ICC World Cup: 2019ರ ಧೋನಿ ಕಣ್ಣೀರಿಗೆ ಬೆಲೆ ಕಟ್ಟಿದ ನ್ಯೂಜಿಲೆಂಡ್!
ಭಾರತ ತಂಡ ಇಂದು ನ್ಯೂಜಿಲೆಂಡ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಆದ್ರೆ ಇದೇ ದಿನಕ್ಕಾಗಿ ಭಾರತ ತಂಡ ಬರೋಬ್ಬರಿ 4 ವರ್ಷದಿಂದ ಉಸಿರು ಬಿಗಿಹಿಡಿದು ಕಾದಿತ್ತು ಅಂತಾ ಹೇಳಿದರೆ ನಂಬುತ್ತೀರಾ? ಯಾಕಂದ್ರೆ 2019ರಲ್ಲಿ ಇದೇ ನ್ಯೂಜಿಲೆಂಡ್ ಟೀಂ ಮೇಲೆ ಸೆಮಿಫೈನಲ್ ಪಂದ್ಯ ಆಡಿದ್ದ ಭಾರತ ತಂಡ 18 ರನ್ಗಳ ಅಂತರದಲ್ಲಿ ಸೋತುಬಿಟ್ಟಿತು. ಆ ಸಮಯದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಡಾಂಗಣದಲ್ಲೇ ಕಣ್ಣೀರು ಹಾಕಿಬಿಟ್ಟರು.
9 ಜುಲೈ 2019 ರಂದು ಈ ಪಂದ್ಯ ನಡೆದಿತ್ತು, ನ್ಯೂಜಿಲೆಂಡ್ ತಂಡ ನೀಡಿದ್ದ 240 ರನ್ ಗುರಿ ಬೆನ್ನು ಹತ್ತಿದ್ದ ಭಾರತ ತಂಡ 221 ರನ್ಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತ್ತು. ಈ ಸಮಯದಲ್ಲೇ ಶತಕೋಟಿ ಭಾರತೀಯರ ಹೃದಯ ನರಳಿತ್ತು. ಯಾಕಂದ್ರೆ ಭಾರತ ತಂಡಕ್ಕೆ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಸೇರಿದಂತೆ ಚಾಂಪಿಯನ್ಸ್ ಟ್ರೋಫಿ ಸಮೇತ 'ಐಸಿಸಿ' ಆಡಿಸುವ ಎಲ್ಲಾ ಮಹತ್ವದ ಟೂರ್ನಿಗಳನ್ನು ಗೆಲ್ಲಿಸಿಕೊಟ್ಟಿದ್ದ ಧೋನಿ ಅತ್ತುಬಿಟ್ಟರು. ಈ ಅಳು ಭಾರತೀಯರ ಹೃದಯವನ್ನು ಭಾರ ಮಾಡಿತ್ತು. ಹೀಗೆ 4 ವರ್ಷದ ಹಿಂದೆ ನಡೆದಿದ್ದ ಆ ಘಟನೆಗೆ ಇಂದು ಭಾರತ ರಿವೇಂಜ್ ತೆಗೆದುಕೊಂಡಿದೆ. ಅಂದು ನಮ್ಮ ವಿರುದ್ಧ ಗೆಲುವು ಕಂಡು ಬೀಗಿದ್ದ ಕಿವೀಸ್ ಪಡೆಯ ಕಿವಿ ಹಿಂಡಿ ಇಂದು ಮನೆಗೆ ಕಳುಹಿಸಿದೆ.

ಭಾರತಕ್ಕೆ ಸುಲಭದ ಜಯ ಸಿಗಲಿಲ್ಲ!
ಹೌದು ಭಾರತ ಇಂದು ನ್ಯೂಜಿಲೆಂಡ್ ತಂಡದ ವಿರುದ್ಧ ಗೆದ್ದು 2019ರ ಸೋಲಿನ ಸೇಡನ್ನ ತೀರಿಸಿಕೊಳ್ಳಲು ಸಿದ್ಧವಾಗಿತ್ತು. ಹೀಗಾಗಿಯೇ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ಭರ್ಜರಿ 397 ರನ್ ಗಳಿಸಿ 398 ರನ್ಗಳ ಬೃಹತ್ ಗುರಿ ನೀಡಿತ್ತು. ಇಷ್ಟಾದ್ರೂ ಸುಲಭವಾಗಿ ಸೋಲು ಒಪ್ಪಿಕೊಳ್ಳದ ನ್ಯೂಜಿಲೆಂಡ್ ತಂಡ, ಭಾರತದ ವಿರುದ್ಧ ಭರ್ಜರಿ ಹೋರಾಟವನ್ನ ಪ್ರದರ್ಶನ ಮಾಡಿತ್ತು. ಆದರೆ ಪಂದ್ಯದ ಅಂತಿಮ ಹಂತದಲ್ಲಿ ಕಿವೀಸ್ ಪಡೆಗೆ ಭಾರತವು ಖೆಡ್ಡಾ ತೋಡಿ, ನ್ಯೂಜಿಲೆಂಡ್ ತಂಡವನ್ನು ಆಲೌಟ್ ಮಾಡಿತು.
ಕೊನೆಯ ತನಕ ಭರ್ಜರಿ ಕುತೂಹಲ
398 ರನ್ ಬೃಹತ್ ಗುರಿ ನೀಡಿದ್ರೂ ನ್ಯೂಜಿಲೆಂಡ್ ತಂಡ ಹೆದರಲೇ ಇಲ್ಲ. ಬದಲಾಗಿ ಭಾರತ ತಂಡಕ್ಕೆ ಪಂದ್ಯದ ಅಂತ್ಯದ ತನಕವೂ ಕಾಡಿತ್ತು. ಅದರಲ್ಲೂ ನ್ಯೂಜಿಲೆಂಡ್ ಟೀಂನ ನಾಯಕ ಕೇನ್ ವಿಲಿಯಮ್ಸನ್ & ಡೇರಿಲ್ ಮಿಚೆಲ್ ಜೋಡಿಯ ಭರ್ಜರಿ 181 ರನ್ ಕೊಡುಗೆ, ಸೋಲಿನ ವಾತಾವರಣ ಸೃಷ್ಟಿ ಮಾಡಿತ್ತು. ಆದರೆ ಭಾರತದ ಬೆಸ್ಟ್ ಬೌಲರ್ ಮೊಹಮ್ಮದ್ ಶಮಿ ಜೋಡಿ ಬೇರೆ ಮಾಡಿ ಭಾರತಕ್ಕೆ ಬಲ ತುಂಬಿದರು. ಮೊದ್ಲು ಕೇನ್ ವಿಲಿಯಮ್ಸನ್ 3ನೇ ವಿಕೆಟ್ ಆಗಿ ಬಲಿಯಾದರು. ಆ ನಂತರವೇ ಮತ್ತೆ ಮ್ಯಾಚ್ ಭಾರತದ ಕೈಗೆ ಬಂದಿತ್ತು.

ಒಟ್ನಲ್ಲಿ ಭಾರತ ತಂಡವು ಇಂದು ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ, 2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶ ಮಾಡಿದೆ. ಆದರೆ ಇಂದು ನಡೆದ ಪಂದ್ಯದಲ್ಲಿ, ಭಾರತದ ಫೀಲ್ಡಿಂಗ್ ಹಾಗೂ ಬೌಲಿಂಗ್ ಕಳಪೆಯಾಗಿತ್ತು ಎನ್ನುವ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿಯೇ ನ್ಯೂಜಿಲೆಂಡ್ ವಿರುದ್ಧ ಮಾಡಿದ ತಪ್ಪುಗಳು ಭಾರತದ ಆಟಗಾರರಿಗೆ ಪಾಠವಾಗಬೇಕು, ಈ ಮೂಲಕ ಫೈನಲ್ ಪಂದ್ಯದಲ್ಲಿ ಮೈಮರೆತು ಆಡಲೇ ಬಾರದು ಅಂತಾ ಅಭಿಮಾನಿಗಳು ಸಲಹೆ ನೀಡುತ್ತಿದ್ದಾರೆ.
ಇಷ್ಟಾದರೂ ನ್ಯೂಜಿಲೆಂಡ್ ವಿರುದ್ಧದ ಈ ಗೆಲುವು ಭಾರತಕ್ಕೆ ಹಾಗೂ ಭಾರತದ ಕ್ರಿಕೆಟ್ ಇತಿಹಾಸಕ್ಕೆ ಹೊಸ ಗರಿ ತಂದುಕೊಟ್ಟಿದೆ. ಅಲ್ಲದೆ 3ನೇ ಬಾರಿಗೆ ಐಸಿಸಿ ವಿಶ್ವಕಪ್ ಗೆಲ್ಲಲು ಭಾರತಕ್ಕೆ ಇದು ಸಕಾಲ, ಹೀಗಾಗಿ ಇನ್ನು ಒಂದೇ ಒಂದು ಮೆಟ್ಟಿಲು ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಭಾರತದ ಆಟಗಾರರು ಮೈಮರೆಯದೆ ಗೆಲುವಿನ ದಡ ಸೇರಿ, ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನ ಮತ್ತೆ ಭಾರತಕ್ಕೆ ತರಬೇಕಿದೆ.












Click it and Unblock the Notifications