ಶಬರಿಮಲೆ ಭಕ್ತರ ಸಂಖ್ಯೆ ಹೆಚ್ಚಳಕ್ಕೆ ತೀರ್ಮಾನ
ತಿರುವನಂತಪುರಂ, ನವೆಂಬರ್ 27: ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ಮಂಡಲಂ-ಮಕರವಿಳಕ್ಕು ಅವಧಿಯಲ್ಲಿ ಬರುತ್ತಿರುವ ಭಕ್ತರ ಗರಿಷ್ಠ ಸಂಖ್ಯೆಯ ಮಿತಿಯನ್ನು ಹೆಚ್ಚಿಸಲು ಅನುಮತಿ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಭಕ್ತರ ಸಂಖ್ಯೆಯ ಹೆಚ್ಚಳಕ್ಕೆ ಅವಕಾಶ ನೀಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ.
ಕೇರಳ ಸರ್ಕಾರದೊಂದಿಗೆ ಸಮಾಲೋಚಿಸಿ ಶುಕ್ರವಾರದ ಬಳಿಕ ಭಕ್ತರ ಸಂಖ್ಯೆಯನ್ನು ಎಷ್ಟು ಹೆಚ್ಚಿಸಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಭಕ್ತರ ಸಂಖ್ಯೆ ಹೆಚ್ಚಿಸಲು ಟ್ರಾವಂಕೋರ್ ದೇವಸ್ವಂ ಮಂಡಳಿ ಸರ್ಕಾರಕ್ಕೆ ಮನವಿ ಮಾಡಿತ್ತು. ಎಷ್ಟರ ಮಟ್ಟಿಗೆ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎನ್ನುವುದು ದೃಢಪಟ್ಟಿಲ್ಲ.
ಆದರೆ ಈ ಪ್ರಸ್ತಾಪಕ್ಕೆ ಆರೋಗ್ಯ ಇಲಾಖೆ ಆಕ್ಷೇಪಿಸಿದೆ. ಸನ್ನಿಧಾನದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ನಾಲ್ವರು ಟಿಡಿಬಿ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ.

ದೇವಸ್ಥಾನವು ದಿನದ 14 ಗಂಟೆ ಪೂಜೆಗೆ ತೆರೆದಿರುವುದರಿಂದ ಇನ್ನಷ್ಟು ಭಕ್ತರ ದರ್ಶನಕ್ಕೆ ಅವಕಾಶ ನೀಡಬೇಕು. ಸೂಕ್ತ ನಿಯಮಗಳನ್ನು ಪಾಲಿಸಿ ಭಕ್ತರ ಸಂಖ್ಯೆ ಹೆಚ್ಚಿಸಲು ಸಾಧ್ಯವಿದೆ ಎಂದು ಮಂಡಳಿ ಅಧ್ಯಕ್ಷ ಎನ್ ವಾಸು ಗುರುವಾರ ಸಭೆಯಲ್ಲಿ ಮನವಿ ಮಾಡಿದ್ದಾರೆ. ಈ ಅವಧಿಯಲ್ಲಿ 50,000 ದಿಂದ ಒಂದು ಲಕ್ಷದವರೆಗೆ ದಿನವೂ ಭಕ್ತರು ಬರುತ್ತಿದ್ದರು. ಪ್ರಸ್ತುತ ವಾರದ ದಿನಗಳಲ್ಲಿ ಕೇವಲ 1,000 ಮತ್ತು ವಾರಾಂತ್ಯಗಳಲ್ಲಿ 2,000 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.












Click it and Unblock the Notifications