ಶಬರಿಮಲೆ ಸನ್ನಿಧಿಗೆ ಮಹಿಳೆಯರಿಗೆ ಪ್ರವೇಶವಿಲ್ಲ: ಉಲ್ಟಾ ಹೊಡೆದ ಕೇರಳ ಸರ್ಕಾರ?
ತಿರುವನಂತಪುರಂ, ಡಿಸೆಂಬರ್ 3: ಶಬರಿಮಲೆಗೆ ವಯಸ್ಸಿನ ಅಂತರವಿಲ್ಲದೆ ಎಲ್ಲ ಲಿಂಗದ ಭಕ್ತರೂ ಭೇಟಿ ನೀಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ನಂತರ ಇಬ್ಬರು ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ತೆರಳಲು ಅವಕಾಶ ನೀಡಿದ್ದ ಕೇರಳ ಸರ್ಕಾರ ಮತ್ತು ಟ್ರ್ಯಾವಂಕೋರ್ ದೇವಸ್ವಂ ಮಂಡಳಿ (ಟಿಡಿಬಿ) ಪವಿತ್ರ ದೇವಸ್ಥಾನಕ್ಕೆ ಮಹಿಳೆಯ ಪ್ರವೇಶ ವಿಚಾರದಲ್ಲಿ ತನ್ನ ನಿಲುವು ಬದಲಿಸಿವೆ.
Recommended Video
ಪ್ರಸ್ತುತ ಕೊರೊನಾ ವೈರಸ್ ಸೋಂಕು ಹರಡುವ ಭೀತಿಯ ಕಾರಣದಿಂದ ಶಬರಿಮಲೆ ಯಾತ್ರೆಗೆ ಬರುವ ಯಾತ್ರಿಕರ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಮಕರುವಿಳಕ್ಕು ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಲು ಬಯಸುವ ಭಕ್ತರು ದೇವಸ್ಥಾನದ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಬೇಕು. ಬಳಿಕ ದೇವಸ್ವಂ ಮಂಡಳಿ ನಿಗದಿಪಡಿಸಿದ ದಿನದಂದು ಕೋವಿಡ್ ನೆಗೆಟಿವ್ ಪರೀಕ್ಷೆಯ ವರದಿಗಳೊಂದಿಗೆ ಅಲ್ಲಿಗೆ ತೆರಳಬೇಕು.
ಕೇರಳ ಪೊಲೀಸರ ಸಹಯೋಗದೊಂದಿಗೆ ಆನ್ಲೈನ್ನಲ್ಲಿ ಟಿಕೆಟ್ ಸರದಿ ಕಾಯ್ದಿರಿಸುವ ವ್ಯವಸ್ಥೆಯನ್ನು ನಡೆಸಲಾಗುತ್ತಿದೆ. ಆದರೆ ಈ ಪೋರ್ಟಲ್ನಲ್ಲಿ '50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಮತ್ತು 65 ವರ್ಷ ದಾಟಿದ ವ್ಯಕ್ತಿಗಳಿಗೆ ಶಬರಿಮಲೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲ' ಎಂದು ನಮೂದಿಸಲಾಗಿದೆ. ಮುಂದೆ ಓದಿ.

ಮಹಿಳೆಯರಿಗೆ ಅವಕಾಶ
ಕೋವಿಡ್ ನಿಬಂಧನೆಗಳ ಕಾರಣದಿಂದ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ದೇವಸ್ಥಾನಕ್ಕೆ ತೆರಳಲು ಅನುಮತಿ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಆದರೆ ಟಿಕೆಟ್ ಕಾಯ್ದಿರಿಸುವ ವೆಬ್ ಪೋರ್ಟಲ್ನಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಕೂಡ ಟಿಕೆಟ್ ಖರೀದಿಸಲು ಅವಕಾಶವಿಲ್ಲ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಟಿಡಿಬಿಗೆ ಸಂಬಂಧವಿಲ್ಲ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಡಿಬಿ ಮುಖ್ಯಸ್ಥ ಎನ್ ವಾಸು, 'ಪೋರ್ಟಲ್ ಅನ್ನು ಪೊಲೀಸ್ ಇಲಾಖೆಯೇ ನಿರ್ವಹಣೆ ಮಾಡುತ್ತಿದೆ. ಮಾರ್ಗಸೂಚಿಗಳ ವಿಚಾರದಲ್ಲಿ ಮಂಡಳಿಗೆ ಯಾವ ಸಂಬಂಧವೂ ಇಲ್ಲ. ಇದರ ಬಗ್ಗೆ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ' ಎಂದು ಹೇಳಿದ್ದಾರೆ.

ಸಂವಿಧಾನಕ್ಕೆ ವಿರುದ್ಧ
ಅನೇಕ ಕಾರ್ಯಕರ್ತರು ಎಡಪಕ್ಷದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 'ಸುಧಾರಣೆಯ ಮೌಲ್ಯಗಳನ್ನು ಮಣಿಸುವುದರಿಂದ ಬಲಪಂಥೀಯ ಶಕ್ತಿಗಳಿಗಿಂತಲೂ ತಾನು ಮುಂದು ಎಂದು ಎಡಪಕ್ಷದ ಸರ್ಕಾರ ಸಾಬೀತುಪಡಿಸಿದೆ. ಈ ತಾರತಮ್ಯದ ನಿರ್ಧಾರವು ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಎಡ ಸರ್ಕಾರದ ದ್ವಿಮುಖ ನೀತಿಯನ್ನು ಬಹಿರಂಗಪಡಿಸಿದೆ' ಎಂದು 2019ರ ಜನವರಿ 2ರಂದು ದೇವಸ್ಥಾನಕ್ಕೆ ಪ್ರವೇಶಿಸಿದ್ದ ಬಿಂದು ಅಮ್ಮಿನಿ ಹೇಳಿರುವುದಾಗಿ 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.

ಇದು ರಾಜಕೀಯ ಗಿಮಿಕ್ ಅಷ್ಟೇ
ಆದರೆ ಮಂಡಳಿಯ ಬದಲಾದ ನಿಲುವು ರಾಜಕೀಯ ಗಿಮಿಕ್ ಮಾತ್ರ ಎಂದು ಹಿಂದೂ ಐಕ್ಯ ವೇದಿ ಟೀಕಿಸಿದೆ. 'ಹಿಂದೂಗಳ ವಿರುದ್ಧ ಸಿಪಿಎಂನ ನಡೆಯಲ್ಲಿ ಮೂಲದಲ್ಲಿ ಯಾವ ಬದಲಾವಣೆಯೂ ಇಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹತ್ತಿರ ಬರುತ್ತಿವೆ. ಹೀಗಾಗಿ ಭಕ್ತರಲ್ಲಿ ಇನ್ನೂ ತೀವ್ರವಾಗಿರುವ ಆಕ್ರೋಶದ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಭಯ ಅವರಲ್ಲಿದೆ' ಎಂದು ಹಿಂದೂ ಐಕ್ಯ ವೇದಿ ಪ್ರಧಾನ ಕಾರ್ಯದರ್ಶಿ ಆರ್ಬವಿ ಬಾಬು ಹೇಳಿದ್ದಾರೆ.












Click it and Unblock the Notifications