ಕೇರಳದಲ್ಲಿ ಮತ್ತೆ ಮಳೆ: 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ತಿರುವನಂತಪುರಂ, ಅಕ್ಟೋಬರ್ 26: ಕೇರಳದಲ್ಲಿ ಇತ್ತೀಚಿಗೆ ವರುಣನ ಅರ್ಭಟಕ್ಕೆ ಸಿಲುಕಿದ ಜನ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದಾಗಲೇ ಮತ್ತೊಮ್ಮೆ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೇರಳದಲ್ಲಿಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ರಾಷ್ಟ್ರೀಯ ಹವಾಮಾನ ಸಂಸ್ಥೆ ಕಣ್ಣೂರು ಮತ್ತು ಕಾಸರಗೋಡು ಹೊರತುಪಡಿಸಿ 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಜೊತೆಗೆ ಬುಧವಾರವೂ 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಪಟ್ಟಿಯಲ್ಲಿರುವ ಜಿಲ್ಲೆಗಳಲ್ಲಿ 6-11 ಸೆಂ.ಮೀ ಮಳೆಯಾಗುವ ಸೂಚನೆ ನೀಡಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಮತ್ತೊಂದು ವಾಯುಭಾರ ಕುಸಿತದ ಬಗ್ಗೆ ವರದಿಗಳು ಕೇಳಿಬಂದಿವೆ. ವಾಯುಭಾರ ಕುಸಿತವು ಬಲಗೊಂಡರೆ ಕೇರಳದಲ್ಲಿ ಮತ್ತೊಮ್ಮೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಜೊತೆಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ಎರಡು ಸ್ಥಳಗಳಲ್ಲಿ, ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಒಂದರಲ್ಲಿ ಗಂಟೆಗೆ 40 ಕಿಮೀ ವೇಗದಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ. ಆದಾಗ್ಯೂ, ರಾಜ್ಯ ಸರ್ಕಾರವು ಇನ್ನೂ ಟ್ರಾಲಿಂಗ್ ಚಟುವಟಿಕೆಗಳ ಮೇಲೆ ನಿಷೇಧವನ್ನು ಘೋಷಿಸಿಲ್ಲ.
ಕಳೆದ ವಾರ ನಿರಂತರ ಮಳೆಯಿಂದಾಗಿ ಕೇರಳ ಭೂಕುಸಿತ ಮತ್ತು ಪ್ರವಾಹದಿಂದ ಜರ್ಜರಿತವಾಗಿದೆ. ಕೊಟ್ಟಾಯಂನ ಕೂಟ್ಟಿಕಲ್ ಮತ್ತು ಇಡುಕ್ಕಿಯ ಕೊಕ್ಕಯಾರ್ನಲ್ಲಿ ಎರಡು ಪ್ರಮುಖ ಭೂಕುಸಿತಗಳು ಸೇರಿದಂತೆ ರಾಜ್ಯಾದ್ಯಂತ ವಿವಿಧ ಮಳೆ ಸಂಬಂಧಿತ ಘಟನೆಗಳಿಗೆ ನಲವತ್ತೆರಡು ಜೀವಗಳು ಬಲಿಯಾಗಿವೆ. ಕೆಎಸ್ಡಿಎಂಎ ಪ್ರಕಾರ, ಕನಿಷ್ಠ 90 ಮನೆಗಳು ನಾಶವಾಗಿವೆ ಮತ್ತು 700 ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ತಜ್ಞರು ಹವಾಮಾನ ವೈಪರೀತ್ಯಗಳನ್ನು ವಿವಿಧ ಕಾರಣಗಳಿಂದ ಸಂಭವಿಸುತ್ತವೆ ಎಂದು ಹೇಳುತ್ತಾರೆ. ಸಮುದ್ರಗಳ ಉಷ್ಣತೆ, ಅಡೆತಡೆಯಿಲ್ಲದ ಅಭಿವೃದ್ಧಿ ಮತ್ತು ಮುಂಗಾರು ವಿಳಂಬ ಮುಂತಾದವು ಹವಮಾನ ವೈಪರಿತ್ಯಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಹವಾಮಾನ ಸಂಸ್ಥೆ ಹೇಳುವ ಪ್ರಕಾರ ನೈಋತ್ಯ ಮುಂಗಾರು ಸೋಮವಾರ ಇಡೀ ದೇಶದಲ್ಲಿ ಕಡಿಮೆಯಾಗುತ್ತಿದ್ದಂತೆ ಏಕಕಾಲದಲ್ಲಿ, ಈಶಾನ್ಯ ಮುಂಗಾರು ಮಳೆ (ಸ್ಥಳೀಯವಾಗಿ ಕರೆಯಲ್ಪಡುವ ತುಲಾವರ್ಷಂ) ಆಗ್ನೇಯ ಪೆನಿನ್ಸುಲಾರ್ ಭಾರತದ ಮೇಲೆ ಪ್ರಾರಂಭವಾಯಿತು. ಇದು ತಮಿಳುನಾಡಿಗೆ ಮಳೆ ತರುತ್ತದೆ. ಕೇರಳದಲ್ಲಿ ಅಕ್ಟೋಬರ್ 1 ರಿಂದ ಡಿಸೆಂಬರ್ 31 ರ ಅವಧಿಯಲ್ಲಿ ಸಾಮಾನ್ಯವಾಗಿ ಬೀಳುವ ಮಳೆಗಿಂತ ಈಗಾಗಲೇ ಹೆಚ್ಚಿನ ಮಳೆಯಾಗಿದೆ.
ಕೇರಳದ 21 ಅಣೆಕಟ್ಟುಗಳು ಓಪನ್
ಕಳೆದ ಕೆಲವು ದಿನಗಳಿಂದ ಹೆಚ್ಚಿನ ಮಳೆಯಾಗದಿದ್ದರೂ ಕೆಎಸ್ಇಬಿಯ ಐದು ಅಣೆಕಟ್ಟುಗಳು ಮತ್ತು ನೀರಾವರಿ ಇಲಾಖೆಯ 16 ಅಣೆಕಟ್ಟುಗಳು ಸೇರಿದಂತೆ ರಾಜ್ಯದ 21 ಅಣೆಕಟ್ಟುಗಳ ಷಟರ್ಗಳನ್ನು ತೆರೆಯಲಾಗಿದೆ. ಆದರೆ ಈ ಅಣೆಕಟ್ಟುಗಳಿಗೆ ನೀರಿನ ಒಳಹರಿವು ಕಡಿಮೆ ಇರುವ ಕಾರಣ ಪ್ರಸ್ತುತ ಕಡಿಮೆ ನೀರು ಮಾತ್ರ ಬಿಡಲಾಗುತ್ತಿದೆ. ಪೊನ್ಮುಡಿ, ಶೋಲಯಾರ್, ಕುಡಾಲ, ಕಲ್ಲರ್ಕುಟ್ಟಿ ಮತ್ತು ಲೋವರ್ ಪೆರಿಯಾರ್ನಲ್ಲಿ ಕೆಎಸ್ಇಬಿ ನಡೆಸುತ್ತಿರುವ ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಅಸ್ತಿತ್ವದಲ್ಲಿದೆ.\

ಈ ಎಲ್ಲಾ ಅಣೆಕಟ್ಟುಗಳು ಈಗ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯದ 91-100 ಪ್ರತಿಶತವನ್ನು ಹೊಂದಿವೆ. ಅಣೈರಂಗಲ್ನಲ್ಲಿ ಬ್ಲೂ ಅಲರ್ಟ್ ಜಾರಿಯಲ್ಲಿದ್ದರೆ, ಇಡುಕ್ಕಿ, ಮಟ್ಟುಪೆಟ್ಟಿ, ಪೆರಿಂಗಲ್ಕುತ್ತು ಮತ್ತು ಅನಾಥೋಡು (ಶಬರಿಗಿರಿ) ಯೋಜನೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ನೀರಾವರಿ ಇಲಾಖೆಯ ನಿಯಂತ್ರಣದಲ್ಲಿರುವ 16 ಅಣೆಕಟ್ಟುಗಳ ಪೈಕಿ 12 ಅಣೆಕಟ್ಟುಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಉಳಿದ ನಾಲ್ಕು - ಚುಲ್ಲಿಯಾರ್, ಮಲಂಪುಳ, ಮೀಂಕಾರ ಮತ್ತು ಮಂಗಳಂ ಅಣೆಕಟ್ಟುಗಳಿಗೆ ಆರೆಂಜ್ ಅಲರ್ಟ್ ಅಸ್ತಿತ್ವದಲ್ಲಿದೆ. ಇಡುಕ್ಕಿ ಅಣೆಕಟ್ಟಿನ ನೀರಿನ ಮಟ್ಟ ಸೋಮವಾರ ಸಮುದ್ರ ಮಟ್ಟಕ್ಕಿಂತ 2398.12 ಅಡಿಗಳಷ್ಟಿದೆ.












Click it and Unblock the Notifications