ಕಾಶ್ಮೀರದಲ್ಲಿ ಪರಿಸ್ಥಿತಿ ನಿಭಾಯಿಸಲು ಬಿಜೆಪಿ ವಿಫಲ: ಅರವಿಂದ ಕೇಜ್ರಿವಾಲ್
ನವದೆಹಲಿ ಜೂನ್ 5: ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಬಿಜೆಪಿಗೆ ಸಾಧ್ಯವಿಲ್ಲ. ಆ ಪಕ್ಷಕ್ಕೆ ಕೇವಲ ಕೊಳಕು ರಾಜಕೀಯ ಮಾಡಲು ಬರುತ್ತದೆ. ದಯವಿಟ್ಟು ಕಾಶ್ಮೀರದ ವಿಷಯದಲ್ಲಿ ರಾಜಕೀಯ ಮಾಡದಿರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.
ಆಮ್ ಆದ್ಮಿ ಪಕ್ಷ(ಆಪ್)ವು ದೆಹಲಿಯ ಜಂತರ್ ಮಂತರ್ನಲ್ಲಿ ಆಯೋಜಿಸಿರುವ ಜನ ಆಕ್ರೋಶ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
"ಉದ್ದೇಶಿತ ಹತ್ಯೆಗಳ ಮೂಲಕ ಕಾಶ್ಮೀರಿ ಪಂಡಿತರು ಜಮ್ಮು ಮತ್ತು ಕಾಶ್ಮೀರ ತೊರೆಯುವಂತೆ ಮಾಡಲಾಗುತ್ತಿದೆ. ಇಂಥ ಘಟನೆಗಳನ್ನು ತಡೆಯಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಸೂಕ್ತ ಆಕ್ಷನ್ ಪ್ಲ್ಯಾನ್ ಸಿದ್ಧಪಡಿಸಿ, ಅದರಂತೆ ಕ್ರಮ ಜರುಗಿಸಬೇಕು,'' ಎಂದು ಒತ್ತಾಯಿಸಿದರು.
"ಹತ್ಯೆಗಳ ವಿರುದ್ಧ ಪ್ರತಿಭಟಿಸಲು ಸಹ ಬಿಜೆಪಿ ಸರಕಾರ ಕಾಶ್ಮೀರಿ ಪಂಡಿತರಿಗೆ ಅವಕಾಶ ನೀಡುತ್ತಿಲ್ಲ. ಅವರನ್ನು ನಿರ್ಬಂಧಿಸಲಾಗಿದೆ. ಅವರ ಹಕ್ಕುಗಳನ್ನು ಕಸಿಯಲಾಗಿದೆ,'' ಎಂದು ಅರವಿಂದ ಕೇಜ್ರಿವಾಲ್ ಆರೋಪಿಸಿದರು.
"ಕಾಶ್ಮೀರದಲ್ಲಿ ನೆಲೆಸಿರುವ ನಾಗರಿಕರಿಗೆ ಭದ್ರತೆ ಕಲ್ಪಿಸುವ ವಿಷಯದಲ್ಲಿ ಬಿಜೆಪಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. 1990ರಲ್ಲಿ ಕಾಶ್ಮೀರದಲ್ಲಿದ್ದ ಪರಿಸ್ಥಿತಿ ಮರುಕಳಿಸುತ್ತಿದೆ. ಕಾಶ್ಮೀರಿ ಪಂಡಿತರು ತಮ್ಮ ನಿವಾಸಗಳನ್ನು ತೊರೆಯುವಂತೆ ಮಾಡಲಾಗುತ್ತಿದೆ,'' ಎಂದು ದೂರಿದರು.

ಪಾಕಿಸ್ತಾನ ಕುತಂತ್ರ ನಿಲ್ಲಿಸಲಿ
ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, " ಪಾಕಿಸ್ತಾನವು ತನ್ನ ಕುತಂತ್ರಗಳನ್ನು ನಿಲ್ಲಿಸಿಬೇಕು. ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಭಾಗವಾಗಿಯೇ ಉಳಿಯಲಿದೆ,'' ಎಂದು ಹೇಳಿದರು.
ಸಮಾವೇಶದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ, ಪರಿಸರ ಖಾತೆ ಸಚಿವ ಗೋಪಾಲ್ ರೈ, ಸಂಸದ ಸಂಜಯ್ ಸಿಂಗ್ ಸೇರಿದಂತೆ ಆಪ್ ಮುಖಂಡರು ಉಪಸ್ಥಿತರಿದ್ದರು.

ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಹತ್ಯೆ
ಇತ್ತೀಚಿಗೆ ಉಗ್ರರು ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಸರಣಿ ಹತ್ಯೆಗಳನ್ನು ಮಾಡುತ್ತಿದ್ದಾರೆ. ಇದರಿಂದ ಕಣಿವೆ ರಾಜ್ಯದಲ್ಲಿ ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರ ಮತ್ತೊಂದು ಸುತ್ತಿನ ವಲಸೆಗೆ ಕಾರಣವಾಗಿದೆ. ಇನ್ನೊಂದೆಡೆ ಪ್ರಧಾನಿಯವರ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅನೇಕ ಸರಕಾರಿ ನೌಕರರು ಕಾಶ್ಮೀರ ತೊರೆಯುತ್ತಿದ್ದಾರೆ.

ಉಗ್ರರಿಂದ ಬ್ಯಾಂಕ್ ಮ್ಯಾನೇಜರ್ ಹತ್ಯೆ
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದಲ್ಲಿ ಹಿಂದೂ ಮಹಿಳೆಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರಯ. ಇದಾದ ಎರಡು ದಿನಗಳ ನಂತರ ಕುಲ್ಗಾಮ್ ಜಿಲ್ಲೆಯಲ್ಲಿ ಜೂನ್ 2 ರಂದು ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.

ಉಗ್ರರಿಂದ ಶಾಲಾ ಶಿಕ್ಷಕಿ ಹತ್ಯೆ
ರಜನಿ ಬಾಲಾ ಎಂಬ ಶಾಲಾ ಶಿಕ್ಷಕಿಯನ್ನು ಕೊಲ್ಲಲಾಗಿತ್ತು. ಅವರು ತಮ್ಮ ಪತಿ ಮತ್ತು ಮಗಳೊಂದಿಗೆ ಜಮ್ಮು ವಿಭಾಗದ ಸಾಂಬಾದಲ್ಲಿ ವಾಸಿಸುತ್ತಿದ್ದರು. ಕಾಶ್ಮೀರದಲ್ಲಿ ಇತ್ತೀಚಿಗೆ ನಡೆದ ಉದ್ದೇಶಿತ ಹತ್ಯೆಗಳ ಸರಣಿ ಮುಂದುವರಿದಿದೆ . ಕಳೆದ ವಾರ, ಬುದ್ಗಾಮ್ನ ಚದೂರ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಟಿವಿ ನಿರೂಪಕಿ ಅಮ್ರೀನ್ ಭಟ್ ಸಾವನ್ನಪ್ಪಿದ್ದರು. ಮೇ 12 ರಂದು ಬುದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರ ರಾಹುಲ್ ಭಟ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.

177 ಕಾಶ್ಮೀರಿ ಪಂಡಿತ್ ಶಿಕ್ಷಕರ ವರ್ಗಾವಣೆ
ಇನ್ನೊಂದೆಡೆ ಜಮ್ಮು ಮತ್ತು ಕಾಶ್ಮೀರದ ಶಿಕ್ಷಣ ಇಲಾಖೆಯು, ಪ್ರಧಾನಿಗಳ ವಿಶೇಷ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ನೇಮಕಗೊಂಡಿರುವ 177 ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ನಗರಗಳ ಹೆಚ್ಚು ಸುರಕ್ಷಿತ ಪ್ರದೇಶಗಳಿಗೆ ವರ್ಗಾವಣೆ ಮಾಡಿದೆ. ಈ ಪೈಕಿ ಹೆಚ್ಚಿನವರನ್ನು ಸೇನಾ ಕಂಟೋನ್ಮೆಂಟ್ ನ ಸುತ್ತಮುತ್ತಲಿನ ಬಾದಾಮಿಬಾಗ್, ಬಟ್ವಾರಾ ಮತ್ತು ಅಥ್ವಾಜನ್ ಹಾಗೂ ಹೆಚ್ಚಿನ ಭದ್ರತೆ ಇರುವ ಜವಾಹರ್ ನಗರ, ರಾಜ್ ಬಾಗ್ ಮತ್ತು ಬರ್ಜುಲ್ಲಾದಂತಕ ಪ್ರದೇಶಗಳಿಗೆ ವರ್ಗಾಯಿಸಲಾಗಿದೆ. ಇದೇ ವೇಳೆ ಬೋಧಕೇತರ ಕಾಶ್ಮೀರಿ ಪಂಡಿತ್ ಸಿಬ್ಬಂದಿಯನ್ನು ಸಹ ಸುರಕ್ಷಿತ ಸ್ಥಳಗಳಿಗೆ ನಿಯೋಜಿಸಲಾಗಿದೆ.












Click it and Unblock the Notifications