Champions Trophy: ಕನ್ನಡಿಗರ ಕಡೆಗಣಿಸಿದ ಬಿಸಿಸಿಐ! ದೇಶೀಯ ಕ್ರಿಕೆಟ್ನಲ್ಲಿ ಆಡುವುದೇ ವ್ಯರ್ಥವಾ?
ಅದೊಂದು ಕಾಲವಿತ್ತು ಭಾರತ ತಂಡದಲ್ಲಿ ಕನ್ನಡಿಗರ ಪ್ರಾಬಲ್ಯವಿತ್ತು, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಅವರಂತಹ ಆಟಗಾರರು ತಂಡದಲ್ಲಿರುತ್ತಿದ್ದರು, ಆದರೆ ಈಗ ಎಂತಹ ಪ್ರತಿಭಾವಂತ ಆಟಗಾರರು ಇದ್ದರೂ ಭಾರತ ತಂಡದಲ್ಲಿ ಅವಕಾಶ ಸಿಗುವುದೇ ಕಷ್ಟವಾಗಿದೆ.
ಶನಿವಾರ ಬಿಸಿಸಿಐ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಆಯ್ಕೆ ಮಾಡಿದ್ದು ಕನ್ನಡಿಗರ ಕಡೆಗಣನೆ ಮುಂದುವರೆಸಿದೆ. ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿ ಬಳಿಕ ತಂಡ ಪ್ರಕಟಿಸುವುದಾಗಿ ಬಿಸಿಸಿಐ ಹೇಳಿದ್ದರಿಂದ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಟೀಂ ಇಂಡಿಯಾ ಸೇರುವ ಕನಸು ಕಂಡಿದ್ದರು. ಆದರೆ ಬಿಸಿಸಿಐ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಕಡೆಗಣಿಸಿದೆ.

ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿ ಕರ್ನಾಟಕದ ಆಟಗಾರರೇ ಇದ್ದಾರೆ. ಕರ್ನಾಟಕ ತಂಡದಲ್ಲಿ ಅವಕಾಶ ಸಿಗದೆ ವಿದರ್ಭ ತಂಡ ಸೇರಿರುವ ಕರುಣ್ ನಾಯರ್ 7 ಇನ್ನಿಂಗ್ಸ್ಗಳಲ್ಲಿ 752 ರನ್ ಗಳಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ. 125.96 ಸ್ಟ್ರೈಕ್ರೇಟ್ ಹೊಂದಿದ್ದು, 89 ಬೌಂಡರಿ 16 ಸಿಕ್ಸರ್ ಬಾರಿಸಿದ್ದಾರೆ.
ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿರುವ ಮಯಾಂಕ್ ಅಗರ್ವಾಲ್ 9 ಇನ್ನಿಂಗ್ಸ್ಗಳಲ್ಲಿ 619 ರನ್ ಗಳಿಸಿದ್ದಾರೆ. 103 ಸರಾಸರಿ ಹೊಂದಿದ್ದು 109 ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 67 ಬೌಂಡರಿ 18 ಸಿಕ್ಸರ್ ಬಾರಿಸಿದ್ದಾರೆ.
ಉತ್ತಮ ಪ್ರದರ್ಶನ ನೀಡಿದ್ದರೂ ಕಡೆಗಣನೆ
ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಟೀಂ ಇಂಡಿಯಾದಲ್ಲಿ ಆಡಲು ಪರಿಗಣಿಸುವುದು ಮೊದಲಿನ ವಾಡಿಕೆಯಾಗಿತ್ತು. ಆದರೆ ಇತ್ತೀಚೆಗೆ ಐಪಿಎಲ್ ಮಾತ್ರವೇ ಮಾನದಂಡವಾ ಎನ್ನುವ ಅನುಮಾನ ಮೂಡಿದೆ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಸಿಗುವ ಮಾನ್ಯತೆ, ದೇಶೀಯ ಕ್ರಿಕೆಟ್ನಲ್ಲಿ ಪ್ರದರ್ಶನ ನೀಡಿದವರಿಗೆ ಸಿಗುತ್ತಿಲ್ಲ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್ ಉತ್ತಮ ಫಾರ್ಮ್ನಲ್ಲಿ ಇಲ್ಲದೇ ಇದ್ದರೂ ತಂಡದಲ್ಲಿ ಅವಕಾಶ ಸಿಗುತ್ತಲೇ ಇದೆ. ದೇಶಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದವರನ್ನು ಆಯ್ಕೆಗೆ ಪರಿಗಣಿಸದೇ ಕಡೆಗಣಿಸಲಾಗಿದೆ.
ಬಿಸಿಸಿಐ ಬೇಕಂತಲೇ ಕರ್ನಾಟಕದ ಆಟಗಾರರನ್ನು ಕಡೆಗಣಿಸುತ್ತಿದೆ ಎನ್ನುವ ಅಸಮಾಧಾನ ಅಭಿಮಾನಿಗಳದ್ದಾಗಿದೆ. ಐಸಿಸಿ ಪಂದ್ಯಾವಳಿಯಲ್ಲಿ ಪಂತ್ ಉತ್ತಮ ಪ್ರದರ್ಶನ ನೀಡದೇ ಇದ್ದರೂ ಪದೇ ಪದೇ ಪಂತ್ಗೆ ಅವಕಾಶ ಸಿಗುತ್ತಿರುವುದು ಹೇಗೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications