Ranji Trophy: ದೇವದತ್ ಪಡಿಕ್ಕಲ್ ಶತಕ: ತಮಿಳುನಾಡು ವಿರುದ್ಧ ಕರ್ನಾಟಕ ಮೇಲುಗೈ
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನ ಮೇಲುಗೈ ಸಾಧಿಸಿದೆ. ದೇವದತ್ ಪಡಿಕ್ಕಲ್ ಅಮೋಘ ಶತಕ ಸಿಡಿಸುವ ಮೂಲಕ ಕರ್ನಾಟಕ ತಂಡಕ್ಕೆ ನೆರವಾದರು.
ತ್ರಿಪುರ ವಿರುದ್ಧದ ಪಂದ್ಯದ ಬಳಿಕ ವಿಮಾನದಲ್ಲಿ ಪ್ರಯಾಣಿಸು ವೇಳೆ ನೀರು ಕುಡಿದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ನಾಯಕ ಮಯಾಂಕ್ ಅಗರ್ವಾಲ್ ರೈಲ್ವೇಸ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ತಮಿಳುನಾಡು ವಿರುದ್ಧದ ಮಯಾಂಕ್ ಅಗರ್ವಾಲ್ ಮತ್ತೆ ತಂಡಕ್ಕೆ ಮರಳಿದರು. ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ನಾಯಕ ಮಯಾಂಕ್ ಅಗರ್ವಾಲ್ ಮತ್ತು ರವಿಕುಮಾರ್ ಸಮರ್ಥ್ ಮೊದಲ ವಿಕೆಟ್ಗೆ 35 ರನ್ ಕಲೆಹಾಕಿದರು. 20 ರನ್ ಗಳಿಸಿದ ಮಯಾಂಕ್ ಅಗರ್ವಾಲ್ ಸಾಯಿ ಕಿಶೋರ್ ಅವರಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ಗೆ ಬಂದ ದೇವದತ್ ಪಡಿಕ್ಕಲ್ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದರು.
ದೇವದತ್ ಪಡಿಕ್ಕಲ್ ಅಮೋಘ ಶತಕ
ಎರಡನೇ ವಿಕೆಟ್ಗೆ ದೇವದತ್ ಪಡಿಕ್ಕಲ್ ಮತ್ತು ರವಿಕುಮಾರ್ ಸಮರ್ಥ್ ಜೋಡಿ 132 ರನ್ ಕಲೆಹಾಕಿದರು. ರವಿಕುಮಾರ್ ಸಮರ್ಥ್ 57 ರನ್ ಗಳಿಸಿ ಔಟಾದರು. ಬಳಿಕ ಬಂದ ನಿಕಿನ್ ಜೋಸ್ 13 ರನ್ ಗಳಿಸಿ ಔಟಾದರು. ಮನೀಶ್ ಪಾಂಡೆ 1 ರನ್, ಕಿಶನ್ ಬೆದರೆ 3 ರನ್ ಗಳಿಸಿದರು. ಒಂದು ಕಡೆ ಪಡಿಕ್ಕಲ್ ಉತ್ತಮವಾಗಿ ರನ್ ಗಳಿಸುತ್ತಿದ್ದರೆ ಮತ್ತೊಂದು ಕಡೆ ಅವರಿಗೆ ಉತ್ತಮ ಬೆಂಬಲ ಸಿಗಲಿಲ್ಲ.
ನಂತರ ಬಂದ ಹಾರ್ದಿಕ್ ರಾಜ್ ಪಡಿಕ್ಕಲ್ ಜೊತೆ 55 ರನ್ಗಳ ಜೊತೆಯಾಟದ ಮೂಲಕ ಕರ್ನಾಟಕ ತಂಡ ಮೊದಲ ದಿನ ಮೇಲುಗೈ ಸಾಧಿಸಲು ಕಾರಣವಾದರು. ಹಾರ್ದಿಕ್ ರಾಜ್ ಅಜೇಯ 35 ರನ್ ಗಳಿಸಿದ್ದು ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ದೇವದತ್ ಪಡಿಕ್ಕಲ್ ಅಮೋಘ ಶತಕ ಗಳಿಸುವ ಮೂಲಕ ರಾಜ್ಯಕ್ಕೆ ಆಸರೆಯಾದರು. 216 ಎಸೆತಗಳಲ್ಲಿ 12 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ ಅಜೇಯ 151 ರನ್ ಗಳಿಸಿರುವ ಅವರು, ಎರಡನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ಈ ಜೋಡಿ ಎರಡನೇ ದಿನ ಮತ್ತೊಂದು ದೊಡ್ಡ ಮೊತ್ತ ಕಲೆಹಾಕಿದರೆ ಕರ್ನಾಟಕ ಪಂದ್ಯದ ಮೇಲೆ ಮತ್ತಷ್ಟು ಹಿಡಿತ ಸಾಧಿಸಬಹುದು.
ಈ ಪಂದ್ಯದಲ್ಲಿ ತಂಡ ಗೆಲುವು ಸಾಧಿಸಿದರೆ ಸಿ ಗುಂಪಿನ ಅಂಕಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೇರಲಿದ್ದು ಮುಂದಿನ ಹಂತಕ್ಕೆ ತಲುಪಲು ಸಹಾಯವಾಗಲಿದೆ.












Click it and Unblock the Notifications