ಡೆಲ್ಟಾ ರೂಪಾಂತರ: ಕೋವಿಡ್ ಪ್ರಕರಣ ಕುಸಿತವಿದ್ದರೂ ಜನರು ಜಾಗರೂಕರಾಗಿರಲು ಕೇರಳ ಸಿಎಂ ಮನವಿ
ತಿರುವನಂತಪುರಂ, ಜೂ.19: ''ರಾಜ್ಯದಲ್ಲಿ ಕೊರೊನಾವೈರಸ್ ಪ್ರಕರಣಗಳು ಇಳಿಮುಖವಾಗಿವೆ,'' ಎಂದು ಹೇಳಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ''ಆದರೆ ರಾಜ್ಯವು ಈಗ ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರವನ್ನು ಎದುರಿಸುತ್ತಿರುವ ಕಾರಣ ಜನರು ಜಾಗರೂಕರಾಗಿರಬೇಕು,'' ಎಂದು ಮನವಿ ಮಾಡಿದ್ದಾರೆ.
"ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಶೇಕಡ 42 ರಷ್ಟು ಕಡಿಮೆಯಾಗಿದೆ. ನಾವು ಈಗ ವೈರಸ್ನ ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರವನ್ನು ಎದುರಿಸುತ್ತಿರುವ ಕಾರಣ ಜನರು ಎಚ್ಚರಿಕೆಯಿಂದ ಇರಬೇಕು," ಎಂದು ಹೇಳಿದ್ದಾರೆ.
ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳ ಅಡಿಯಲ್ಲಿ ಕೊರೊನಾ ಪಾಸಿಟಿವ್ ದರದ ಆಧಾರದ ಮೇಲೆ ಲಾಕ್ಡೌನ್ನಲ್ಲಿ ಸಡಿಲಿಕೆಯನ್ನು ಸಿಎಂ ವಿಜಯನ್ ಜೂನ್ 15 ರಂದು ಘೋಷಿಸಿದ್ದರು. ''ಶೇಕಡಾ 8 ಕ್ಕಿಂತ ಕಡಿಮೆ ಪಾಸಿಟಿವ್ ಪರೀಕ್ಷೆ ಹೊಂದಿರುವ ಸ್ಥಳೀಯ ಸಂಸ್ಥೆಗಳು ಸಾಮಾನ್ಯವಾಗಿ ನಿರ್ಬಂಧಗಳೊಂದಿಗೆ ಕಾರ್ಯನಿರ್ವಹಿಸಬಹುದು, ಅಂಗಡಿಗಳನ್ನು ತೆರೆಯಲು ಅವಕಾಶವಿದೆ,'' ಎಂದು ತಿಳಿಸಿದ್ದರು.

"ಸರ್ಕಾರಿ ಕಚೇರಿಗಳಲ್ಲ ಶೇಕಡ 25 ರಷ್ಟು ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಲು, ಸಾರ್ವಜನಿಕ ಸಾರಿಗೆ ಭಾಗಶಃ ಆರಂಭಕ್ಕೆ, ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಎಲ್ಲಾ ದಿನಗಳಲ್ಲಿ ತೆರೆಯಲು ಅನುಮತಿಸಲಾಗುವುದು. ಜೂನ್ 17 ರಿಂದ ಬಾರ್ಗಳನ್ನು ತೆರೆಯಲು ಅವಕಾಶವಿದೆ. ವಾರಾಂತ್ಯದಲ್ಲಿ ರಾಜ್ಯದಾದ್ಯಂತ ಸಂಪೂರ್ಣ ಲಾಕ್ಡೌನ್," ಎಂದಿದ್ದರು.
ಶುಕ್ರವಾರ, ಕೇರಳದಲ್ಲಿ 11,361 ಹೊಸ ಕೊರೊನಾ ವೈರಸ್ ಪ್ರಕರಣಗಳು ಮತ್ತು 90 ಸಾವುಗಳು ದಾಖಲಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಪ್ರಮಾಣ 27,85,304 ಕ್ಕೆ ಮತ್ತು ಸಾವಿನ ಸಂಖ್ಯೆ 11,833 ಕ್ಕೆ ತಲುಪಿದೆ. ಒಟ್ಟು 12,147 ಜನರು ಈ ಸೋಂಕಿನಿಂದ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 26,65,354 ಕ್ಕೆ ಏರಿಕೆ. ಪ್ರಸ್ತುತ, 1,07,682 ಜನರು ಚಿಕಿತ್ಸೆಯಲ್ಲಿದ್ದಾರೆ. 4,69,522 ಜನರು ನಿಗಾದಲ್ಲಿದ್ದು, ಈ ಪೈಕಿ 27,905 ಜನರು ವಿವಿಧ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್ಗಳಲ್ಲಿದ್ದಾರೆ.
''ಕಳೆದ 24 ಗಂಟೆಗಳಲ್ಲಿ ಒಟ್ಟು 1,11,124 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಟೆಸ್ಟ್ ಪಾಸಿಟಿವಿಟಿ ದರ (ಟಿಪಿಆರ್) ಶೇ 10.22 ರಷ್ಟಿದೆ,'' ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ತಿಳಿಸಿದ್ದಾರೆ.
"ಇಂದು ಸೋಂಕಿಗೆ ಒಳಗಾದವರಲ್ಲಿ 64 ಜನರು ಹೊರಗಿನಿಂದ ರಾಜ್ಯಕ್ಕೆ ಬಂದವರಾಗಿದ್ದು 10,667 ಮಂದಿ ಇವರ ಸಂಪರ್ಕದಿಂದ ರೋಗಕ್ಕೆ ಒಳಗಾಗಿದ್ದಾರೆ. 567 ಮಂದಿಯ ಸೋಂಕಿನ ಮೂಲವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. 63 ಆರೋಗ್ಯ ಕಾರ್ಯಕರ್ತರು ಸಹ ಸೋಂಕಿತರಾಗಿದ್ದಾರೆ," ಎಂದು ಸಚಿವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications