Siraj-Rohit Sharma: ಪರಿಣಾಮಕಾರಿ ಬೌಲರ್ ಅಲ್ಲ ಎಂದಿದ್ದ ರೋಹಿತ್ ಶರ್ಮಾ ವಿಕೆಟ್ ಪಡೆದ ಸಿರಾಜ್
ಮೊಹಮ್ಮದ್ ಸಿರಾಜ್ ಪರಿಣಾಮಕಾರಿ ಬೌಲರ್ ಅಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದರು. ಇದೇ ಕಾರಣಕ್ಕೆ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದೆ ಎಂದಿದ್ದರು. ಇದಕ್ಕೆ ಮೊಹಮ್ಮದ್ ಸಿರಾಜ್ ಅಂಕಿ ಅಂಶಗಳ ಸಮೇತ ಉತ್ತರ ಕೊಟ್ಟಿದ್ದರು. ನಾನು ಹೊಸ ಚೆಂಡು ಮಾತ್ರವಲ್ಲ ಹಳೆ ಚೆಂಡಿನಲ್ಲೂ ಪರಿಣಾಮಕಾರಿ ಬೌಲರ್ ಎಂದಿದ್ದರು.
ಆದರೂ ಮತ್ತೆ ಟೀಂ ಇಂಡಿಯಾಗೆ ವಾಪಸಾತಿ ಮಾಡಲು ಕೆಲಸ ಮಾಡುತ್ತೇನೆ ಎಂದಿದ್ದರು. ಅವರು ಪರಿಣಾಮಕಾರಿ ಎಂದು ತೋರಿಸಲು ಐಪಿಎಲ್ 2025 ಉತ್ತಮ ವೇದಿಕಯಾಗಿದೆ. ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಸಿರಾಜ್ , ಶನಿವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಚೆಂಡಿನಲ್ಲೇ ಉತ್ತರ ಕೊಟ್ಟರು.

ಶನಿವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ vs ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 4 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು. ಮೊಹಮ್ಮದ್ ಸಿರಾಜ್ಗೆ ಎರಡು ಎಸೆತಗಳಲ್ಲಿ 8 ರನ್ ಗಳಿಸಿದ ಅವರು ನಾಲ್ಕನೇ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು.
ಮುಂಬೈ ಇಂಡಿಯನ್ಸ್ನ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಹಿತ್ ಶರ್ಮಾ ಸೊನ್ನೆಗೆ ಔಟಾಗಿದ್ದರು. ಖಲೀಲ್ ಅಹ್ಮದ್ ಬೌಲಿಂಗ್ನಲ್ಲಿ ಬೌಲ್ಡ್ ಆಗಿದ್ದರು.
ಟೀಂ ಇಂಡಿಯಾದಲ್ಲಿ ಸಿಗದ ಅವಕಾಶ
ಮೊಹಮ್ಮದ್ ಸಿರಾಜ್ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡದ ಪ್ರಮುಖ ಬೌಲರ್ ಆಗಿದ್ದರು. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಕೆಟ್ಟ ಪ್ರದರ್ಶನದ ಬಳಿಕ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಡಲಾಗಿತ್ತು. ಅದಾದ ಬಳಿಕ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೂ ಸಿರಾಜ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಜಸ್ಪ್ರಿತ್ ಬುಮ್ರಾ ಅಲಭ್ಯರಾಗಿದ್ದರೂ ಸಿರಾಜ್ರನ್ನು ಕೈಬಿಟ್ಟಿದ್ದರ ಬಗ್ಗೆ ಸಾಕಷ್ಟು ಚರ್ಚೆ ಕೂಡ ನಡೆದಿತ್ತು.
ಐಪಿಎಲ್ ಮೆಗಾ ಹರಾಜಿಗೆ ಮುನ್ನ ಆರ್ ಸಿಬಿ ಸಿರಾಜ್ರನ್ನು ತಂಡದಿಂದ ಕೈಬಿಟ್ಟಿತ್ತು. ಆರ್ ಸಿಬಿ ತಂಡ ಮತ್ತು ವಿರಾಟ್ ಕೊಹ್ಲಿ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದ ಸಿರಾಜ್ ಮೆಗಾ ಹರಾಜಿನಲ್ಲಿ ಮತ್ತೆ ಆರ್ ಸಿಬಿ ಸೇರುವ ವಿಶ್ವಾಸದಲ್ಲಿದ್ದರು. ಆದರೆ ಮೆಗಾ ಹರಾಜಿನಲ್ಲಿ ಆರ್ ಸಿಬಿ ಸಿರಾಜ್ ಅವರಿಗೆ ಬಿಡ್ ಮಾಡಲೇ ಇಲ್ಲ. ಗುಜರಾತ್ ಟೈಟಾನ್ಸ್ 12.25 ಕೋಟಿ ರೂಪಾಯಿಗೆ ಅವರನ್ನು ಖರೀದಿ ಮಾಡಿತು.












Click it and Unblock the Notifications