ಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕೆ 'ಸ್ಮಾರ್ಟ್ ಲಾಕ್ಡೌನ್' ಅಗತ್ಯವಿದೆ; ಕೇಂದ್ರ
ನವದೆಹಲಿ, ಸೆಪ್ಟೆಂಬರ್ 1: ಕೇರಳದಲ್ಲಿ ಸುಮಾರು 85% ಕೊರೊನಾ ಸೋಂಕಿತರು ಹೋಂ ಕ್ವಾರಂಟೈನ್ನಲ್ಲಿದ್ದು, ರಾಜ್ಯ ಸರ್ಕಾರ ದಿನನಿತ್ಯದ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ವಿಧಿಸಬೇಕಾಗಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ಸ್ಮಾರ್ಟ್ ಕಾರ್ಯತಂತ್ರದ ಲಾಕ್ಡೌನ್ ಜಾರಿಗೊಳಿಸುವ ಯೋಜನೆಯನ್ನು ರಾಜ್ಯ ಅನುಸರಿಸುವ ಅಗತ್ಯವನ್ನು ಕೇಂದ್ರ ಸರ್ಕಾರ ಒತ್ತಿಹೇಳಿದೆ.
ಕೇರಳದಲ್ಲಿ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ನಿರಂತರ ಏರಿಕೆಯಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯ ಕೇರಳ ಆಗಿದೆ. ಕೊರೊನಾ ಪ್ರಕರಣಗಳ ಆತಂಕಕಾರಿ ಏರಿಕೆ ನಡುವೆ ರಾಜ್ಯ ಕೇಂದ್ರ ಸರ್ಕಾರದ ಸಲಹೆಯನ್ನು ಅನುಸರಿಸಿಲ್ಲ. ನೆರೆ ರಾಜ್ಯಗಳು ಕೂಡ ಇದರ ಪರಿಣಾಮ ಅನುಭವಿಸುತ್ತಿವೆ ಎಂದು ಕೇಂದ್ರ ಉಲ್ಲೇಖಿಸಿದೆ.

ಸೂಕ್ಷ್ಮ ಕಂಟೈನ್ಮೆಂಟ್ ವಲಯಗಳ ಪ್ರಾಮುಖ್ಯವನ್ನು ಎತ್ತಿ ತೋರಿಸಿರುವ ಕೇಂದ್ರ, ರಾಜ್ಯ ಕೇವಲ ಜಿಲ್ಲಾ ಮಟ್ಟದಲ್ಲಿ ನಿರ್ಬಂಧಗಳನ್ನು ಅನುಸರಿಸಬೇಕು. ಈ ಕುರಿತು ಗಮನ ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದೆ.
ಹೋಂ ಕ್ವಾರಂಟೈನ್ನಲ್ಲಿದ್ದು, ಚೇತರಿಸಿಕೊಳ್ಳುತ್ತಿರುವ ರೋಗಿಗಳು ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ವೈರಸ್ ಹರಡುವಿಕೆಯನ್ನು ತಡೆಯಲು ರಾಜ್ಯದ ವಿಫಲತೆಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದೆ. ಕಂಟೈನ್ಮೆಂಟ್ ವಲಯಗಳಲ್ಲಿ ಕಠಿಣ ಕ್ರಮಗಳು ಹಾಗೂ ಪ್ರಯಾಣಕ್ಕೆ ತಡೆಹಿಡಿಯುವುದು ರಾಜ್ಯ ತುರ್ತಾಗಿ ಗಮನ ಹರಿಸಬೇಕಾಗಿರುವ ಕೆಲವು ಅಂಶಗಳಾಗಿವೆ ಎಂದು ಹೇಳಿದೆ.
ಕೇರಳದಲ್ಲಿ ಕೊರೊನಾ ಸೋಂಕಿನ ಪ್ರಭಾವ ಮುಂದುವರೆದಿದ್ದು, ದಿನನಿತ್ಯ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ವಾರದ ಪಾಸಿಟಿವಿಟಿ ದರ ಕೂಡ 14-19% ನಷ್ಟಿದೆ. ಕೇರಳದಿಂದ ಬರುವವರಿಗೆ ನೆರೆ ರಾಜ್ಯಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ.
ಕಳೆದ ಒಂದು ತಿಂಗಳಿನಿಂದಲೂ ರಾಜ್ಯದಲ್ಲಿ ಪ್ರತಿನಿತ್ಯ ಹತ್ತು ಸಾವಿರಕ್ಕಿಂತಲೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಕೊರೊನಾ ಸೋಂಕು ಪತ್ತೆಯಾದಾಗಿನಿಂದಲೂ ಕೇರಳದಲ್ಲಿ ಈವರೆಗೂ ಸುಮಾರು 40 ಲಕ್ಷ ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ ಇಲ್ಲಿಯವರೆಗೂ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಎರಡನೇ ಅಲೆ ಭೀಕರತೆ ತಗ್ಗುತ್ತಿದ್ದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಕ್ರಮೇಣ ಇಳಿಕೆಯಾದರೂ ಕೇರಳದಲ್ಲಿ ಮಾತ್ರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕೊರೊನಾ ಮೂರನೇ ಅಲೆ ಸಾಧ್ಯತೆ ಕುರಿತ ಎಚ್ಚರಿಕೆ ನಡುವೆ ಕೇರಳದಲ್ಲಿ ಪ್ರಕರಣಗಳು ನಿಯಂತ್ರಣಕ್ಕೆ ಬರದೇ ಇರುವುದು ಭೀತಿಗೆ ಕಾರಣವಾಗಿದೆ.

ಪರೀಕ್ಷಾ ಕಾರ್ಯತಂತ್ರ ಬದಲಿಸಿದ ರಾಜ್ಯ
ಕೇರಳದಲ್ಲಿ ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗಾಗಿ ಕೊರೊನಾ ಪರೀಕ್ಷಾ ಕಾರ್ಯತಂತ್ರವನ್ನು ರಾಜ್ಯ ಸರ್ಕಾರ ಬದಲಾಯಿಸಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾಜಾರ್ಜ್ ತಿಳಿಸಿದ್ದಾರೆ. ರಾಜ್ಯದಲ್ಲಿ ಹೆಚ್ಚು ಜನರಿಗೆ ಕೊರೊನಾ ಪರೀಕ್ಷೆಗಳನ್ನು ನಡೆಸಲು ಸೂಚಿಸಲಾಗಿದೆ. ಸಮುದಾಯದಲ್ಲಿ ಕೊರೊನಾ ಹರಡುವಿಕೆಯ ನಿಖರ ಪ್ರಮಾಣ ಪತ್ತೆ ಹಚ್ಚಲು ಕೊರೊನಾ ಪರೀಕ್ಷೆಯನ್ನು ಚುರುಕುಗೊಳಿಸಲಾಗಿದೆ. ಸೆಂಟಿನಲ್ ಹಾಗೂ ರಾಂಡಮ್ ಪರೀಕ್ಷೆ ಆಧಾರದಲ್ಲಿ ಕೊರೊನಾ ಹರಡುವಿಕೆಯನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.
ಲಸಿಕೆಯ ಮೊದಲ ಡೋಸ್ ಅನ್ನು ಶೇ 80ಕ್ಕಿಂತ ಹೆಚ್ಚು ನೀಡಿರುವ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳು, ಅಂದರೆ ಗಂಟಲು ನೋವು, ಕೆಮ್ಮಿನಂಥ ಲಕ್ಷಣಗಳು ಕಂಡುಬಂದ ವ್ಯಕ್ತಿಗಳಿಗೆ ಆರ್ಟಿಪಿಸಿಆರ್ ಪರೀಕ್ಷೆಯನ್ನು ಶಿಫಾರಸು ಮಾಡಲಾಗಿದೆ ಎಂದರು.
ಕರ್ನಾಟಕದಲ್ಲಿ ಕೇರಳದಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ: ವಿದ್ಯಾರ್ಥಿಗಳ ಹೊರತಾಗಿ ಕೇರಳದಿಂದ ಆಗಮಿಸುವ ಪ್ರತಿಯೊಬ್ಬರಿಗೂ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ RT-PCR ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕದಲ್ಲಿ ಉದ್ಯೋಗ ಮಾಡುತ್ತಿರುವ ಕೇರಳ ಉದ್ಯೋಗಿಗಳಿಗೂ ಅಥವಾ ಇತ್ತೀಚಿಗೆ ಕೇರಳಕ್ಕೆ ಭೇಟಿ ನೀಡಿ ರಾಜ್ಯಕ್ಕೆ ವಾಪಸ್ಸಾದ ಪ್ರತಿಯೊಬ್ಬರಿಗೂ ಸಾಂಸ್ಥಿಕ ಕ್ವಾರಂಟೈನ್ ಕ್ರಮ ಕಡ್ಡಾಯವಾಗಿದೆ.












Click it and Unblock the Notifications