ಕರ್ನಾಟಕ, ತಮಿಳುನಾಡು ಗಡಿ ಮುಚ್ಚಲು ಮುಂದಾದ ಕೇರಳ
ತಿರುವನಂತಪುರಂ, ಏಪ್ರಿಲ್ 27 : ಕೊರೊನಾ ಹರಡವುದನ್ನು ತಡೆಯಲು ಕರ್ನಾಟಕ ಮತ್ತು ತಮಿಳುನಾಡು ಗಡಿಯನ್ನು ಮುಚ್ಚಲು ಕೇರಳ ಸರ್ಕಾರ ತೀರ್ಮಾನಿಸಿದೆ. ಅರಣ್ಯ ಮಾರ್ಗದ ಮೂಲಕ ಅಕ್ರಮವಾಗಿ ರಾಜ್ಯಕ್ಕೆ ಬಂದ 57 ಜನರನ್ನು ಬಂಧಿಸಲಾಗಿದೆ.
Recommended Video
ಕರ್ನಾಟಕ ಮತ್ತು ತಮಿಳುನಾಡಿನಿಂದ ಜನರು ಕೇರಳ ಪ್ರವೇಶ ಮಾಡುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ. ಗಡಿ ಭಾಗದ ರಸ್ತೆಗಳು ಮತ್ತು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಸ್ತೆಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ತಮಿಳುನಾಡು ಮತ್ತು ಕರ್ನಾಟಕದಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಪ್ರದೇಶಗಳಲ್ಲಿ ಕೊರೊನಾ ಪ್ರಕರಗಳು ಹೆಚ್ಚಿವೆ. ಆದ್ದರಿಂದ, ಅಲ್ಲಿಂದ ಆಗಮಿಸುವ ಜನರ ಮೂಲಕ ಕೇರಳದಲ್ಲಿ ಸೋಂಕು ಹರಡದಂತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.
ದೇಶದಲ್ಲಿಯೇ ಮೊದಲ ಕೊರೊನಾ ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು. ಆದರೆ, ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡ ಸರ್ಕಾರ ಸೋಂಕನ್ನು ನಿಯಂತ್ರಣಕ್ಕೆ ತಂದಿದೆ. ಕೇರಳದಲ್ಲಿ ಪ್ರಸ್ತುತ 469 ಪ್ರಕರಣಗಳಿವೆ. ಆದರೆ, ಹೊಸ ಪ್ರಕರಣಗಳು ವರದಿಯಾಗಿಲ್ಲ.

ಗಡಿಯಲ್ಲಿ ಎಚ್ಚರ ಏಕೆ?
ಕೇರಳ ಗಡಿಯ ತಮಿಳುನಾಡಿನ ಕೊಯಂಬತ್ತೂರು, ಕನ್ಯಾಕುಮಾರಿ ಸೇರಿದಂತೆ ವಿವಿಧ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ. ಕರ್ನಾಟಕದ ಮೈಸೂರು ಕೊರೊನಾ ಹಾಟ್ ಸ್ಫಾಟ್. ಆದ್ದರಿಂದ ಕೇರಳ ಸರ್ಕಾರ ಗಡಿಗಳನ್ನು ಬಂದ್ ಮಾಡಲು ಮುಂದಾಗಿದೆ.

ಅಕ್ರಮವಾಗಿ ಕೇರಳ ಪ್ರವೇಶ
ಅರಣ್ಯ ಪ್ರದೇಶದ ಮೂಲಕ ಆಗಮಿಸುವವರ ಮೇಲೆಯೂ ಕೇರಳ ಕಣ್ಣಿಟ್ಟಿದೆ. ಕಾಡಿನ ಹಾದಿಯ ಮೂಲಕ ಅಕ್ರಮವಾಗಿ ಕೇರಳ ಪ್ರವೇಶ ಮಾಡಿದ್ದ 57 ಜನರನ್ನು ಬಂಧಿಸಲಾಗಿದ್ದು, ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.

ಹೊಸ ಕೊರೊನಾ ಪ್ರಕರಣಗಳು
ಕಣ್ಣೂರು, ಇಡುಕ್ಕಿ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಹೊಸ ಕೊರೊನಾ ಪ್ರಕರಣಗಳು ದಾಖಲಾದ ಬಳಿಕ ಕೇರಳ ಗಡಿಯ ಮೇಲೆ ಕಣ್ಗಾವಲು ಇಟ್ಟಿದೆ. ಕಣ್ಣೂರು ಕಾಸರಗೋಡು ಮತ್ತು ವಯನಾಡು ನಡುವೆ ಗಡಿ ಹಂಚಿಕೊಳ್ಳುತ್ತದೆ. ಈ ಎರಡೂ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ.

ಮುಖ್ಯಮಂತ್ರಿಗಳ ಸೂಚನೆ
"ಗಡಿ ಪ್ರದೇಶದಲ್ಲಿ ಗಸ್ತು ಹೆಚ್ಚಿಸಬೇಕು, ಅರಣ್ಯ ಮಾರ್ಗದ ಮೇಲೂ ಹೆಚ್ಚಿನ ನಿಗಾವಹಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಲಾಗಿದೆ" ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.












Click it and Unblock the Notifications