ಆಂಬುಲೆನ್ಸ್ ಅಪಘಾತ: ರೋಗಿ ಕರೆತರಲು ಹೋದ ನರ್ಸ್ ಸಾವು
ತಿರುವನಂತಪುರಂ, ಮೇ 5: ಆಂಬುಲೆನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 23 ವರ್ಷದ ಡೊನ್ನಾ ಸಿ ವರ್ಗೀಸ್ ತ್ರಿಶೂರ್ ಬಳಿ ರೋಗಿಯನ್ನು ಕರೆತರಲು ಆಂಬುಲೆನ್ಸ್ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಸಂಜೆ ರೋಗಿಯನ್ನು ಕರೆತರಲು ಹೋಗುತ್ತಿದ್ದ ವೇಳೆ ರಭಸವಾಗಿ ಬಂದ ಕಾರಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆದರೆ, ಆಂಬುಲೆನ್ಸ್ನ ತುರ್ತು ವೈದ್ಯಕೀಯ ತಂತ್ರಜ್ಞೆಯಾಗಿ ಕರ್ತವ್ಯದಲ್ಲಿದ್ದ ನರ್ಸ್ ಜೀವ ಕಳೆದುಕೊಂಡಿದ್ದಾರೆ ಎಂದು ಆಂತಿಕಾಡ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನರ್ಸ್ ಸಾವಿಗೆ ಕೇರಳ ಆರೋಗ್ಯ ಸಚಿವೆ ಕೆ ಶೈಲಜಾ ಅವರು ಸಂತಾಪ ಸೂಚಿಸಿದ್ದಾರೆ. 'ಅವರ ಕುಟುಂಬದವರಿಗೆ ನೀವು ಭರಿಸುವ ಶಕ್ತಿ ಆ ದೇವರು ನೀಡಲಿ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತ್ರಿಶೂರ್ ಬಳಿಯಿರುವ ಪೆರಿಂಗೊಟುಕಾರದಲ್ಲಿ ಪೋಷಕರ ಜೊತೆ ವಾಸಿಸುತ್ತಿದ್ದ ಡೊನ್ನಾ, ಎರಡು ತಿಂಗಳ ಹಿಂದೆಯಷ್ಟೇ ಹತ್ತಿರದ ಆಂತಿಕಾಡ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು ಮತ್ತು ಎರಡು ವಾರಗಳ ಹಿಂದೆ 108 ಆಂಬ್ಯುಲೆನ್ಸ್ ಕರ್ತವ್ಯಕ್ಕೆ ಸೇರಿದ್ದಳು.
"ಕಂಟ್ರೋಲ್ ರೂಂಗೆ ಬಂದ ಕರೆಗೆ ಸ್ಪಂದಿಸಿದ್ದ ಡೊನ್ನಾ ಮತ್ತು ಅಜಯ್ ಕುಮಾರ್ ಆಂಬುಲೆನ್ಸ್ನಲ್ಲಿ ಹೊರಟರು. ಒಂದು ಕಿಲೋಮೀಟರ್ ದೂರದಲ್ಲಿ ಕಾರು ಆಂಬುಲೆನ್ಸ್ಗೆ ಡಿಕ್ಕಿ ಹೊಡೆದಿದೆ. ಆಂಬ್ಯುಲೆನ್ಸ್ ಪಲ್ಟಿಯಾಗಿದೆ"ಎಂದು ತ್ರಿಶೂರ್ನ 108 ಆಂಬುಲೆನ್ಸ್ಗಳ ಸಂಯೋಜಕ ಶಹಬಾಸ್ ತಿಳಿಸಿದ್ದಾರೆ.












Click it and Unblock the Notifications