ನಟಿಗೆ ಲೈಂಗಿಕ ಕಿರುಕುಳ: ಸಿಬಿಐ ತನಿಖೆಗೆ ಆರೋಪಿ ದಿಲೀಪ್ ಆಗ್ರಹ
ತಿರುವನಂತಪುರಂ, ನವೆಂಬರ್ 3: ಬಹುಭಾಷಾ ನಟಿ ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಪ್ರಕರಣದಲ್ಲಿ ಆರೋಪಿಯೂ ಆಗಿರುವ ಮಲಯಾಳಂ ನಟ ದಿಲೀಪ್ ಒತ್ತಾಯಿಸಿದ್ದಾರೆ.
ಈ ಕುರಿತು ದಿಲೀಪ್ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಎರಡು ವಾರಗಳ ಹಿಂದೆಯೇ 12 ಪುಟಗಳ ಈ ಪತ್ರವನ್ನು ಗೃಹ ಕಾರ್ಯದರ್ಶಿಯವರಿಗೆ ಕಳುಹಿಸಲಾಗಿದೆ.

ನಾನು ಮುಗ್ಧನಾಗಿದ್ದು, ಪೊಲೀಸ್ ಅಧಿಕಾರಿಗಳು ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಎಡಿಜಿಪಿ ಸಂಧ್ಯಾ, ಡಿಜಿಪಿ ಲೋಕನಾಥ್ ಬೆಹೆರಾ ಮತ್ತು ಎರ್ನಾಕುಲಂ ಗ್ರಾಮೀಣ ಎಸ್ಪಿ ಜಾರ್ಜ್ ತಮ್ಮನ್ನು ಬೇಕೆಂದೇ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಪ್ರಕರಣ ಪ್ರಮುಖ ಆರೋಪಿ ಪಲ್ಸರ್ ಸುನಿ ತನಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಎಂಬುದನ್ನು ಡಿಜಿಪಿ ಗಮನಕ್ಕೆ ತಂದಿದ್ದೆ ಎಂಬುದಾಗ ದಿಲೀಪ್ ಹೇಳಿದ್ದಾರೆ. ಮಾತ್ರವಲ್ಲ ತಮಗೆ ಕೇರಳ ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದಿರುವ ದಿಲೀಪ್ ನೇರವಾಗಿ ಸಿಬಿಐ ತನಿಖೆಗೆ ಕೋರಿದ್ದಾರೆ. ಅಲ್ಲದೆ ತನಿಖಾ ತಂಡದಿಂದ ಮೂವರು ಅಧಿಕಾರಿಗಳನ್ನು ಹಿಂಪಡೆಯಲು ಅವರು ಆಗ್ರಹಿಸಿದ್ದಾರೆ.
ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ದಿಲೀಪ್ ಗೆ ಕೇರಳ ಹೈಕೋರ್ಟ್ ಅಕ್ಟೋಬರ್ 3ರಂದು ಜಾಮೀನು ಮಂಜೂರು ಮಾಡಿತ್ತು.
ಫೆಬ್ರವರಿ 17ರಂದು ರಾತ್ರಿ ತ್ರಿಶೂರ್ ನಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದಾಗ ಬಹುಭಾಷಾ ನಟಿಯನ್ನು ಆಕೆಯ ಕಾರಿನಲ್ಲೇ ಅಪಹರಣ ನಡೆಸಿ, ಕಾರಿನಲ್ಲೇ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು.
ಈ ಪ್ರಕರಣದಲ್ಲಿ ಜುಲೈ 11ರಂದು ನಟ ದಿಲೀಪ್ ಬಂಧನವಾಗಿದ್ದರು. ನಂತರ ಎರ್ನಾಕುಲಂ ನ್ಯಾಯಾಲಯ ಸೇರಿದಂತೆ ಕೇರಳ ಹೈಕೋರ್ಟಿಗೆ ಸತತ 4 ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿ ದಿಲೀಪ್ ವಿಫಲವಾಗಿದ್ದರು. ನಂತರ ಅಕ್ಟೋಬರ್ 3ರಂದು ಜಾಮೀನು ಮಂಜೂರಾಗಿತ್ತು.
ಜಾಮೀನನ ಮೇಲೆ ಜೈಲಿನಿಂದ ಹೊರಗಿರುವ ನಟ ದಿಲೀಪ್ ಇದೀಗ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಯ ಮೂಲಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications