ಕಾಶ್ಮೀರದಲ್ಲಿ ಹೈಅಲರ್ಟ್: ಉರಿ ಜಲವಿದ್ಯುತ್ ಸ್ಥಾವರದ ಮೇಲೆ ಉಗ್ರರ ಕಣ್ಣು!
ಶ್ರೀನಗರ, ಅಕ್ಟೋಬರ್ 19: ಜಮ್ಮು ಕಾಶ್ಮೀರದಲ್ಲಿ ಇತ್ತೀಚಿಗೆ ನಡೆಯುತ್ತಿರುವ ನಾಗರಿಕರ ಮೇಲಿನ ಸರಣಿ ದಾಳಿಗಳು ಆತಂಕಕಾರಿ ವಾತಾವರಣವನ್ನು ಸೃಷ್ಟಿಸಿದೆ. ಈಗ ಸರ್ಕಾರದ ಮೂಲಸೌಕರ್ಯಗಳ ಮೇಲೆ ಭಯೋತ್ಪಾದಕ ದಾಳಿಯ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, 'ಹರ್ಕತ್ 313' ಎಂಬ ಹೊಸ ಭಯೋತ್ಪಾದಕರ ಗುಂಪು ಉರಿಯಲ್ಲಿ ಜಲವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಕ್ಕೆ ಸಂಚು ರೂಪಿಸುತ್ತಿದೆ. ಅನಂತನಾಗ್ನಲ್ಲಿರುವ ತುರ್ತು ಲ್ಯಾಂಡಿಂಗ್ ಸ್ಟ್ರಿಪ್ ಕೂಡ ಭಯೋತ್ಪಾದಕರ ದಾಳಿಯ ಪಟ್ಟಿಯಲ್ಲಿದೆ," ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಕಾಶ್ಮೀರದ ಮೂಲಸೌಕರ್ಯಗಳ ಮೇಲೆ ಉಗ್ರರ ದಾಳಿ ಬಗ್ಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿರುವ ಉರಿ-1 ಮತ್ತು ಉರಿ-2 ಜಲವಿದ್ಯುತ್ ಯೋಜನೆಗಳ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಧಾರ್ಮಿಕ ಮುಖಂಡರ ಮೇಲೆ ಹಿಜ್ಬುಲ್ ಸಂಘಟನೆ ಕಣ್ಣು:
ಜಮ್ಮು ಕಾಶ್ಮೀರದಲ್ಲಿ ಧಾರ್ಮಿಕ ಮುಖಂಡರ ಮೇಲೆ ದಾಳಿ ನಡೆಸುವುದಕ್ಕೆ ಹಿಜ್ಬುಲ್ ಸಂಘಟನೆ ಉಗ್ರರು ಯೋಜನೆ ಹಾಕಿಕೊಂಡಿದ್ದಾರೆ ಎಂದು ವರದಿಗಳು ಬಂದಿವೆ. ಇದಲ್ಲದೇ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಕಾಶ್ಮೀರದಲ್ಲಿ ಸರ್ಪಂಚುಗಳು ಮತ್ತು ಸ್ಥಳೀಯೇತರ ಜನರನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳನ್ನು ನಡೆಸಲಾಗುತ್ತಿದೆ. ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದಾಳಿಗೆ ಸ್ಥಳೀಯರನ್ನೇ ಹೆಚ್ಚಾಗಿ ಬಳಸಿಕೊಳ್ಳುವುದುಕ್ಕೆ ಐಎಸ್ಐ ಯೋಜನೆ ಹಾಕಿಕೊಂಡಿದೆ. ಆ ಮೂಲಕ ದಾಳಿಗಳು ಸ್ವಾಭಾವಿಕದಂತೆ ಬಿಂಬಿಸುವ ಹುನ್ನಾರ ನಡೆಸಲಾಗುತ್ತಿದೆ.
ಕಳೆದ 18 ದಿನಗಳಲ್ಲಿ 11 ನಾಗರಿಕರ ಹತ್ಯೆ:
ಕಣಿವೆ ರಾಜ್ಯವನ್ನು ತೊರೆಯುವಂತೆ ವಲಸೆ ಕಾರ್ಮಿಕರಿಗೆ ಭಯೋತ್ಪಾದಕ ಸಂಘಟನೆಗಳು ಭಯ ಹುಟ್ಟಿಸುತ್ತಿವೆ. ಈ ನಿಟ್ಟಿನಲ್ಲೇ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಮೇಲಿಂದ ಮೇಲೆ ದಾಳಿ ನಡೆಸಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಮೂರು ಕಡೆ ಉಗ್ರರು ವಲಸೆ ಕಾರ್ಮಿಕರ ಮೇಲೆ ದಾಳಿ ಮಾಡಿದ್ದಾರೆ. ಶನಿವಾರ ಬಿಹಾರ ಮೂಲಕ ಗೋಲ್ ಗಪ್ಪಾ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಮೂಲದ ವಲಸೆ ಕಾರ್ಮಿಕರನ್ನು ಉಗ್ರರು ಕೊಂದು ಹಾಕಿದ್ದಾರೆ. ಭಾನುವಾರ ಬಿಹಾರ ಮೂಲದ ರಾಜಾ ರಿಷಿದೇವ್ ಮತ್ತು ಯೋಗೇಂದ್ರ ರಿಷಿದೇವ್ ಎಂಬ ಇಬ್ಬರು ಕಾರ್ಮಿಕರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ನಲ್ಲಿ ಹೊಡೆದುರುಳಿಸಲಾಗಿದೆ.
ಬಿಹಾರ ಕಾರ್ಮಿಕರ ಹತ್ಯೆಯ ಹೊಣೆ ಹೊತ್ತ ಲಷ್ಕರ್:
ಜಮ್ಮು ಕಾಶ್ಮೀರದಲ್ಲಿ ಕಳೆದ ಅಕ್ಟೋಬರ್ 17ರ ಭಾನುವಾರ ಬಿಹಾರ ಮೂಲದ ರಾಜಾ ರಿಷಿದೇವ್ ಮತ್ತು ಯೋಗೇಂದ್ರ ರಿಷಿದೇವ್ ಎಂಬ ಇಬ್ಬರು ಕಾರ್ಮಿಕರ ಮೇಲೆ ನಡೆಸಿದ ದಾಳಿ ಹೊಣೆಯನ್ನು ಲಷ್ಕರ್-ಇ-ತೊಯ್ಬಾಗೆ ಸಂಬಂಧಿಸಿದ ಯುನೈಟೆಡ್ ಲಿಬರೇಷನ್ ಫ್ರೆಂಟ್ ಹೊತ್ತುಕೊಂಡಿವೆ.
ಜಮ್ಮು ಕಾಶ್ಮೀರ ನಾಗರಿಕರ ಹತ್ಯೆ ಹಿಂದೆ ಐಎಸ್ಐ:
ಜಮ್ಮು ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿಸುವುದರ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆ(ಐಎಸ್ಐ) ಕೈವಾಡದ ಶಂಕೆ ವ್ಯಕ್ತವಾಗಿದೆ. ಸೆಪ್ಟೆಂಬರ್ 13ರಂದು ಉಗ್ರರು, ಸೇನೆ ಹಾಗೂ ಭಯೋತ್ಪಾದಕರೊಂದಿಗೆ ಸಭೆ ನಡೆಸಿದ ಐಎಸ್ಐ ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಬಗ್ಗೆ ಚರ್ಚೆ ನಡೆಸಿದೆ. ರಾಜ್ಯದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಐಎಸ್ಐ ಸಂಚು ರೂಪಿಸಿದೆ. ಭಾರತೀಯ ಸರ್ಕಾರದ ಅಧಿಕಾರಿಗಳು ಮತ್ತು ಮಾಧ್ಯಮ ಸಿಬ್ಬಂದಿ ಹಾಗೂ ಭಾರತೀಯ ಏಜೆನ್ಸಿಗಳು, ಭದ್ರತಾ ಪಡೆಗಳು ಮತ್ತು ಮಾಹಿತಿದಾರರ ಮೇಲೆ ಯಾವುದೇ ರೀತಿ ದಾಳಿ ನಡೆಸುವುದಿಲ್ಲ. ಅದರ ಬದಲಿಗೆ ಕಾಶ್ಮೀರದ ವಲಸೆ ಕಾರ್ಮಿಕರು, ಪಂಡಿತರು ಹಾಗೂ ಕಾಶ್ಮೀರಕ್ಕೆ ಪಂಡಿತರನ್ನು ವಾಪಸ್ ಕರೆ ತರುವಲ್ಲಿ ಶ್ರಮಿಸುತ್ತಿರುವವರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲಾಗುತ್ತಿದೆ.











Click it and Unblock the Notifications