RCB: ರಣಜಿಯಲ್ಲಿ ಮಿಂಚುತ್ತಿರುವ ವೈಶಾಖ್: ಕನ್ನಡಿಗನ ಪ್ರದರ್ಶನ ಕಂಡು ಖುಷಿಯಾದ ಆರ್ಸಿಬಿ
ವೈಶಾಖ್ ವಿಜಯ್ ಕುಮಾರ್ ಆರ್ಸಿಬಿ ತಂಡದಲ್ಲಿರುವ ಕನ್ನಡಿಗ ಬೌಲರ್. 2023ರ ಆವೃತ್ತಿಯಲ್ಲಿ ಆಕಸ್ಮಿಕವಾಗಿ ಆರ್ ಸಿಬಿ ಪಾಳಯ ಸೇರಿಕೊಂಡ ಅವರು, ಭರವಸೆಯ ಪ್ರದರ್ಶನ ನೀಡಿದ್ದರು. ಕೆಲವು ಪಂದ್ಯಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟರು ವಿಕೆಟ್ ಪಡೆದು ಯಶಸ್ವಿಯಾಗಿದ್ದರು.
2024ರ ಮಿನಿ ಹರಾಜಿಗೆ ಮುನ್ನ ವೈಶಾಖ್ ವಿಜಯ್ ಕುಮಾರ್ ಅವರನ್ನು ಆರ್ಸಿಬಿ ತಂಡದಲ್ಲಿ ಉಳಿಸಿಕೊಂಡಿದೆ. 2024ರ ಐಪಿಎಲ್ನಲ್ಲಿ ಕೂಡ ವೈಶಾಖ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಐಪಿಎಲ್ ಆವೃತ್ತಿಯಲ್ಲಿ ಬೌಲರ್ ಮಾತ್ರವಾಗಿದ್ದ ವೈಶಾಖ್ ಈ ಬಾರಿ ಆಲ್ರೌಂಡರ್ ಆಗಿ ಮಿಂಚುವ ಸೂಚನೆ ನೀಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಕರ್ನಾಟಕ ತಂಡದ ಗೆಲುವಿನಲ್ಲಿ ವೈಶಾಖ್ ಮುಖ್ಯ ಪಾತ್ರ ವಹಿಸಿದ್ದಾರೆ.
ಬ್ಯಾಟಿಂಗ್ನಲ್ಲೂ ಮಿಂಚು
ಈ ಬಾರಿ ರಣಜಿ ಟ್ರೋಫಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ವೈಶಾಖ್ ವಿಜಯ್ ಕುಮಾರ್ 23 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರೆ. ಬ್ಯಾಟಿಂಗ್ನಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು, 161 ರನ್ಗಳ ಅಮೂಲ್ಯ ಕಾಣಿಕೆ ನೀಡಿದ್ದಾರೆ.
ತ್ರಿಪುರ ವಿರುದ್ಧದ ಪಂದ್ಯದಲ್ಲಿ ವೈಶಾಖ್ ಅವರ ಪ್ರದರ್ಶನ ಮರೆಯುವ ಹಾಗಿಲ್ಲ. ಅಗ್ರಕ್ರಮಾಂಕದ ಬ್ಯಾಟರ್ ಗಳೇ ಕಷ್ಟಪಡುವ ಪಿಚ್ನಲ್ಲಿ ವೈಶಾಖ್ ವಿಜಯ್ ಕುಮಾರ್ ಮೊದಲ ಇನ್ನಿಂಗ್ಸ್ನಲ್ಲಿ 50 ರನ್ ಗಳಿಸಿದ್ದರು. ಬಳಿಕ ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಪಡೆದಿದ್ದರು.
ಎರಡನೇ ಇನ್ನಿಂಗ್ಸ್ನಲ್ಲಿ ಕೂಡ ವೈಶಾಖ್ 22 ರನ್ ಗಳಿಸಿದರೆ, ಪ್ರಮುಖ 3 ವಿಕೆಟ್ ಪಡೆದುಕೊಂಡಿದ್ದರು. 72 ರನ್ ಮತ್ತು 5 ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದರು.
ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ 1 ವಿಕೆಟ್ ರೋಚಕ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ವೈಶಾಖ್ 5 ವಿಕೆಟ್ ಪಡೆದು, ಬಳಿಕ 38 ರನ್ಗಳ ಅತ್ಯಮೂಲ್ಯ ಕಾಣಿಕೆ ನೀಡುವ ಮೂಲಕ ಕರ್ನಾಟಕದ ಗೆಲುವಿಗೆ ಕೊಡುಗೆ ನೀಡಿದ್ದರು.
ಬೌಲಿಂಗ್ನಲ್ಲಿ ಗಮನಾರ್ಹ ಸುಧಾರಣೆ ಮಾಡಿಕೊಂಡಿರುವ ವೈಶಾಖ್ ವಿಜಯ್ ಕುಮಾರ್ ಬ್ಯಾಟಿಂಗ್ನಲ್ಲಿ ಕೂಡ ತಾನು ಮಿಂಚಬಲ್ಲೆ ಎನ್ನುವ ಸಂದೇಶವನ್ನು ನೀಡಿದ್ದಾರೆ. ಅವರ ಪ್ರದರ್ಶನ ನೋಡಿದ ಆರ್ ಸಿಬಿ ಮ್ಯಾನೇಜ್ಮೆಂಟ್ ಕೂಡ ಖುಷಿಯಾಗಿದೆ. ಸಿರಾಜ್ ಜೊತೆ ಈ ಬಾರಿ ಐಪಿಎಲ್ನಲ್ಲಿ ವೈಶಾಖ್ ಪ್ರಮುಖ ಅಸ್ತ್ರವಾಗುವ ಸಾಧ್ಯತೆ ಇದೆ. ಜೊತೆಗೆ ಬ್ಯಾಟಿಂಗ್ನಲ್ಲಿ ಕೂಡ ಸ್ಥಿರ ಪ್ರದರ್ಶನ ನೀಡಿದರೆ, ಆರ್ ಸಿಬಿ ತಂಡಕ್ಕೊಬ್ಬ ಉತ್ತಮ ಆಲ್ರೌಂಡರ್ ಸಿಕ್ಕಂತಾಗುತ್ತದೆ.












Click it and Unblock the Notifications