ಕೊರಾನಾ ಕೇಸ್ ಉಲ್ಬಣ, ಕೇರಳ ತಲ್ಲಣ, ನೋಡಿ ಕೇಂದ್ರ ಕೊಟ್ಟ ಈ ಸೂಚನೆಯನ್ನಾ!
ತಿರುವನಂತಪುರಂ, ಏಪ್ರಿಲ್ 18: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದ್ದಂತೆ ಕೇಂದ್ರ ಸರ್ಕಾರವೂ ಅಲರ್ಟ್ ಆಗಿದೆ. ಪ್ರತಿನಿತ್ಯ ಕೋವಿಡ್-19 ಪ್ರಕರಣಗಳ ಕುರಿತು ಅಂಕಿ-ಅಂಶಗಳನ್ನು ನೀಡುವಂತೆ ಕೇರಳ ಸರ್ಕಾರಕ್ಕೆ ಸೂಚಿಸಿದೆ.
ದೇಶದಲ್ಲಿ ಈ ಹಿಂದಿನ ದಿನಕ್ಕೆ ಹೋಲಿಸಿದರೆ ಸೋಮವಾರ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.90ರಷ್ಟು ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೋವಿಡ್-19 ಪಾಸಿಟಿವಿಟಿ ದರವು ಶೇ.165ರಷ್ಟು ಹೆಚ್ಚಳವಾಗಿದೆ.
ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರ ಪ್ರಬೇಧಗಳನ್ನು ಪತ್ತೆ ಮಾಡುವುದಕ್ಕೆ ಹಾಗೂ ಅವುಗಳ ಹರಡುವಿಕೆಯನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೊಸ ಪ್ರಕರಣಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವುದು ಮುಖ್ಯವಾಗುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಯಾಕೆ ಬೇಕಾಗುತ್ತೆ ಕೊರೊನಾವೈರಸ್ ಕುರಿತು ನಿರಂತರ ಅಪ್ ಡೇಟ್?
ಭಾರತವು ಕೋವಿಡ್ ಸಾಂಕ್ರಾಮಿಕದ ಪಿಡುಗನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕೆ ಹಾಗೂ ನಿಯಂತ್ರಿಸುವುದಕ್ಕೆ ಮತ್ತು ನಿರ್ವಹಿಸುವುದಕ್ಕೆ ಸೋಂಕಿತ ಪ್ರಕರಣಗಳ ಏರಿಳಿತದ ಕುರಿತು ನಿರಂತರ ಮಾಹಿತಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಕೋವಿಡ್-19 ಸೋಂಕಿತರ ಟ್ರ್ಯಾಕಿಂಗ್ ಮತ್ತು ಮೇಲ್ವಿಚಾರಣೆ ಮಾತ್ರವಲ್ಲದೆ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯತಂತ್ರಗಳು ಮತ್ತು ಯೋಜನೆಗಳನ್ನು ಹಾಕಿಕೊಳ್ಳುವುದಕ್ಕೆ ಈ ಅಂಕಿ-ಅಂಶಗಳು ಸಹಾಯ ಮಾಡುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕೊರೊನಾವೈರಸ್ ಕುರಿತು ಮಾಹಿತಿ ನೀಡದಿರಲು ಕೇರಳ ನಿರ್ಧಾರ
ಕೇರಳ ಸರ್ಕಾರವು ಈ ಹಿಂದೆ ಏಪ್ರಿಲ್ 13ರಂದು ಕೋವಿಡ್-19 ಅಂಕಿ-ಸಂಖ್ಯೆಗಳ ಕುರಿತು ನಿಯಮಿತವಾಗಿ ಮಾಹಿತಿ ನೀಡುವುದನ್ನು ನಿಲ್ಲಿಸಲು ನಿರ್ಧರಿಸಿತ್ತು. ಕೇಂದ್ರ ಸರ್ಕಾರದ ಪ್ರಕಾರ, ಇದು ಪ್ರಕರಣಗಳು, ಸಾವು ಮತ್ತು ಪಾಸಿಟಿವಿಟಿ ಪ್ರಮಾಣದ ಮೇಲ್ವಿಚಾರಣೆ ಮೇಲೆ ಪ್ರಭಾವ ಬೀರಿದೆ.

ಕೋವಿಡ್-19 ರೂಪಾಂತರಗಳ ಬಗ್ಗೆ ಹೆಚ್ಚಾಗುವ ಆತಂಕ
"ಜಿಲ್ಲೆಗಳು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಅರ್ಥಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ಪ್ರತಿನಿತ್ಯ ಅಂಕಿ-ಅಂಶಗಳ ಮೇಲೆ ಶ್ರದ್ಧೆಯಿಂದ ನಿಗಾ ವಹಿಸಬೇಕಾಗುತ್ತದೆ. ಇದು ನಿರ್ಣಾಯಕ ಪಾತ್ರ ವಹಿಸಲಿದ್ದು, ಯಾವುದೇ ವೈಪರಿತ್ಯ ಸಂಭವಿಸದಂತೆ ನೋಡಿಕೊಳ್ಳಲು ಸಹಾಯವಾಗಲಿದೆ. ಏಕೆಂದರೆ ಇದು ಹೆಚ್ಚು ಹರಡಬಹುದಾದ ಸಾಂಕ್ರಾಮಿಕ ರೋಗವಾಗಿದೆ. ವಿಶೇಷವಾಗಿ ಪ್ರಸ್ತುತದಲ್ಲಿ ಹೊಸ ರೂಪಾಂತರಗಳ ಮೂಲಕ ಹೆಚ್ಚು ಅಪಾಯಕಾರಿಯಾಗಿರುತ್ತದೆ, "ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಕೊರೊನಾವೈರಸ್ ಪ್ರಕರಣದಲ್ಲಿ ಶೇ.90ರಷ್ಟು ಏರಿಕೆ
ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ಹೊಸ ಪ್ರಕರಣಗಳ ಸಂಖ್ಯೆಯು ಶೇ.89.80ರಷ್ಟು ಏರಿಕೆಯಾಗಿದೆ. ಭಾರತದಲ್ಲಿ ಒಂದೇ ದಿನ 2183 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಶನಿವಾರದಂದು ದೇಶದಲ್ಲಿ 1150 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಕಳೆದ ಒಂದು ದಿನದಲ್ಲಿ ಕೋವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ. ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆ ಆಗುತ್ತಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 43,044,280ಕ್ಕೆ ಏರಿಕೆಯಾಗಿದ್ದು, ಈ ಪೈಕಿ 42,510,773 ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೂ 521,965 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು 11,542 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications