ಕೊಡಗಿನಲ್ಲಿ ನಡೆಯುವ ಹಾಕಿ ಪಂದ್ಯಾವಳಿಯ ವಿಶೇಷತೆ ಏನು?: ಇಲ್ಲಿದೆ ಸಂಪೂರ್ಣ ವಿವರ
ಕೊಡಗಿನಲ್ಲಿ ಕೊಡವ ಕುಟುಂಬಗಳ ನಡುವೆ ನಡೆಯುವ ಹಾಕಿ ಪಂದ್ಯಾವಳಿ ಕೇವಲ ಪಂದ್ಯಾವಳಿಯಾಗಿ ಉಳಿಯದೆ ಅದೊಂದು ಹಬ್ಬವಾಗಿ ಮಾರ್ಪಟ್ಟಿದೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಮಡಿಕೇರಿ, ಮಾರ್ಚ್, 19: ಕೊಡಗಿನಲ್ಲಿ ಕೊಡವ ಕುಟುಂಬಗಳ ನಡುವೆ ನಡೆಯುವ ಹಾಕಿ ಪಂದ್ಯಾವಳಿ ಕೇವಲ ಪಂದ್ಯಾವಳಿಯಾಗಿ ಉಳಿಯದೆ ಅದೊಂದು ಹಬ್ಬವಾಗಿ ಕಂಗೊಳಿಸುತ್ತಿದ್ದು, ಜಿಲ್ಲೆಯಾದ್ಯಂತ ಸಡಗರ, ಸಂಭ್ರಮ, ಕ್ರೀಡಾ ಉತ್ಸಾಹ ಮನೆಮಾಡಿದೆ.
ಪ್ರಕೃತಿ ವಿಕೋಪ, ಮಹಾಮಾರಿ ಕೊರೊನಾ ಕಾರಣಗಳಿಂದಾಗ ನಾಲ್ಕು ವರ್ಷಗಳ ಕಾಲ ಹಾಕಿ ಪಂದ್ಯಾವಳಿ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳು ಪಾಲ್ಗೊಳ್ಳುತ್ತಿದ್ದು, ಕ್ರೀಡಾಪ್ರೇಮಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.
ಈ ಬಾರಿಯ 23ನೇ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿಯ ಸಾರಥ್ಯವನ್ನು ಅಪ್ಪಚೆಟ್ಟೋಳಂಡ ಕುಟುಂಬ ವಹಿಸಿಕೊಂಡಿದ್ದು, 23 ದಿನಗಳ ಕಾಲ 336 ತಂಡಗಳು ಟ್ರೋಪಿಗಾಗಿ ಸೆಣಸಾಟ ನಡೆಸಲಿವೆ. ಕಳೆದ ಇಪ್ಪತ್ತೆರಡು ವರ್ಷಗಳ ಕೊಡಗಿನ ವಿವಿಧ ಊರುಗಳಲ್ಲಿ ನಡೆಯುತ್ತಾ ಬಂದಿರುವ ಪಂದ್ಯಾವಳಿ ಈ ಬಾರಿ ನಾಪೋಕ್ಲುನಲ್ಲಿ ನಡೆಯುತ್ತಿದೆ.
ಇನ್ನು ಕೊಡಗಿನ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿ ಬಗ್ಗೆ ಹೇಳಬೇಕೆಂದರೆ ಇದು 'ಲಿಮ್ಕಾ ಬುಕ್ ಆಫ್ ರೆಕಾರ್ಡ್'ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಜೊತೆಗೆ ಕೇವಲ ಸೋಲು-ಗೆಲುವಿನ ಲೆಕ್ಕಚಾರದ ಪಂದ್ಯವಾಗಿರದೆ, ಕೊಡವ ಸಮುದಾಯದ ಒಗ್ಗಟ್ಟು, ಪ್ರೀತಿ-ವಿಶ್ವಾಸವನ್ನು ಬಲಪಡಿಸುವ, ಯುವ ಸಮೂಹದಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಉತ್ತಮ ವೇದಿಕೆಯಾಗಿದೆ.
ಜೊಗೆಗೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕ್ರೀಡಾ ಕಲಿಗಳ ಮೂಲಕ ಯುವ ಪ್ರತಿಭೆಗಳಿಗೆ ತರಬೇತಿ ನೀಡುವ, ಆಟದ ನಿಯಮ, ಶಿಸ್ತು, ಚಾಕಚಕ್ಯತೆಗಳನ್ನು ಪರಿಚಯಿಸುವ, ವಿವಾಹ ಸಂಬಂಧ ಬೆಳೆಸುವ, ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಮುಂದುವರೆಸುವ ಹಬ್ಬವಾಗಿದೆ ಎಂದರೆ ತಪ್ಪಾಗಲಾರದು.

ಕ್ರೀಡೆಯಲ್ಲಿ ವಿವಿಧ ಇಲಾಖೆಯವರು ಭಾಗಿ
ಈ ಹಾಕಿ ಪಂದ್ಯಾವಳಿಯಲ್ಲಿ ಭಾರತದ ಹಾಕಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಆಟಗಾರರಲ್ಲದೆ, ಇತರೆ ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯ ಮೆರೆದ, ಸೇನೆ, ಪೊಲೀಸ್, ಇನ್ನಿತರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು, ಕಾಫಿ ಬೆಳೆಗಾರರು, ವಿದ್ಯಾರ್ಥಿಗಳು, ಯುವಕರು, ಯುವತಿಯರು ಒಟ್ಟಾಗಿ ಕುಟುಂಬದ ತಂಡವನ್ನು ಸಿದ್ಧಪಡಿಸಿಕೊಂಡು ಆಡುವುದು ವಿಶೇಷವಾಗಿದೆ.

ಪಂದ್ಯವನ್ನು ಪರಿಚಯಿಸಲು ಕಾರಣ ಏನು?
ಕೊಡಗಿನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾವಳಿಯ ಇತಿಹಾಸವನ್ನು ಗಮನಿಸಿದರೆ ಇದರ ಹಿಂದೆ ರೋಚಕ ಕಥೆಯಿದೆ. ಈ ಪಂದ್ಯಾವಳಿಯನ್ನು ಹುಟ್ಟುಹಾಕಿದ್ದು ಕೊಡವ ಹಾಕಿ ಆಕಾಡೆಮಿಯ ಸ್ಥಾಪಕ ಅಧ್ಯಕ್ಷ ಪಾಂಡಂಡ ಕುಟ್ಟಪ್ಪ ಆಗಿದ್ದಾರೆ. ಅವರು ಈಗ ಇಲ್ಲ. ಆದರೆ ಅವರು ಆರಂಭಿಸಿದ ಹಾಕಿ ಪಂದ್ಯಾವಳಿ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಲೇ ಇದೆ.

ಯಾವ ರೀತಿ ಆಯೋಜನೆ ಮಾಡಲಾಗುತ್ತದೆ?
ಹಾಕಿ ಆಟದ ಬಗ್ಗೆ ಅಪಾರ ಒಲವು ಹೊಂದಿದ್ದ ಕುಟ್ಟಪ್ಪ ಅವರು, ಕೊಡವ ಕುಟುಂಬಗಳ ಆಟಗಾರರಿಗಾಗಿ ಹಾಕಿ ಉತ್ಸವ ನಡೆಸುವ ಬಗ್ಗೆ ಕುಟುಂಬಗಳ ಹಿರಿಯರ, ಉತ್ಸಾಹಿ ಆಟಗಾರರೊಂದಿಗೆ ಚರ್ಚೆ ನಡೆಸಿ ಪ್ರತಿವರ್ಷ ಒಂದೊಂದು ಕುಟುಂಬ ಉತ್ಸವದ ಸಾರಥ್ಯ ವಹಿಸುವಂತೆಯೂ, ಯಾವ ಕುಟುಂಬಗಳು ಪಂದ್ಯಾವಳಿಯ ಸಾರಥ್ಯ ವಹಿಸುತ್ತವೆಯೋ ಆ ಕುಟುಂಬದ ಹೆಸರಿನ ಕಪ್ ಅನ್ನು ವಿಜೇತ ತಂಡಕ್ಕೆ ನೀಡಲು ತೀರ್ಮಾನ ಮಾಡಿದರು.

ಕ್ರೀಡೆಯನ್ನ ಹಬ್ಬದಂತೆ ಸಂಭ್ರಮಿಸುವ ಕೊಡವರು
ಅದರಂತೆ 1997ರಲ್ಲಿ ವೀರಾಜಪೇಟೆಯ ಪುಟ್ಟ ಗ್ರಾಮ ಪಾಂಡಂಡ ಕುಟ್ಟಪ್ಪರವರ ಹುಟ್ಟೂರಾದ ಕರಡದ ಮೈದಾನದಲ್ಲಿಯೇ 'ಹಾಕಿ ಪಂದ್ಯಾವಳಿ'ಯನ್ನು ಆರಂಭಿಸಲಾಯಿತು. ಕೊಡವರೆಲ್ಲರೂ ಇದನ್ನು ಪಂದ್ಯಾವಳಿಯಾಗಿ ನೋಡದೆ ನಮ್ಮ ಹಬ್ಬ ಎಂಬಂತೆ ನೋಡಿದರು. ಹೀಗಾಗಿ ಅದು ಹಾಕಿ ಹಬ್ಬ ಆಯಿತು. ಮೊದಲ ಬಾರಿ ಪಂದ್ಯಾವಳಿ ಆರಂಭವಾದಾಗ ಪಾಂಡಂಡ ಕುಟುಂಬವೇ ಸಾರಥ್ಯ ವಹಿಸಿಕೊಂಡಿತು. ಆರಂಭದ ವರ್ಷ ಸುಮಾರು 60 ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಆಗ ಕಲಿಯಂಡ ಕುಟುಂಬದ ತಂಡ ಕಪ್ ಗೆದ್ದುಇತಿಹಾಸ ನಿರ್ಮಿಸಿತ್ತು.
1998ರಲ್ಲಿ ಕಡಂಗದಲ್ಲಿ ನಡೆದ ಕೋಡಿರಕಪ್ನಲ್ಲಿ 116 ತಂಡಗಳು ಪಾಲ್ಗೊಂಡು ಕುಲ್ಲೇಟಿರ ತಂಡ ವಿಜಯಿಯಾದರೆ, 1999ರಲ್ಲಿ ಕಾಕೋಟುಪರಂಬುನಲ್ಲಿ ನಡೆದ ಬಲ್ಲಚಂಡ ಕಪ್ನಲ್ಲಿ 140 ತಂಡಗಳು ಪಾಲ್ಗೊಂಡಿದ್ದು, ಈ ವೇಳೆ ಕೂತಂಡ ಹಾಗೂ ಕುಲ್ಲೇಟಿರ ತಂಡಗಳು ಟ್ರೋಪಿಯನ್ನು ತಮ್ಮ ಮುಡಿಗೇರಿಸಿಕೊಂಡವು.

ಯಾವ ವರ್ಷ ಯಾವ ತಂಡ ವಿಜಯ?- ಮಾಹಿತಿ
ಇನ್ನು 2000ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಚೆಪ್ಪುಡಿರ ಕಪ್ನಲ್ಲಿ 170 ತಂಡಗಳು ಭಾಗವಹಿಸಿದ್ದು, ಇಲ್ಲಿ ಕೂತಂಡ ತಂಡ ಗೆಲುವು ಸಾಧಿಸಿತ್ತು. 2001ರಲ್ಲಿ ಅಮ್ಮತ್ತಿಯಲ್ಲಿ ನಡೆದ ನೆಲ್ಲಮಕ್ಕಡ ಕಪ್ನಲ್ಲಿ 220 ತಂಡಗಳು ಭಾಗವಹಿಸಿದ್ದು, ಇಲ್ಲಿ ಕೂತಂಡ ತಂಡ ವಿಜಯಿಯಾಗಿತ್ತು. 2002ರಲ್ಲಿ ಹುದಿಕೇರಿಯಲ್ಲಿ ನಡೆದ ಚಕ್ಕೇರ ಕಪ್ನಲ್ಲಿ 252 ತಂಡಗಳು ಪಾಲ್ಗೊಂಡಿದ್ದು, ಕುಲ್ಲೇಟಿರ ತಂಡ ಜಯ ಸಾಧಿಸಿತ್ತು. 2003ರಲ್ಲಿ ನಾಪೋಕ್ಲುನಲ್ಲಿ ನಡೆದ ಕಲಿಯಂಡ ಕಪ್ನಲ್ಲಿ 280 ತಂಡಗಳು ಭಾಗವಹಿಸಿದ್ದು, ನೆಲ್ಲಮಕ್ಕಡ ತಂಡ ಗೆಲುವು ಸಾಧಿಸಿತ್ತು.
2004ರಲ್ಲಿ ಮಾದಾಪುರದಲ್ಲಿ ನಡೆದ ಮಾಳೆಯಂಡ ಕಪ್ನಲ್ಲಿ 235 ತಂಡ ಪಾಲ್ಗೊಂಡು ಕೂತಂಡ ತಂಡ ಗೆಲುವು ಪಡೆದಿತ್ತು. 2005ರಲ್ಲಿ ಮಡಿಕೇರಿಯಲ್ಲಿ ನಡೆದ ಬಿದ್ದಂಡ ಕಪ್ನಲ್ಲಿ 222ತಂಡಗಳು ಭಾಗವಹಿಸಿ ನೆಲ್ಲಮಕ್ಕಡ ತಂಡ ವಿಜಯಿಯಾಗಿತ್ತು. 2006ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಕಳ್ಳಿಚಂಡ ಕಪ್ನಲ್ಲಿ 217 ತಂಡಗಳು ಭಾಗವಹಿಸಿ ಪಳಂಗಂಡ ತಂಡ ಜಯ ಸಾಧಿಸಿತ್ತು. 2007ರಲ್ಲಿ ಕಾಕೋಟುಪರಂಬುನಲ್ಲಿ ನಡೆದ ಮಂಡೇಟಿರ ಕಪ್ನಲ್ಲಿ 186 ತಂಡ ಪಾಲ್ಗೊಂಡು ಮಂಡೇಪಂಡ ತಂಡ ಗೆಲುವು ಪಡೆದಿತ್ತು.
2008ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಅಳಮೇಂಗಡ ಕಪ್ನಲ್ಲಿ 216 ತಂಡಗಳು ಪಾಲ್ಗೊಂಡು ಅಂಜಪರವಂಡ ಗೆಲುವು ಪಡೆದಿತ್ತು. 2009ರಲ್ಲಿ ಅಮ್ಮತ್ತಿಯಲ್ಲಿ ನಡೆದ ಮಂಡೇಪಂಡ ಕಪ್ನಲ್ಲಿ 231 ತಂಡಗಳು ಭಾಗವಹಿಸಿ ನೆಲ್ಲಮಕ್ಕಡ ತಂಡ ಒಡೆತನ ಸಾಧಿಸಿತ್ತು. 2010ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಮನೆಯಪಂಡ ಕಪ್ನಲ್ಲಿ ಸುಮಾರು 214 ತಂಡಗಳು ಭಾಗವಹಿಸಿದ್ದವಲ್ಲದೆ ಅಂತಿಮವಾಗಿ ಪಳಂಗಂಡ ತಂಡ ಕಪ್ ಅನ್ನು ತನ್ನದಾಗಿಸಿಕೊಂಡಿತ್ತು.

ಸತತವಾಗಿ 3 ಬಾರಿ ಗೆದ್ದ ತಂಡದ ವಿವರ
2011ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಮಚ್ಚಾಮಾಡ ಕಪ್ ಪಂದ್ಯಾವಳಿಯಲ್ಲಿ 228 ತಂಡಗಳು ಭಾಗವಹಿಸಿದ್ದ ಆಟದಲ್ಲಿ ಪಳಂಗಂಡ ತಂಡ ಕಪ್ ಅನ್ನು ತನ್ನದಾಗಿಸಿಕೊಂಡಿತ್ತು. 2012ರಲ್ಲಿ ಅಮ್ಮತ್ತಿಯಲ್ಲಿ ನಡೆದ ಐಚೆಟ್ಟಿರ ಕಪ್ ಪಂದ್ಯಾವಳಿಯಲ್ಲಿ 217 ತಂಡಗಳು ಭಾಗವಹಿಸಿದ್ದವಾದರೂ ಪಳಂಗಂಡ ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್ ಜಯ ಸಾಧಿಸಿತ್ತು.
2013ರಲ್ಲಿ ವೀರಾಜಪೇಟೆಯ ಬಾಳುಗೋಡುವಿನಲ್ಲಿ ಮಾದಂಡ ಕಪ್ ನಡೆದು 225 ತಂಡಗಳು ಭಾಗವಹಿಸಿ ಅಂಜಪರವಂಡ ತಂಡ ಚಾಂಪಿಯನ್ ಪಟ್ಟ ಪಡೆದುಕೊಂಡರೆ ಹ್ಯಾಟ್ರಿಕ್ ಸಾಧನೆ ಮಾಡಿದ ಪಳಂಗಂಡ ತಂಡ ರನ್ನರ್ಗೆ ತೃಪ್ತಿಪಟ್ಟುಕೊಂಡಿತ್ತು. 2014ರಲ್ಲಿ ವೀರಾಜಪೇಟೆಯಲ್ಲಿ ತಾತಂಡ ಕಪ್ ನಡೆದಿದ್ದು, ಇದರಲ್ಲಿ 242 ತಂಡಗಳು ಭಾಗವಹಿಸಿದ್ದವು. ಇಲ್ಲಿ ಕಲಿಯಂಡ ಕುಟುಂಬದ ತಂಡ ಚಾಂಪಿಯನ್ ಪಟ್ಟ ಕಟ್ಟಿಕೊಂಡರೆ ಪಳಂಗಂಡ ರನ್ನರ್ ಅಪ್ಗೆ ತೃಪ್ತಿಪಟ್ಟಿತ್ತು.
2015ರಲ್ಲಿ ವೀರಾಜಪೇಟೆಯಲ್ಲಿ ನಡೆದ ಕುಪ್ಪಂಡ ಕಪ್ ಪಂದ್ಯದಲ್ಲಿ 225 ತಂಡಗಳು ಭಾಗವಹಿಸಿದ್ದು, ಇದರಲ್ಲಿ ಪಳಂಗಡ ಗೆಲುವು ಪಡೆದರೆ, ಚೇಂದಂಡ ತಂಡ ರನ್ನರ್ ಅಪ್ ಆಗಿತ್ತು. 2016ರಲ್ಲಿ ಶಾಂತೆಯಂಡ ಕಪ್ ಮಡಿಕೇರಿಯಲ್ಲಿ ನಡೆದಿದ್ದು, ಈ ವೇಳೆ 299 ತಂಡಗಳು ಭಾಗವಹಿಸಿ ಪಳಂಗಂಡ ವಿರುದ್ಧ ಕಲಿಯಂಡ ಗೆಲುವು ಸಾಧಿಸಿತ್ತು.
ನಂತರ 2017ರಲ್ಲಿ ನಾಪೋಕ್ಲುನಲ್ಲಿ ನಡೆದ ಬಿದ್ದಾಟಂಡ ಕಪ್ನಲ್ಲಿ 306 ತಂಡಗಳು ಭಾಗವಹಿಸಿದ್ದು, ಪರದಂಡ ತಂಡದ ವಿರುದ್ಧ ಚೇಂದಂಡ ತಂಡ ಗೆಲುವಿನ ನಗೆ ಬೀರಿತ್ತು. 2018ರಲ್ಲಿ ನಾಪೋಕ್ಲುನಲ್ಲಿ ನಡೆದ ಕುಲ್ಲೇಟಿರ ಕಪ್ನಲ್ಲಿ 334 ತಂಡಗಳು ಭಾಗವಹಿಸಿದ್ದು, ಚೇಂದಂಡ ತಂಡವು ಅಂಜಪರವಂಡ ತಂಡದ ವಿರುದ್ದ ಜಯ ಸಾಧಿಸಿತ್ತು.

ಮಹಾಮಾರಿ ಕೊರೊನಾದಿಂದ ನಿಂತಿದ್ದ ಪಂದ್ಯ
ಸುಮಾರು 22 ವರ್ಷಗಳ ಕಾಲ ಸುಧೀರ್ಘವಾಗಿ ನಡೆದುಕೊಂಡು ಬಂದಿದ್ದ ಹಾಕಿ ಪಂದ್ಯಾವಳಿ ಇಷ್ಟರಲ್ಲೇ ಬೆಳ್ಳಿ ಹಬ್ಬವನ್ನು ಆಚರಿಸಬೇಕಾಗಿತ್ತು. ಆದರೆ ಕೊಡಗಿನಲ್ಲಿ ಯಾರೂ ನಿರೀಕ್ಷಿಸದ ಘಟನೆ ನಡೆದು ಹೋಗಿತ್ತು. 2018ರಲ್ಲಿ ಮಹಾಮಳೆಗೆ ಸಂಭವಿಸಿದ -ಪ್ರಕೃತಿ ವಿಕೋಪಕ್ಕೆ ಕೊಡಗು ನಲುಗುವಂತಾಯಿತು. ಹೀಗಾಗಿ 2019ರಲ್ಲಿ ಹಾಕಿ ಪಂದ್ಯಾವಳಿ ನಡೆಯಲಿಲ್ಲ. ನಂತರ 2020ರಲ್ಲಿ ಮಹಾಮಾರಿ ಕೊರೊನಾ ವಕ್ಕರಿಸಿತು. ಪರಿಣಾಮ 2021 ಮತ್ತು 2022ರಲ್ಲೂ ಪಂದ್ಯ ನಡೆಯಲಿಲ್ಲ.

23 ದಿನಗಳ ಕಾಲ ನಡೆಯುವ ಕ್ರೀಡೆ
ಈ ಬಾರಿ ಮತ್ತೆ ನಾಪೋಕ್ಲುನಲ್ಲಿ 23ನೇ ವರ್ಷದ ಅಪ್ಪಚೆಟ್ಟೋಳಂಡ ಕಪ್ ಹಾಕಿ ಮಾರ್ಚ್ 18ರಂದು ಆರಂಭವಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದ್ಧೂರಿ ಚಾಲನೆ ನೀಡಿದ್ದರು. ನಾಲ್ಕು ವರ್ಷಗಳ ಬಳಿಕ 336 ತಂಡಗಳು ಆಟವಾಡಲಿದ್ದು, ಪಂದ್ಯಾವಳಿ ಸುಮಾರು 23 ದಿನಗಳ ಕಾಲ ನಡೆಯಲಿದೆ.
ಹಾಕಿ ಪಂದ್ಯಾವಳಿ ನಡೆಯುವ ಅಷ್ಟು ದಿನಗಳಲ್ಲಿ ಆಟದೊಂದಿಗೆ ಕೊಡವ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ಹಾಡು, ಜನಪದ ನೃತ್ಯವನ್ನು ಪ್ರೋತ್ಸಾಹಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದು ಹಾಕಿ ಉತ್ಸವದ ಮತ್ತೊಂದು ವಿಶೇಷತೆಯಾಗಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications