Ranji Trophy: ಮಿಂಚಿದ ವಾಸುಕಿ ಕೌಶಿಕ್, ಪಡಿಕ್ಕಲ್: ಪಂಜಾಬ್ ವಿರುದ್ಧ ಕರ್ನಾಟಕ ತಂಡದ ಮೇಲುಗೈ
ಹುಬ್ಬಳ್ಳಿಯ ಕೆಎಸ್ಸಿಎ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದ ಮೊದಲನೇ ದಿನ ಕರ್ನಾಟಕ ತಂಡವು ಪಂಜಾಬ್ ವಿರುದ್ಧ ಮೇಲುಗೈ ಸಾಧಿಸಿದೆ. ವಾಸುಕಿ ಕೌಶಿಕ್ ಮಾರಕ ಬೌಲಿಂಗ್ ಮೂಲಕ ಮಿಂಚಿದರೆ, ದೇವದತ್ ಪಡಿಕ್ಕಲ್ ಕೂಡ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು.
ಕರ್ನಾಟಕ ತನ್ನ 2023-24 ರ ರಣಜಿ ಟ್ರೋಫಿ ಅಭಿಯಾನವನ್ನು ಉತ್ತಮವಾಗಿ ಆರಂಭಿಸಿದೆ. ಪಂಜಾಬ್ ಮೊದಲ ಇನ್ನಿಂಗ್ಸ್ನಲ್ಲಿ 152 ರನ್ಗಳಿಗೆ ಆಲೌಟ್ ಆಯಿತು. ವೇಗದ ಬೌಲರ್ ಕೌಶಿಕ್ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿ 7 ವಿಕೆಟ್ ಪಡೆದರು.

ಟಾಸ್ ಗೆದ್ದ ಪಂಜಾಬ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಸ್ವಲ್ಪ ಅಚ್ಚರಿ ಎನಿಸಿತು. ಮಂಜು ಮುಸುಕಿದ ಮತ್ತು ತಂಗಾಳಿಯ ವಾತಾವರಣ ಬೌಲಿಂಗ್ಗೆ ಸಹಾಯ ಮಾಡಿತು. ಪರಿಸ್ಥಿತಿಯ ಲಾಭ ಪಡೆದ ಕರ್ನಾಟಕದ ವೇಗಿಗಳು ಮಿಂಚಿದರು.
ವಾಸುಕಿ ಕೌಶಿಕ್ ತಮ್ಮ ಎತ್ತರವನ್ನು ಬಳಸಿಕೊಂಡರು, ವೇಗದಿಂದ ಬೌಲಿಂಗ್ ಮಾಡದಿದ್ದರೂ, ಗಾಳಿಯಲ್ಲಿ ಮೂವ್ ಮಾಡುವ ಕಾರಣ ಬ್ಯಾಟರ್ ಗಳಿಗೆ ಮಾರಕವಾಗಿ ಪರಿಣಮಿಸಿದರು. 37 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ಪಂಜಾಬ್ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತು. ನೇಹಲ್ ವಧೇರಾ 44 ರನ್ ಗಳಿಸಿದರೆ, ಅಭಿಶೇಕ್ ಶರ್ಮಾ 26 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.
ಗೀತಾಂಶ್ ಖೇರಾ 27 ರನ್, ಮಯಾಂಕ್ ಮಾರ್ಕಂಡೆ 26 ರನ್ ಗಳಿಸಿದರು. ಉಳಿದ ಬ್ಯಾಟರ್ ಗಳು ಒಂದಂಕಿ ಮೊತ್ತಕ್ಕೆ ಔಟಾದರು. ಆದರೂ ಪಂಜಾಬ್ 150 ರನ್ಗಳ ಗೆರೆ ದಾಟುವಲ್ಲಿ ಯಶಸ್ವಿಯಾಯಿತು. 46.5 ಓವರ್ ಗಳಲ್ಲಿ 152 ರನ್ಗಳಿಗೆ ಸರ್ವಪತನ ಕಂಡಿತು.
ವಾಸುಕಿ ಕೌಶಿಕ್ ಮಿಂಚಿನ ದಾಳಿ
ವಾಸುಕಿ ಕೌಶಿಕ್ ಪಂಜಾಬ್ ತಂಡಕ್ಕೆ ಮಾರಕವಾದರು. 15 ಓವರ್ ಗಳಲ್ಲಿ 41 ರನ್ ನೀಡಿದ ಅವರು ಬರೋಬ್ಬರಿ 7 ವಿಕೆಟ್ ಪಡೆದು ಪಂಜಾಬ್ ತಂಡಕ್ಕೆ ಶಾಕ್ ಕೊಟ್ಟರು. ವಿಜಯ್ ಕುಮಾರ್ ವೈಶಾಕ್ 2 ವಿಕೆಟ್ ಪಡೆದರೆ, ರೋಹಿತ್ ಕುಮಾರ್ ಒಂದು ವಿಕೆಟ್ ಪಡೆದರು.
ಮಿಂಚಿದ ದೇವದತ್ ಪಡಿಕ್ಕಲ್
ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಮಯಾಂಕ್ ಅಗರ್ವಾಲ್ ಸೊನ್ನೆಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ರವಿಕುಮಾರ್ ಸಮರ್ಥ್ 38 ರನ್ ಗಳಿಸಿ ಔಟಾದರು. ನಿಕಿನ್ ಜೋಸ್ ಕೂಡ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ದೇವದತ್ ಪಡಿಕ್ಕಲ್ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದು 80 ಎಸೆತಗಳಲ್ಲಿ ಅಜೇಯ 80 ರನ್ ಗಳಿಸಿದ್ದು ಶತಕ ಗಳಿಸುವ ವಿಶ್ವಾಸದಲ್ಲಿದ್ದಾರೆ. ಮನಿಶ್ ಪಾಂಡೆ 22 ಎಸೆತಗಳಲ್ಲಿ ಅಜೇಯ 13 ರನ್ ಗಳಿಸಿದ್ದು ಎರಡನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ.












Click it and Unblock the Notifications