ಕೇರಳದಲ್ಲಿ ಭಾರೀ ಮಳೆ: 5 ಜಿಲ್ಲೆಗಳಿಗೆ ರೆಡ್ ಅಲರ್ಟ್, 6 ಮಂದಿ ಬಲಿ
ಕೇರಳ ಅಕ್ಟೋಬರ್ 16: ಕೇರಳದಲ್ಲಿ ಧಾರಾಕಾರ ಮಳೆಗೆ ಭೂಕುಸಿತ ಉಂಟಾಗಿದ್ದು 6 ಮಂದಿ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ.
ಶನಿವಾರದಂದು ದಕ್ಷಿಣ ಮತ್ತು ಮಧ್ಯ ಕೇರಳದಲ್ಲಿ ಭಾರೀ ಮಳೆಯಿಂದಾಗಿ ಆರು ಜನರು ಸಾವನ್ನಪ್ಪಿರುವ ವರದಿಯಾಗಿದೆ. ಹಲವು ಪ್ರದೇಶಗಳಿಂದ ಜನ ಕಾಣೆಯಾಗಿರುವ ದೂರುಗಳು ಬಂದಿವೆ. ಕೊಟ್ಟಾಯಂ ಜಿಲ್ಲೆಯ ಇಡುಕ್ಕಿಯಲ್ಲಿರುವ ತೊಡುಪುಳ ಮತ್ತು ಕೊಕ್ಕಾಯಾರ್ ಮತ್ತು ಕೊಟ್ಟಾಯಂನಿಂದ ಸಾವುಗಳು ವರದಿಯಾಗಿವೆ. ಕೊಟ್ಟಾಯಂ, ಇಡುಕ್ಕಿ ಮತ್ತು ಪತ್ತನಂತಿಟ್ಟದ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರವಾಹದ ಜೊತೆಗೆ ಮೀನಾಚಲ್ ಮತ್ತು ಮಣಿಮಾಲಾ ನದಿಗಳು ತುಂಬಿ ಹರಿಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಣಾಮ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗುಹೆಯಲ್ಲಿರುವ ರಸ್ತೆಗಳಲ್ಲಿ ನೀರು ನಿಂತು ಬಸ್ಸುಗಳು ಮುಳುಗಡೆಯಾಗಿವೆ.

ಕೇರಳ ಸಿಎಂ ಎಚ್ಚರಿಕೆ ಸಂದೇಶ
ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತದ ಪರಿಣಾಮ ಕೆಲ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಬಗ್ಗೆ ಐಎಂಡಿ ಎಚ್ಚರಿಕೆ ನೀಡಿದೆ. ಜೊತೆಗೆ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಫೇಸ್ಬುಕ್ ಪೋಸ್ಟ್ನಲ್ಲಿ, ದಕ್ಷಿಣ ಮತ್ತು ಮಧ್ಯ ಜಿಲ್ಲೆಗಳಲ್ಲಿ ಮಳೆಯಾಗಿದೆ. ಸಂಜೆಯ ವೇಳೆಗೆ ಉತ್ತರ ಜಿಲ್ಲೆಗಳಲ್ಲಿ ಇದು ತೀವ್ರಗೊಳ್ಳಲಿದೆ. ಹೀಗಾಗಿ ಮುಂದಿನ 24 ಗಂಟೆಗಳಲ್ಲಿ ಜನರು ಜಾಗರೂಕರಾಗಿರಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು. ಜೊತೆಗೆ ಕೆಲವು ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದ್ದು ರಾಜ್ಯದ ಕೆಲವು ಅಣೆಕಟ್ಟುಗಳನ್ನು ತೆರೆಯುವ ನಿರೀಕ್ಷೆಯಿದೆ. ಜಲಾನಯನ ಪ್ರದೇಶಗಳಲ್ಲಿ ವಾಸಿಸುವವರು ಅಧಿಕಾರಿಗಳ ಸೂಚನೆಗಳನ್ನು ಅನುಸರಿಸಲು ಸಿದ್ಧರಾಗಿರಬೇಕು ಎಂದು ಅವರು ಹೇಳಿದರು.

ಐಎಂಡಿ ಭಾರೀ ಮಳೆಯ ಮನ್ಸೂಚನೆ
ಭಾರತ ಹವಾಮಾನ ಇಲಾಖೆ (ಐಎಂಡಿ) ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
"ಕೇರಳ ಕರಾವಳಿಯ ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರಭಾವದಿಂದ, ಕೇರಳದಲ್ಲಿ ಅಕ್ಟೋಬರ್ 17 ರ ಮುಂಜಾನೆಯವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಕ್ಟೋಬರ್ 19 ರ ಮುಂಜಾನೆಯಿಂದ ಮಳೆ ಕಡಿಮೆಯಾಗಲಿದೆ "ಎಂದು ಐಎಂಡಿ ಹೇಳಿಕೆಯಲ್ಲಿ ತಿಳಿಸಿದೆ.

ಇಡುಕ್ಕಿಯ ಕೊಕ್ಕಾಯಾರ್ನಲ್ಲಿ ಭೂಕುಸಿತ
ಕೊಲ್ಲಂ ಮತ್ತು ಕೊಟ್ಟಾಯಂ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಪ್ರವಾಹದಿಂದ ಹಲವಾರು ರಸ್ತೆಗಳು ಕೊಚ್ಚಿ ಹೋಗಿವೆ. ಜೊತೆಗೆ ರಾಜ್ಯದ 'ಅಕ್ಕಿ ಬಟ್ಟಲು' ಎಂದು ಪ್ರಸಿದ್ಧವಾಗಿರುವ ಕುಟ್ಟನಾಡ್ ಪ್ರದೇಶ ತೀವ್ರ ಜಲಾವೃತವಾಗಿದೆ ಎಂದು ವರದಿಯಾಗಿದೆ. ಹೀಗಾಗಿ ತಿರುವನಂತಪುರಂ ಜಿಲ್ಲಾಧಿಕಾರಿ ನವಜೋತ್ ಖೋಸಾ ಜನರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದನ್ನು, ನದಿಗಳು ಮತ್ತು ಇತರ ಜಲಮೂಲಗಳ ಬಳಿ ಹೋಗುವುದನ್ನು ತಪ್ಪಿಸುವಂತೆ ಜನರಿಗೆ ಸಲಹೆ ನೀಡಿದರು. ಅಲ್ಲಲ್ಲಿ ಭೂಕುಸಿದಿರುವ ವರದಿಗಳಾಗಿವೆ.

ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ
ಕೊಟ್ಟಾಯಂ ಮತ್ತು ಇಡುಕ್ಕಿಯ ಬೆಟ್ಟ ಜಿಲ್ಲೆಯಲ್ಲೂ ಎತ್ತರದ ವ್ಯಾಪ್ತಿಯಲ್ಲಿ ಮಧ್ಯಂತರ ಮಳೆ ಸುರಿದಿದೆ. ಭೂಕುಸಿಯುವ ಆತಂಕದಲ್ಲಿ ತ್ರಿಶೂರ್ ಜಿಲ್ಲಾಡಳಿತ ತಗ್ಗು ಪ್ರದೇಶಗಳು, ಇತರ ವಿಪತ್ತು-ಪೀಡಿತ ಪ್ರದೇಶಗಳಲ್ಲಿ ಮತ್ತು ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಹೇಳಿದೆ. ಜೊತೆಗೆ ಮೀನುಗಾರಿಕಾ ದೋಣಿಗಳು ಸಮುದ್ರಕ್ಕೆ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ.
ಕೇರಳ ಕಂದಾಯ ಸಚಿವ ಕೆ ರಾಜನ್ ಅವರು ನಿನ್ನೆ ಈ ಬಗ್ಗೆ ಜಿಲ್ಲಾಧಿಕಾರಿಗಳ ಆನ್ಲೈನ್ ಸಭೆಯನ್ನು ನಡೆಸಿ ಹಾನಿಯ ಅವಲೋಕನ ನಡೆಸಿದರು.












Click it and Unblock the Notifications