Ind vs Aus: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ?
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಈ ಪಂದ್ಯ ಗೆದ್ದು 2023ರ ಏಕದಿನ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡು ಫೈನಲ್ ತಲುಪುವ ವಿಶ್ವಾಸದಲ್ಲಿದೆ ಭಾರತ ತಂಡ. ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ತೋಳಿಗೆ ಕಪ್ಪುಪಟ್ಟಿ ಧರಿಸಿ ಆಡುತ್ತಿರುವುದು ಗಮನ ಸೆಳೆದಿದೆ.
ದೇಶೀಯ ಕ್ರಿಕೆಟ್ನ ದಂತಕಥೆ ಎಂದೇ ಹೆಸರಾಗಿರುವ ಪದ್ಮಾಕರ್ ಶಿವಾಳ್ಕರ್ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ, ಅವರಿಗೆ 84 ವರ್ಷ ವಯಸ್ಸಾಗಿತ್ತು. ಪದ್ಮಾಕರ್ ಶಿವಾಳ್ಕರ್ ಸ್ಮರಣಾರ್ಥ ಮತ್ತು ಗೌರವ ಸಲ್ಲಿಸುವ ಸಲುವಾಗಿ ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ನಲ್ಲಿ ಭಾರತ ತಂಡದ ಆಟಗಾರರುತೋಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿದ್ದರು.

ಪದ್ಮಾಕರ್ ಶಿವಾಳ್ಕರ್ ದೇಶೀಯ ಕ್ರಿಕೆಟ್ನಲ್ಲಿ ಲೆಜೆಂಡರಿ ಸ್ಪಿನ್ನರ್ ಎಂದು ಹೆಸರು ಮಾಡಿದ್ದರೂ, ಬಿಷನ್ ಸಿಂಗ್ ಬೇಡಿ ಅವರಂತಹ ಆಟಗಾರರು ಟೀಂ ಇಂಡಿಯಾದಲ್ಲಿ ಆಡುತ್ತಿದ್ದರಿಂದ, ಅವರಿಗೆ ಭಾರತ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ಪರ ಆಡಿದ ಎಡಗೈ ಸ್ಪಿನ್ನರ್ ಶಿವಾಳ್ಕರ್ 124 ಪ್ರಥಮ ದರ್ಜೆ ಪಂದ್ಯಗಳಲ್ಲಿ 589 ವಿಕೆಟ್ ಪಡೆದಿದ್ದಾರೆ. ಶಿವಾಳ್ಕರ್ ಅವರಿಗೆ ಬಿಸಿಸಿಐ ಪ್ರತಿಷ್ಠಿತ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಎರಡು ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆಸ್ಟ್ರೇಲಿಯಾ ಆರಂಭದಲ್ಲೇ ಕೂಪರ್ ಕಾನೋಲಿ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಟ್ರಾವಿಸ್ ಹೆಡ್ ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಭಾರತಕ್ಕೆ ಆತಂಕ ಮೂಡಿಸಿದ್ದರು. ಟ್ರಾವಿಸ್ ಹೆಡ್ 33 ಎಸೆತಗಳಲ್ಲಿ 39 ರನ್ ಗಳಿಸಿದ್ದಾ ವರುಣ್ ಚಕ್ರವರ್ತಿ ಅವರನ್ನು ಔಟ್ ಮಾಡುವ ಮೂಲಕ ಭಾರತದ ದೊಡ್ಡ ಆತಂಕ ದೂರ ಮಾಡಿದ್ದಾರೆ. 15 ಓವರ್ ವೇಳೆಗೆ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿದೆ.
ನಾಯಕ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಶಾನೆ ಕ್ರೀಸ್ನಲ್ಲಿದ್ದು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದಾರೆ. ದೊಡ್ಡ ಮೊತ್ತ ಕಲೆಹಾಕುವ ಮೂಲಕ ಭಾರತದ ಮೇಲೆ ಒತ್ತಡ ಹೇರಲು ಆಸ್ಟ್ರೇಲಿಯಾ ಯೋಜಿಸುತ್ತಿದ್ದು, ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ಭಾರತದ ಬೌಲಿಂಗ್ ಪಡೆ ಶ್ರಮಿಸುತ್ತಿದೆ.












Click it and Unblock the Notifications