡೋಸ್ಗಳ ಲಸಿಕೆಗೆ ಬೇಡಿಕೆ ಇಟ್ಟಿದ್ದೆವು. ಆದರೆ ಇದುವರೆಗೂ ಕೇವಲ 5.5 ಲಕ್ಷ ಡೋಸ್ಗಳು ದೊರೆತಿವೆ ಎಂದು ಹೇಳಿದ್ದಾರೆ.
ರಾಜ್ಯಗಳು ಲಸಿಕೆ ಪಡೆಯಲು ಮುಕ್ತ ಮಾರುಕಟ್ಟೆಯೊಂದಿಗೆ ಸ್ಪರ್ಧೆಗೆ ಬೀಳುವ ಪರಿಸ್ಥಿತಿ ಉಂಟಾಗುವುದಿಲ್ಲ ಎಂಬ ಭರವಸೆಯನ್ನು ಕೇಂದ್ರ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ರಾಜ್ಯ ಸರ್ಕಾರಗಳು ಇಂಥ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಕೆಲವು ಮಂದಿಗೆ ಲಸಿಕೆಯನ್ನು ಉಚಿತವಾಗಿ ನೀಡಬೇಕಾಗುತ್ತದೆ. ಹೀಗಾಗಿ ಲಸಿಕೆಗಳನ್ನು ರಾಜ್ಯಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಉಚಿತವಾಗಿ ನೀಡಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮೊದಲೇ ರಾಜ್ಯದ ಆರ್ಥಿಕತೆ ಇಳಿಮುಖವಾಗಿದೆ. ಹೀಗಾಗಿ ಹಣ ನೀಡಿ ಲಸಿಕೆ ಖರೀದಿಸುವುದು ರಾಜ್ಯಗಳಿಗೆ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚಾಗಲಿದೆ. ಹೀಗಾಗಿ ಕೇಂದ್ರ ಲಸಿಕೆಗಳನ್ನು ಉಚಿತವಾಗಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications