RCB ತಂಡ ಖರೀದಿಸಲು ಮುಂದಾದ್ರಾ ಡಿಕೆ ಶಿವಕುಮಾರ್? ಏನಿದು ಹೊಸ ಚರ್ಚೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಚೊಚ್ಚಲ ಐಪಿಎಲ್ ಕಪ್ ಗೆದ್ದು ಅಭಿಮಾನಿಗಳಿಗೆ ಅರ್ಪಿಸಿದೆ. ಅಭಿಮಾನ ಮೆರೆಯಲು ಹೋದವರು ಅಜಾಗರೂಕತೆಯಿಂದ ಜೀವ ಬಿಟ್ಟಿದ್ದಾರೆ. ಈ ದುರಂತ ಇನ್ನೂ ಎಲ್ಲರ ಕಣ್ಣಮುಂದೆಯೇ ಇದೆ. ಆದರೆ, ಮತ್ತೊಂದೆಡೆ ಆರ್ಸಿಬಿ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದೆ. ಆರ್ಸಿಬಿ ತಂಡವನ್ನ ಕರ್ನಾಟಕದ ಖ್ಯಾತ ರಾಜಕಾರಣಿಯೊಬ್ಬರು ಖರೀದಿ ಮಾಡಲಿದ್ದಾರೆ ಎಂಬ ವಿಚಾರ ಸದ್ದು ಮಾಡುತ್ತಿದೆ. ದೇಶದಲ್ಲೇ ಶ್ರೀಮಂತ ರಾಜಕಾರಣಿಗಳ ಪಟ್ಟಿಯಲ್ಲಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರ್ನಾಟಕದ ನೆಚ್ಚಿನ ಆರ್ಸಿಬಿ ತಂಡ ಖರೀದಿ ಮಾಡಲಿದ್ದಾರೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರ ಕಾರಣ, ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಕಾರಣ ಎಂದು ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ. ಮತ್ತೊಂದೆಡೆ ರಾಜಕಾರಣಿ ಹಾಗೂ ಉದ್ಯಮಿಯೂ ಆಗಿರುವ ಡಿಕೆ.ಶಿವಕುಮಾರ್ ಅವರು ಆರ್ಸಿಬಿ ತಂಡವನ್ನೇ ಖರೀದಿ ಮಾಡಲಿದ್ದಾರೆ ಎಂದು ಹಲವೆಡೆ ಸುದ್ದಿ ಹರಿದಾಡುತ್ತಿದೆ. ಈ ವಿಚಾರಕ್ಕೆ ಪುಷ್ಟಿ ನೀಡುವಂತಹ ಬೆಳವಣಿಗೆಗಳು ಇತ್ತೀಚೆಗೆ ನಡೆದಿದೆ. ಕ್ರಿಕೆಟ್ ಮೇಲೆ ಅಪಾರ ಆಸಕ್ತಿ ಹೊಂದಿರುವ ಡಿಕೆಶಿ ಅವರೇ ಕನ್ನಡಿಗರ ನೆಚ್ಚಿನ ಆರ್ಸಿಬಿ ತಂಡ ಖರೀದಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು ಈ ಬಾರಿಯ ಐಪಿಎಲ್ ಸೀಸನ್ ಆರಂಭದಿಂದಲೂ ಡಿಕೆ ಶಿವಕುಮಾರ್ ಅವರು ಆರ್ಸಿಬಿ ತಂಡವನ್ನು ಬೆನ್ನುತಟ್ಟುತ್ತಾ ಉತ್ಸಾಹ ಮೆರೆದಿದ್ದರು. ಪ್ರತಿ ಮ್ಯಾಚ್ ಗೆದ್ದಾಗಲೂ ಸಂಭ್ರಮಿಸಿದ್ದರು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮ್ಯಾಚ್ ನಡೆದಾಗ ಖುದ್ದು ತೆರಳಿ ವೀಕ್ಷಿಸಿದ್ದರು. ಆರ್ಸಿಬಿ ತಂಡವನ್ನು ಆಪ್ತವಾಗಿ ನಮ್ ಹುಡುಗ್ರು ಎಂದು ಕರೀತಿದ್ರು ಡಿಕೆ ಶಿವಕುಮಾರ್. ಇದೆನ್ನೆಲ್ಲ ಕಂಡವರು ಮೊದಲಿಗೆ ಎಲ್ಲರೂ ಇದನ್ನ ಮಾಡುವುದೇ ಎಂದಿಕೊಂಡಿದ್ದರು, ಕೆಲವರು ಪ್ರಚಾರಕ್ಕಾಗಿ ಇದೆಲ್ಲ ಮಾಡ್ತಾರೆ ಬಿಡಿ, ಎಂದು ತಲೆಗೆ ಹಾಕಿಕೊಂಡಿರಲಿಲ್ಲ.
ಮ್ಯಾಚ್ ಗೆದ್ದ ಮೇಲೆ ಡಿಕೆಶಿ ನಡೆ ಅಚ್ಚರಿ
ಆರ್ಸಿಬಿ ತಂಡವು ದೂರದ ಅಹಮದಾಬಾದ್ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೊಚ್ಚಲ ಕಪ್ ಗೆದ್ದು ಬೀಗಿತ್ತು. ಆ ಕ್ಷಣದಿಂದಲೇ ಡಿಕೆ.ಶಿವಕುಮಾರ್ ಅವರ ಉತ್ಸಾಹ ಇಮ್ಮಡಿಯಾಗಿತ್ತು. ತಡರಾತ್ರಿವರೆಗೆ ಆರ್ಸಿಬಿ ಜೆರ್ಸಿ ತೊಟ್ಟು ಪಂದ್ಯ ವೀಕ್ಷಿಸಿದ್ದ ಅವರು, ಆರ್ಸಿಬಿಯ ದೊಡ್ಡ ಅಭಿಮಾನಿಯಂತೆ ಕಾಣಿಸಿಕೊಂಡಿದ್ದರು. ಇನ್ನು ಮೊದಲೇ ನಾನು ಕರ್ನಾಟಕದ ಮುಖ್ಯಮಂತ್ರಿ, ನಮ್ ಹುಡುಗ್ರುಗೆ ನನ್ ಹವಾ ತೋರಿಸೋಣ ಎಂದು ಸೀದಾ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಖುದ್ದಾಗಿ ತೆರಳಿ ಆರ್ಸಿಬಿ ಆಟಗಾರರನ್ನ ತವರಿಗೆ ವೆಲ್ಕಮ್ ಮಾಡಿದ್ದರು. ತಮ್ಮ ಕಾರಿನಲ್ಲಿ ಆರ್ಸಿಬಿ ತಂಡದ ಬಾವುಟ ಹಿಡಿದು ಬೆಂಗಳೂರಿನ ಬೀದಿಗಳಲ್ಲಿ ಸುತ್ತಾಡಿದರು. ಬಳಿಕ ವಿಧಾನಸೌಧದ ಬಳಿಗೆ ಆರ್ಸಿಬಿ ಪಡೆಯನ್ನು ಕರೆದೊಯ್ದು ಭಾರೀ ಆತಿಥ್ಯ ನೀಡಿದ್ದರು. ಇದನ್ನ ನೋಡಿದ ಹಲವರು ಡಿಕೆಶಿ ಅವರು ಆರ್ಸಿಬಿ ತಂಡವನ್ನು ಖರೀದಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳಲು ಶುರುಮಾಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂಗೂ ತೆರಳಿ ಆರ್ಸಿಬಿ ಕಪ್ ಜೊತೆಗೆ ಡಿಕೆ ಶಿವಕುಮಾರ್ ಅವರು ಫೋಟೋಗೆ ಪೋಸ್ ಕೂಡ ಕೊಟ್ಟಿದ್ದಾರೆ. ಆರ್ಸಿಬಿ ಆಟಗಾರರೊಂದಿಗೆ ನಗುತ್ತಾ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ ಡಿಕೆಶಿ.
1,413 ಕೋಟಿ ರೂ. ಆಸ್ತಿಯ ಒಡೆಯನಿಗೆ ಇದೊಂದು ಲೆಕ್ಕನಾ?
ಹೌದು, ಡಿಕೆ ಶಿವಕುಮಾರ್ ಅವರು ರಾಜಕಾರಣಿ ಮಾತ್ರವಲ್ಲ, ದೊಡ್ಡ ಉದ್ಯಮಿ ಕೂಡ ಹೌದು. ರಾಜಕಾರಣ ಹೊರತುಪಡಿಸಿ ಅವರು ಉದ್ಯಮದಲ್ಲೂ ತಮ್ಮದೇ ಹವಾ ಇಟ್ಟಿದ್ದಾರೆ. ಈ ಕಾರಣದಿಂದಲೇ ಇಡೀ ದೇಶದಲ್ಲೇ ಅತೀ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಡಿಕೆ ಶಿವಕುಮಾರ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆಯ ವರದಿ ಪ್ರಕಾರ ಡಿಕೆ ಶಿವಕುಮಾರ್ ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 1,413 ಕೋಟಿ ರೂಪಾಯಿ ಎಂದು ಉಲ್ಲೇಖಿಸಿದೆ. ಹಾಗಾಗಿ ಕೋಟಿಗಳ ಒಡೆಯ ಡಿಕೆ ಶಿವಕುಮಾರ್ ಅವರು ಆರ್ಸಿಬಿ ತಂಡ ಖರೀದಿಸಿದರೂ ಅಚ್ಚರಿ ಪಡುವುದೇನಿಲ್ಲ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಅವರು ಆರ್ಸಿಬಿ ಟೀಂ ಖರೀದಿಸಿದರೆ ಸಿಎಂ ಆಗೋದು ಇನ್ನೂ ಸುಲಭ ಎಂದೂ ಹೇಳುತ್ತಿದ್ದಾರೆ.
ಮಾಧ್ಯಮದವರು ಕೂಡ ಇದೇ ಪ್ರಶ್ನೆಯನ್ನು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಕೇಳಿದಾಗ, ಆರ್ಸಿಬಿ ತಂಡವೇನು? ಏನು ಬೇಕಾದರೂ ಖರೀದಿ ಮಾಡುತ್ತಾರೆ ಬಿಡಿ ಎಂದು ಹೇಳಿದ್ದಾರೆ. ಅಲ್ಲಿ ಕಾಲ್ತುಳಿತ ಸಂಭವಿಸಿದರೂ ಡಿ.ಕೆ.ಶಿವಕುಮಾರ್ ಮೈದಾನಕ್ಕೆ ಹೋಗಿ ಅಲ್ಲಿ ಕಪ್ಗೆ ಮುತ್ತಿಕ್ಕುತ್ತಿದ್ದರು ಎಂದು ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.












Click it and Unblock the Notifications