K.L Rahul: 'ನನ್ನ ಮಣ್ಣಿದು': ವೃತ್ತ ಬರೆದ ಕೆ.ಎಲ್ ರಾಹುಲ್ ಘರ್ಜಿಸಿದ್ದು ಯಾರ ವಿರುದ್ಧ?
ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತವರಿನಲ್ಲೇ ಮತ್ತೆ ಸೋಲು ಕಂಡಿತು. ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿಗೆ ಇದು ಎರಡನೇ ಸೋಲಾಗಿದ್ದು, ಎರಡು ಕೂಡ ಹೋಮ್ ಪಿಚ್ ಅಂದರೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲೇ ಸೋಲು ಕಂಡಿದೆ. ನಿನ್ನೆ ಆರಂಭದಲ್ಲಿ ಅಬ್ಬರಿಸಿದ್ದ ಆರ್ಸಿಬಿ ತಂಡ, ಪಂದ್ಯ ಗೆಲ್ಲುವ ಮುನ್ಸೂಚನೆ ನೀಡಿತ್ತು. ಆದರೆ ಓವರ್ ಕಳೆಯುತ್ತಿದ್ದಂತೆ ಆಟದ ಪರಿ ಬದಲಿಸಿದ ಆರ್ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ಗೆ 164 ರನ್ಗಳ ಟಾರ್ಗೆಟ್ ನೀಡಿತು.
ಬ್ಯಾಟಿಂಗ್ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್, ಆರ್ಸಿಬಿ ಬೌಲರ್ಸ್ಗಳ ಅಬ್ಬರಕ್ಕೆ ಮೊದಲು ಎರಡು ವಿಕೆಟ್ಗಳನ್ನು ನೀಡಿತು. ಆದರೆ ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ಬೌಲರ್ಗಳನ್ನು ಕಾಡಿದ್ದು, ಆರ್ಸಿಬಿಗೆ ಸೋಲಿನ ದಾರಿ ತೋರಿಸಿದ್ದು ಮತ್ಯಾರು ಅಲ್ಲ ಕನ್ನಡಿಗ ಕೆ.ಎಲ್ ರಾಹುಲ್. ನಿನ್ನೆಯ ಪಂದ್ಯದ ಆರಂಭದಿಂದ ಅಂತ್ಯದವರೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಘರ್ಜಿಸಿದ ಕೆ.ಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುತ್ತಿದ್ದಂತೆ ಸಂಭ್ರಮಿಸಿದ ರೀತಿ ಮಾತ್ರ ಎಲ್ಲರೂ ನೆನಪಿಟ್ಟುಕೊಳ್ಳುವಂತೆ ಮಾಡಿದೆ.

ಆರ್ಸಿಬಿ ನೀಡಿದ್ದ 164 ರನ್ಗಳ ಟಾರ್ಗೆಟ್ಅನ್ನು ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್ನಲ್ಲಿ ಮುಗಿಸಿ ಗೆಲುವನ್ನು ಸಂಭ್ರಮಿಸಿತು. ಕೆ.ಎಲ್ ರಾಹುಲ್ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಬಾರಿಸಿ 93 ರನ್ ಪಡೆದುಕೊಂಡರು. ಹೀಗಾಗಿ ಪಂದ್ಯದ ಬಳಿಕ ಗೇಮ್ ಫಿನಿಶರ್ ಕೆ.ಎಲ್ ರಾಹುಲ್ ಸಂಭ್ರಮಾಚರಣೆ ಎಲ್ಲರ ಗಮನ ಸೆಳೆಯಿತು. ಇದು ನನ್ನ ತವರು, ಇದು ನನ್ನ ಮೈದಾನ, ಇದು ನನ್ನೂರು ಎನ್ನುವಂತೆ ಸನ್ನೆ ಮಾಡಿದ ಕನ್ನಡಿಗ ರಾಹುಲ್ ಬಳಿಕ ಬ್ಯಾಟ್ನಲ್ಲಿ ವೃತ್ತ ಎಳೆದು ನನ್ನ ಮಣ್ಣಿದು ಎನ್ನುವ ರೀತಿಯಲ್ಲಿ ಸಂಭ್ರಮಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಎಲ್ಲಾ ಪಂದ್ಯದಲ್ಲಿ ಗೆಲುವು ಕಂಡಿದ್ದರೂ ಕೂಡ ಕೆ.ಎಲ್ ರಾಹುಲ್, ಆರ್ಸಿಬಿ ವಿರುದ್ಧ ಬೆಂಗಳೂರಿನಲ್ಲಿ ಗೆದ್ದ ಸಂಭ್ರಮ ವಿಶೇಷವಾಗಿದ್ದು, ಇದಕ್ಕೆ ಕಾರಣ ಕೂಡ ಇದೆ.
ಎದೆ ಮುಟ್ಟಿ ನೆಲ ತೋರಿಸಿ ಇದು ನನ್ನ ನೆಲ ಎಂದು ಕೆ.ಎಲ್ ರಾಹುಲ್ ಚಿನ್ನಸ್ವಾಮಿ ಮೈದಾನದಲ್ಲಿ ಉತ್ತರ ಕೊಟ್ಟಿದ್ದು ಮತ್ಯಾರಿಗೂ ಅಲ್ಲ ಅದು ಆರ್ಸಿಬಿ ಫ್ರಾಂಚೈಸಿಗೆ. ಹೌದು ಈ ಹಿಂದೆ ಆರ್ಸಿಬಿಯಲ್ಲೇ ಆಡುತ್ತಿದ್ದ ಕೆ.ಎಲ್ ರಾಹುಲ್ ಅವರನ್ನು ಒಂದೆರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಲಿಲ್ಲ ಎನ್ನುವ ಕಾರಣಕ್ಕೆ ಆರ್ಸಿಬಿ ಫ್ರಾಂಚೈಸಿ ನಿರ್ಲಕ್ಷಿಸಿತ್ತು. ಅಲ್ಲದೇ ಮೈದಾನದಿಂದ ಬರುತ್ತಿದ್ದಂತೆ ನಿಂದನೆಗೊಳಗಾಗಿ ರಾಹುಲ್ ಕಣ್ಣೀರು ಹಾಕಿದ್ದ ಪ್ರಸಂಗಗಳು ಕೂಡ ನಡೆದಿದ್ದವು. ಈ ಹಿಂದೆ ಹಾಗೂ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ತನ್ನನ್ನು ಕಡೆಗಣಿಸಿದ ಆರ್ಸಿಬಿ ಫ್ರಾಂಚೈಸಿಗೆ ರಾಹುಲ್ ನಿನ್ನೆ ತಕ್ಕ ಉತ್ತರ ನೀಡಿದರು.

ಸದ್ಯ ಕೆ.ಎಲ್ ರಾಹುಲ್ ಹಿಂದಿನ ವಿಡಿಯೋಗಳು ಹಾಗೂ ನಿನ್ನೆ ಮೈದಾನದಲ್ಲಿ ಘರ್ಷಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆರ್ಸಿಬಿ ಫ್ರಾಂಚೈಸಿ ಪ್ರತಿ ಬಾರಿ ಕನ್ನಡಿಗರನ್ನು ನಿರ್ಲಕ್ಷಿಸಿದ ಕರ್ಮದ ಫಲ ಇದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.












Click it and Unblock the Notifications