ಅಕ್ಟೋಬರ್ನಿಂದ ಶಬರಿಮಲೆಯಲ್ಲಿ ದರ್ಶನ; ಷರತ್ತುಗಳು ಅನ್ವಯ
ತಿರುವನಂತಪುರಂ, ಸೆಪ್ಟೆಂಬರ್ 29 : ಕೋವಿಡ್ ಸೋಂಕು ಇಲ್ಲದ ಭಕ್ತಾದಿಗಳಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮುಂದಿನ ತಿಂಗಳಿನಿಂದ ಸೀಮಿತ ಭಕ್ತಾದಿಗಳಿಗೆ ಮಾತ್ರ ದೇವಾಲಯ ಪ್ರವೇಶಿಸಲು ಅವಕಾಶ ಕೊಡಲಾಗುತ್ತದೆ ಎಂದು ಕೇರಳ ಸರ್ಕಾರ ಹೇಳಿದೆ.
ಶಬರಿಮಲೆ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡುವ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಸಭೆ ನಡೆಸಿದರು. ಬೇರೆ ರಾಜ್ಯಗಳಿಂದ ಭಕ್ತರು ಪ್ರವೇಶಿಸುವ ಸಂಖ್ಯೆಯನ್ನು ಸೀಮಿತ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೇರೆ ರಾಜ್ಯದಿಂದ ಆಗಮಿಸುವ ಭಕ್ತರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ತರಬೇಕು. ಕೇರಳ ರಾಜ್ಯದಲ್ಲಿಯೂ ಸಹ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಬರಿಮಲೆ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡುವ ಕುರಿತು ಐವರು ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ನೇತೃತ್ವದ ಸಮಿತಿ ಮಾರ್ಗಸೂಚಿಯನ್ನು ರಚನೆ ಮಾಡಲಿದೆ.

ಯಾವ ರಾಜ್ಯಗಳಿಂದ ಹೆಚ್ಚು
ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಪುದುಚೇರಿಯಿಂದ ಶಬರಿಮಲೆಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭಕ್ತರ ಸಂಖ್ಯೆಯನ್ನು ಮಿತಿಗೊಳಿಸುವುದು ಹೇಗೆ? ಎಂದು ಈ ರಾಜ್ಯಗಳ ಜೊತೆ ಕೇರಳದ ಅಧಿಕಾರಿಗಳು ಚರ್ಚೆಯನ್ನು ನಡೆಸಲಿದ್ದಾರೆ.

ಅಕ್ಟೋಬರ್ 16ರಿಂದ ದರ್ಶನ
ಅಕ್ಟೋಬರ್ 16ರಂದು ಒಂದು ವಾರದ ವಿಶೇಷ ಪೂಜೆಗಾಗಿ ದೇವಾಲಯ ಬಾಗಿಲು ತೆರೆಯಲಾಗುತ್ತದೆ. ಆಗ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನವೆಂಬರ್ 15ರ ತನಕ ದರ್ಶನ ಪಡೆಯಬಹುದಾಗಿದೆ. ಆದರೆ, ಭಕ್ತರು ದೇವಾಲಯದ ಆವರಣದಲ್ಲಿ ಇರುವಂತಿಲ್ಲ ಅಭಿಷೇಕ, ಪೂಜೆಗಳನ್ನು ಮಾಡುವಂತಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.

ಕೋವಿಡ್ ವರದಿ ನೆಗೆಟಿವ್ ಇರಬೇಕು
ದೇವಾಲಯಕ್ಕೆ ಆಗಮಿಸುವ ಭಕ್ತರ ಕೋವಿಡ್ ವರದಿ ನಗೆಟಿವ್ ಇರಬೇಕು. ಪಂಪಾ ಬಳಿ ಭಕ್ತರಿಗೆ ಆಂಟಿಜೆನ್ ಟೆಸ್ಟ್ ನಡೆಸಲು ಸಹ ದೇವಾಲಯದ ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ಮಾರ್ಗಸೂಚಿ ತಯಾರು ಮಾಡಲಿದೆ. ಮಾರ್ಗಸೂಚಿ ಅನ್ವಯ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.

ಲಾಕ್ ಡೌನ್ ಸಮಯದಿಂದ ಬಂದ್
ಕೋವಿಡ್ ಲಾಕ್ ಡೌನ್ ಸಮಯದಿಂದ ಶಬರಿಮಲೆಗೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ತಿಂಗಳ ವಿಶೇಷ ಪೂಜೆಯ ಸಮಯದಲ್ಲಿಯೂ ಸಿಬ್ಬಂದಿಗಳು ಮಾತ್ರ ಭೇಟಿ ನೀಡುತ್ತಿದ್ದಾರೆ. ಜೂನ್ 15ರಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ಬಳಿಕ ಸರ್ಕಾರ ತನ್ನ ತೀರ್ಮಾನವನ್ನು ವಾಪಸ್ ಪಡೆದಿತ್ತು.












Click it and Unblock the Notifications